ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಎಲ್ಲಾ ತಂಡಗಳು ಸರಣಿಗಳನ್ನು ಆಡುತ್ತಿದೆ. ಅತ್ತ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಆಡಿದರೆ, ಇತ್ತ ಟೀಮ್ ಇಂಡಿಯಾ (Team India) ನ್ಯೂಜಿಲೆಂಡ್ ವಿರುದ್ಧ ಸರಣಿ ಆಡುತ್ತಿದೆ. ವಿಶೇಷ ಎಂದರೆ ಈ ಸರಣಿಗಳಲ್ಲಿ ಆಯಾ ತಂಡಗಳ ನಾಯಕರುಗಳು ಕಾಣಿಸಿಕೊಂಡಿದ್ದಾರೆ. ಅಂದರೆ ಆಸ್ಟ್ರೇಲಿಯಾ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದ ಪ್ಯಾಟ್ ಕಮಿನ್ಸ್ ಹಾಗೂ ಇಂಗ್ಲೆಂಡ್ ಕ್ಯಾಪ್ಟನ್ ಜೋಸ್ ಬಟ್ಲರ್ ಮೈದಾನಕ್ಕಿಳಿದಿದ್ದಾರೆ. ಆದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಸಂಪೂರ್ಣ ವಿಶ್ರಾಂತಿ ಪಡೆದಿದ್ದಾರೆ. ಇದನ್ನೇ ಈಗ ಟೀಮ್ ಇಂಡಿಯಾದ ಮಾಜಿ ನಾಯಕ ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.
ಒಂದು ವರ್ಷದ ಹಿಂದೆ ಭಾರತದ ತಂಡದ ಹೊಸ ನಾಯಕರಾಗಿ ರೋಹಿತ್ ಶರ್ಮಾ ಜವಾಬ್ದಾರಿವಹಿಸಿಕೊಂಡಿದ್ದರು. ಆದರೆ ಆ ಬಳಿಕ ಹಿಟ್ಮ್ಯಾನ್ ಟೀಮ್ ಇಂಡಿಯಾವನ್ನು ಏಕದಿನ ಸರಣಿಯಲ್ಲಿ ಮುನ್ನಡೆಸಿದ್ದು ಕೇವಲ 2 ಬಾರಿ ಎಂದರೆ ನಂಬಲೇಬೇಕು. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮಾತ್ರ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದರು.
ಇನ್ನುಳಿದ ಏಕದಿನ ಸರಣಿಗಳಲ್ಲಿ ಭಾರತ ತಂಡವನ್ನು ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಮುನ್ನಡೆಸಿದ್ದಾರೆ. ಅಂದರೆ ಹಿಟ್ಮ್ಯಾನ್ ಕ್ಯಾಪ್ಟನ್ ಆದ ಬಳಿಕ ಶಿಖರ್ ಧವನ್ 7 ಪಂದ್ಯಗಳಲ್ಲಿ ಭಾರತ ತಂಡದ ಸಾರಥ್ಯವಹಿಸಿಕೊಂಡಿದ್ದಾರೆ. ಹಾಗೆಯೇ 6 ಪಂದ್ಯಗಳಲ್ಲಿ ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಂಡಿದ್ದರು. ಅಂದರೆ ಇಲ್ಲಿ ಪೂರ್ಣ ಪ್ರಮಾಣದ ನಾಯಕನಿಗಿಂತ ಹಂಗಾಮಿ ನಾಯಕರುಗಳೇ ಭಾರತ ತಂಡವನ್ನು ಹೆಚ್ಚಿನ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.
ಉಳಿದೆಲ್ಲಾ ಏಕದಿನ ಸರಣಿಗಳ ವೇಳೆ ಗಾಯದ ಹಾಗೂ ವಿಶ್ರಾಂತಿಯ ಕಾರಣ ರೋಹಿತ್ ಶರ್ಮಾ ಹೊರಹೊಗುಳಿದಿದ್ದರು. ಇದೀಗ ಒಂದು ವರ್ಷದ ಅವಧಿಯಲ್ಲಿ ತಂಡದ ನಾಯಕರಾಗಿಯೂ ಅತೀ ಹೆಚ್ಚು ಪಂದ್ಯಗಳಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಅವರ ನಡೆಯ ಬಗ್ಗೆ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಪ್ರಶ್ನೆಗಳೆನ್ನೆತ್ತಿದ್ದಾರೆ.
ಜಗತ್ತಿನ ಇತರೆ ತಂಡಗಳು ಭಾರತದಂತೆ ತಮ್ಮ ನಾಯಕರನ್ನು ಬದಲಾಯಿಸುವುದಿಲ್ಲ. ಶ್ರೀಲಂಕಾದ ದಸುನ್ ಶನಕಾ, ಇಂಗ್ಲೆಂಡ್ನ ಜೋಸ್ ಬಟ್ಲರ್ ಮತ್ತು ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರೆನ್ನೆಲ್ಲಾ ನೋಡಬಹುದು. ಎಲ್ಲರೂ ನಾಯಕರಾದ ಬಳಿಕ ಪೂರ್ಣ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನೀವು ಶ್ರೀಲಂಕಾವನ್ನು ನೋಡಿ, ದಸುನ್ ಶನಕಾ ಅಫ್ಘಾನಿಸ್ತಾನ ವಿರುದ್ಧ ಆಡುತ್ತಿದ್ದಾರೆ. ಇಂಗ್ಲೆಂಡ್ – ಆಸ್ಟ್ರೇಲಿಯಾ ಜೋಸ್ ಬಟ್ಲರ್ ಹಾಗೂ ಪ್ಯಾಟ್ ಕಮಿನ್ಸ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಂದರೆ ಪ್ರಪಂಚದಾದ್ಯಂತದ ಎಲ್ಲಾ ತಂಡಗಳು ತಮ್ಮ ಮೂಲ ನಾಯಕರೊಂದಿಗೆ ಆಡುತ್ತಿದ್ದರೆ, ನಾವು ನಮ್ಮ ನಾಯಕರನ್ನು ಏಕೆ ಬದಲಾಯಿಸುತ್ತೇವೆ? ಎಂಬ ಪ್ರಶ್ನೆಯನ್ನು ಆಕಾಶ್ ಚೋಪ್ರಾ ಮುಂದಿಟ್ಟಿದ್ದಾರೆ.
ನಾಯಕನು ತಂಡವನ್ನು ಕಟ್ಟುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಏಕೆಂದರೆ ನೀವು ತಂಡದೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ. ನೀವು ಪ್ರತಿಯೊಬ್ಬರನ್ನು ಚೆನ್ನಾಗಿ ತಿಳಿದುಕೊಳ್ಳುತ್ತೀರಿ. ಆದರೆ ವೆಸ್ಟ್ ಇಂಡೀಸ್, ಜಿಂಬಾಬ್ವೆ, ಈಗ ನ್ಯೂಜಿಲೆಂಡ್ ಸರಣಿಗಳಿಗೆ ನಮ್ಮ ನಾಯಕ ಅಲಭ್ಯರಾಗಿದ್ದಾರೆ. ಇದೀಗ ಶಿಖರ್ ಧವನ್ ನಾಯಕರಾಗಿದ್ದಾರೆ. ಆದರೆ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಮತ್ತೆ ರೋಹಿತ್ ಶರ್ಮಾ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ತಂಡದಲ್ಲೂ ಬದಲಾವಣೆಯಾಗುತ್ತವೆ. ಮುಖ್ಯವಾಗಿ ಒಂದು ತಂಡದ ಆರಂಭಿಕರಲ್ಲಿ ಆಗಾಗ್ಗೆ ಬದಲಾವಣೆ ಆಗುತ್ತಿರುವುದು ಉತ್ತಮ ಸಂಕೇತವಲ್ಲ.
ಈಗ ಪ್ರಯೋಗ ಮಾಡುವ ಸಮಯ ಕಳೆದುಹೋಗಿದೆ. ರೋಹಿತ್ ಶರ್ಮಾ 2023 ರ ಏಕದಿನ ವಿಶ್ವಕಪ್ಗೆ ನಾಯಕರಾಗಿ ಇರಲಿದ್ದಾರೆ. ಹೀಗಾಗಿ ಕನಿಷ್ಠ ವಿಶ್ರಾಂತಿಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ತಂಡದ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು, ಹಾಗೆಯೇ ಎಲ್ಲಾ ಪಂದ್ಯಗಳನ್ನು ಆಡುತ್ತಿರಬೇಕು. ನಿಮಗೆ ವಿರಾಮ ಅತ್ಯಗತ್ಯವಿದ್ದರೆ ಐಪಿಎಲ್ ಸಮಯದಲ್ಲಿ ತೆಗೆದುಕೊಳ್ಳಿ. ಈಗ ಎಲ್ಲರೂ ಮುಂಬರುವ ವಿಶ್ವಕಪ್ ಗೆಲ್ಲುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಮುಖ್ಯವಾಗಿ ಭಾರತವು 2023 ರ ಏಕದಿನ ವಿಶ್ವಕಪ್ಗಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿಕೊಳ್ಳಬೇಕಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಒಟ್ಟಿನಲ್ಲಿ ನಾಯಕನಾಗಿ ಪದಾರ್ಪಣೆ ಮಾಡಿದ ಬಳಿಕ ಒಂದು ವರ್ಷದ ಅವಧಿಯಲ್ಲಿ ರೋಹಿತ್ ಶರ್ಮಾ ಕೇವಲ 2 ಏಕದಿನ ಸರಣಿಗಳಲ್ಲಿ ಮಾತ್ರ ಟೀಮ್ ಇಂಡಿಯಾವನ್ನು ಮುನ್ನಡೆಸಿರುವುದು ಇದೀಗ ಚರ್ಚಗೆ ಗ್ರಾಸವಾಗಿದೆ.