19-05-2024

IPL 2024: ಆರ್‌ಸಿಬಿ ಗೆಲುವಿಗೆ ಮಾಜಿ ಮಾಲೀಕ ವಿಜಯ್ ಮಲ್ಯ ಹರ್ಷ; ಹೇಳಿದ್ದೇನು?

Author: ಪೃಥ್ವಿ ಶಂಕರ

ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ 27 ರನ್‌ಗಳ ಜಯ ಸಾಧಿಸಿತ್ತು.

ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ ಆಫ್ ತಲುಪಿದ ನಾಲ್ಕನೇ ತಂಡ ಎನಿಸಿಕೊಂಡರೆ, ಇತ್ತ ಸಿಎಸ್​ಕೆ ಸುವರ್ಣಾವಕಾಶವನ್ನು ಕೈಚೆಲ್ಲಿ ಲೀಗ್​ನಿಂದ ಹೊರಬಿತ್ತು.

ವಾಸ್ತವವಾಗಿ ಈ ಸೀಸನ್‌ನಲ್ಲಿ ಆರ್‌ಸಿಬಿ ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿತ್ತು. ಅವರಿಗೆ ಪ್ಲೇಆಫ್ ತಲುಪುವುದು ಕಷ್ಟಕರವೆಂದು ಪರಿಗಣಿಸಲಾಗಿತ್ತು.

ಆದಾಗ್ಯೂ, ಆರ್​ಸಿಬಿ ಲೀಗ್ ಹಂತದ ಕೊನೆಯ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಬಲ ಪುನರಾಗಮನವನ್ನು ಮಾಡಿ, ಪ್ಲೇಆಫ್‌ಗೆ ಪ್ರವೇಶಿಸಿದೆ.

ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದು, ಅದರ ಖಾತೆಯಲ್ಲಿ ಈಗ 14 ಅಂಕಗಳಿವೆ.

ಸದ್ಯ ಆರ್​ಸಿಬಿ ಗೆಲುವಿಗೆ ಇಡೀ ಕ್ರಿಕೆಟ್​ ಲೋಕವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ತಂಡಕ್ಕೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಈ ನಡುವೆ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಕೂಡ ಆರ್‌ಸಿಬಿಯ ಅದ್ಭುತ ಗೆಲುವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಅಭಿನಂದಿಸಿದ್ದಾರೆ.

ಮಲ್ಯ, ‘ಪ್ಲೇಆಫ್‌ಗೆ ಅರ್ಹತೆ ಗಳಿಸಿದ್ದಕ್ಕಾಗಿ ಆರ್​ಸಿಬಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿರಾಶಾದಾಯಕ ಆರಂಭದ ಹೊರತಾಗಿಯೂ ಅಪಾರ ಬದ್ಧತೆ ಮತ್ತು ಅಮೋಘ ಆಟದ ಮೂಲಕ ಸತತ ಗೆಲುವಿನ ಹಾದಿ ಹಿಡಿಯಲಾಗಿದೆ. ಇನ್ನೇನಿದ್ದರೂ ಇದೇ ಹಾದಿಯಲ್ಲಿ ಮುನ್ನುಗ್ಗುತ್ತಾ ಟ್ರೋಫಿ ಗೆಲ್ಲುವುದಷ್ಟೇ ಬಾಕಿ ಎಂದು ಬರೆದುಕೊಂಡಿದ್ದಾರೆ.