ಜನತಾ ದರ್ಶನ: ಜನರ ಕಷ್ಟಗಳಿಗೆ ಕಿವಿಗೊಟ್ಟ ಸಿದ್ದರಾಮಯ್ಯ, ಸ್ಥಳದಲ್ಲೇ ಪರಿಹಾರ

 27 November 2023

ಸಿಎಂ ಸಿದ್ದರಾಮಯ್ಯ ಇವತ್ತು ಜನತಾ ದರ್ಶನ ಹಮ್ಮಿಕೊಂಡಿದ್ದಾರೆ. ಎರಡನೇ ಬಾರಿ ನಡೆಸುತ್ತಿರುವ ಮೊದಲ ಪೂರ್ಣಾವಧಿ ಜನತಾ ದರ್ಶನ ಇದಾಗಿದೆ. ನಾಡಿನ ಪ್ರಜೆಗಳ ಅಹವಾಲುಗಳನ್ನು ಸ್ವೀಕರಿಸಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಮಹದೇವಮ್ಮ ಅವರಿಗೆ ಮಗ ಆಸ್ತಿಯಲ್ಲಿ ಪಾಲು ಕೊಡದೇ ಮೋಸ ಮಾಡಿದ್ದಾನೆ. ವಿಭಾಗ ಪತ್ರವನ್ನು ಕೊಡಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕರೆ ಮಾಡಿ ನ್ಯಾಯ ಕೊಡಿಸುವಂತೆ ಸೂಚಿಸಿದ್ದಾರೆ.

ಅಂಧ ಮಕ್ಕಳ ಶಾಲೆಗೆ ಸಿ.ಎ. ನಿವೇಶನ ಮಂಜೂರಾಗಿದ್ದು, ಇದಕ್ಕಾಗಿ 9 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ್ದಾರೆ. ಇದನ್ನು ಪಾವತಿಸಲು ಶಕ್ತರಿಲ್ಲದ ಕಾರಣ ಹಣ ಪಾವತಿಯಿಂದ ವಿನಾಯಿತಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದು ಸ್ಥಳದಲ್ಲೇ ಪರಿಹಾರ ನೀಡಿದ್ದಾರೆ.

ರಾಜಮ್ಮ ಎನ್ನುವವರು ಜಮೀನು ವಿಚಾರವಾಗಿ ಸಿಎಂಗೆ ಮನವಿ ಮಾಡಿದ್ದು,  ಜಮೀನು ಬಿಡಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಸಿಗೆ ಸೂಚಿಸಿದ್ದಾರೆ.

6 ತಿಂಗಳ ಮಗುವಿನ ಹೃದಯದಲ್ಲಿ ರಂಧ್ರ ಇದ್ದು ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ಸ್ಥಳದಲ್ಲೇ  2 ಲಕ್ಷ ರೂ. ಮಂಜೂರು ಮಾಡಿದ್ದಾರೆ.

ಜಮೀನನ್ನು ಬೈಪಾಸಿಗೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ವೃದ್ಧ ದೂರು ನೀಡಿದ್ದು, ಡಿಸಿಯೊಂದಿಗೆ ಮಾತನಾಡಿದ ಸಿಎಂ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಸಹಸ್ರಾರು ಸಂಖ್ಯೆ ಜನರ ಸಮಸ್ಯೆಗಳು, ಮನವಿಗಳನ್ನು ಪಡೆದು ಸ್ಥಳದಲ್ಲೇ ಪರಿಹಾರ ನೀಡಲಾಗಿದೆ.