29-11-2023

ಮೆಜೆಸ್ಟಿಕ್ ಸೇರಿ ಬೆಂಗಳೂರಿನ ಹಲವೆಡೆ ಮಳೆ

Author: ಗಣಪತಿ ಶರ್ಮ

ಬೆಂಗಳೂರಿನ ಹಲವೆಡೆ ಬುಧವಾರ ಸಂಜೆ ಮಳೆಯಾಗಿದೆ. ಕೆಲವೆಡೆ ತುಂತುರು ಮಳೆಯಾದರೆ ಇನ್ನು ಕೆಲವೆಡೆ ಜೋರು ಸುರಿದಿದೆ.

ಶಾಂತಿನಗರ, ಹೆಬ್ಬಾಳ, ಸದಾಶಿವನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್​​​, ರಾಜಾಜಿನಗರ, ಜಯನಗರ, ಕೋರಮಂಗಲದಲ್ಲೂ ಮಳೆಯಾಗಿದೆ.

ವಿಜಯನಗರ, ಜಯನಗರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ದ್ವಿಚಕ್ರ ವಾಹನ‌ ಸವಾರರು ಪರದಾಡುವಂತಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.

ವಾಯುಭಾರ ಕುಸಿತ ದಕ್ಷಿಣ ಅಂಡಮಾನ್‌ನಲ್ಲಿ ಕೇಂದ್ರೀಕೃತವಾಗಿದ್ದು, ಬಂಗಾಳಕೊಲ್ಲಿಯ ಕಡೆಗೆ ಸಾಗುವ ಸಾಧ್ಯತೆ ಇದೆ.

ಇದು ತೀವ್ರ ಸ್ವರೂಪ ಪಡೆದು ಡಿಸೆಂಬರ್ 5ಕ್ಕೆ ಆಂಧ್ರಪ್ರದೇಶ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದರ ಪರಿಣಾಮದಿಂದ ಕರ್ನಾಟಕದ ಕೆಲವೆಡೆ ಕೂಡ ತುಂತುರು ಮಳೆಯಾಗುವ ಸಾಧ್ಯತೆ ಇದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಉಡುಪಿಯ ಕಡಿರುದ್ಯಾವರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ.