AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Purnima 2022: ಗುರು ಪೂರ್ಣಿಮೆಯನ್ನು ಯಾಕೆ ಆಚರಿಸುತ್ತೇವೆ?; ಈ ದಿನದ ಮಹತ್ವವೇನು?

ಗುರು ಪೂರ್ಣಿಮೆಯ ದಿನದಂದು ಗುರುಗಳನ್ನು ಪೂಜಿಸಿ ಗೌರವಿಸುವ ಸಂಪ್ರದಾಯವಿದೆ. ಈ ಹುಣ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ.

Guru Purnima 2022: ಗುರು ಪೂರ್ಣಿಮೆಯನ್ನು ಯಾಕೆ ಆಚರಿಸುತ್ತೇವೆ?; ಈ ದಿನದ ಮಹತ್ವವೇನು?
ಗುರುಪೂರ್ಣಿಮಾImage Credit source: India.com
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 13, 2022 | 10:36 AM

ಹಿಂದೂ ಧರ್ಮದಲ್ಲಿ ಗುರುಪೂರ್ಣಿಮೆ (Guru Purnima) ಬಹಳ ಪವಿತ್ರವಾದ ದಿನ. ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಇಂದು ಮಹಾಭಾರತ ರಚಿಸಿರುವ ವೇದ ವ್ಯಾಸರ ಹುಟ್ಟಿದ ದಿನ. ಗುರುವನ್ನು ದೇವರಂತೆ ಪೂಜಿಸುವ ಸಂಸ್ಕೃತಿ ನಮ್ಮ ದೇಶದಲ್ಲಿದೆ. ಹಾಗಾಗಿ, ಈ ಗುರು ಪೂರ್ಣಿಮೆ ಬಹಳ ಮಹತ್ವದ ದಿನವಾಗಿದೆ. ಈ ದಿನ ನೀವು ಏನನ್ನೇ ಕೇಳಿಕೊಂಡರೂ ಅದು ಈಡೇರುತ್ತದೆ ಎಂದು ಹಿರಿಯರು ನಂಬುತ್ತಿದ್ದರು.

ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಪುರಾಣಗಳನ್ನು ರಚಿಸಿದ ಮತ್ತು ವೇದಗಳನ್ನು ವಿಭಜಿಸಿದ ವೇದವ್ಯಾಸರು ಈ ದಿನ ಜನಿಸಿದರೆಂದು ಹೇಳಲಾಗುತ್ತದೆ. ಈ ದಿನವನ್ನು ವ್ಯಾಸ ಜಯಂತಿ ಎಂದೂ ಕರೆಯುತ್ತಾರೆ. ಈ ವರ್ಷ ಇಂದು (ಜುಲೈ 13) ಗುರು ಪೂರ್ಣಿಮಾ ಬಂದಿದೆ. ಈ ದಿನ ಗುರುಗಳನ್ನು ಪೂಜಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ.

ಗುರು ಪೂರ್ಣಿಮೆಯ ದಿನದಂದು ಗುರುಗಳನ್ನು ಪೂಜಿಸಿ ಗೌರವಿಸುವ ಸಂಪ್ರದಾಯವಿದೆ. ಶಾಸ್ತ್ರಗಳಲ್ಲಿಯೂ ಗುರುವಿಗೆ ದೇವರಿಗಿಂತ ಹೆಚ್ಚಿನ ಸ್ಥಾನಮಾನ ನೀಡಲಾಗಿದೆ. ಈ ದಿನ ಜನಿಸಿದ ವೇದವ್ಯಾಸರು ಗ್ರಂಥಗಳನ್ನು ರಚಿಸುವ ಮೂಲಕ ಈ ಜಗತ್ತಿನಲ್ಲಿ ಜ್ಞಾನವನ್ನು ಹರಡಿ, ಸತ್ಯದ ಮಾರ್ಗವನ್ನು ತೋರಿಸಿದರು.

ಇದನ್ನೂ ಓದಿ: Guru Purnima 2022: ಗುರು ಪೂರ್ಣಿಮಾದಂದು ಅಂಧಕಾರದಿಂದ ಬೆಳಕಿನ ದಾರಿ ತೋರಿಸಿದ ಗುರುವನ್ನು ಸ್ಮರಿಸಬೇಕು

ಈ ಹುಣ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ವ್ಯಾಸರು ಜ್ಞಾನದ ಸಂಪೂರ್ಣ ವಿದ್ಯೆಯನ್ನು 4 ವೇದಗಳು, ಉಪನಿಷತ್ತುಗಳು, ಉಪವೇದಗಳು, 27 ಸ್ಮೃತಿಗಳು, 27 ಉಪಸ್ಮೃತಿಗಳು ಎಂದು ವರ್ಗೀಕರಿಸಲಾಗಿದೆ. ಆಯುರ್ವೇದದಿಂದ ವಾಸ್ತುಶಿಲ್ಪದವರೆಗೆ, ರಸವಿದ್ಯೆಯಿಂದ ಔಷಧದವರೆಗೆ ಜೀವನದ ಪ್ರತಿಯೊಂದು ಅಂಶಕ್ಕೂ ಸಂಬಂಧಿಸಿದ ಜ್ಞಾನ ಇದರಲ್ಲಿದೆ. ಈ ದಿನ ನಾವು ಮಾನವ ಜನಾಂಗದ ಯೋಗಕ್ಷೇಮಕ್ಕಾಗಿ ಈ ಭೂಮಿಯ ಮೇಲೆ ಇರುವವರೆಲ್ಲರ ಕೊಡುಗೆಯನ್ನು ಸ್ಮರಿಸುತ್ತೇವೆ. ಅವರ ಸಾಧನೆಗಳನ್ನು ನೆನಪಿಸಿಕೊಳ್ಳುತ್ತೇವೆ.

‘ಗುರು’ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ‘ಗು’ ಎಂದರೆ ಕತ್ತಲೆ ಮತ್ತು ‘ರು’ ಎಂದರೆ ದೂರ ಮಾಡು ಎಂದರ್ಥ. ಅಂದರೆ ಕತ್ತಲೆಯನ್ನು ತೊರೆದು ಜೀವನದುದ್ದಕ್ಕೂ ಸಂತೋಷವೇ ಬೆಳಗಲಿ ಎಂದರ್ಥ. ಸಾಂಪ್ರದಾಯಿಕವಾಗಿ ಈ ದಿನವನ್ನು ಭಾರತ, ನೇಪಾಳ ಮತ್ತು ಭೂತಾನ್‌ನಲ್ಲಿ ಹಿಂದೂಗಳು, ಬೌದ್ಧರು ಮತ್ತು ಜೈನರು ಆಚರಿಸುತ್ತಾರೆ. ಗುರು ಪೂರ್ಣಿಮವನ್ನು ಬುದ್ಧ ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ತಿಂಗಳಲ್ಲಿ ಪೂರ್ಣಿಮಾ ಅಂದರೆ ಹುಣ್ಣಿಮೆಯ ದಿನದಂದು ಬರುತ್ತದೆ.

ಗುರು ಪೂರ್ಣಿಮಾ ಬೌದ್ಧರಿಗೆ ಶುಭ ತರುವ ಹಬ್ಬವಾಗಿದೆ. ಏಕೆಂದರೆ ಈ ಶುಭ ದಿನದಂದು ಭಗವಾನ್ ಬುದ್ಧ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಎಂದು ಇತಿಹಾಸ ತಿಳಿಸಿದೆ. ಅದಕ್ಕಾಗಿಯೇ ಈ ದಿನವನ್ನು ಬುದ್ಧ ಪೂರ್ಣಿಮಾ ಎಂದೂ ಕರೆಯುತ್ತಾರೆ.