2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ಅನುಭವಿಸಿದ ಸೋಲು ಎಲ್ಲರಿಗೂ ನೋವುಂಟು ಮಾಡಿದೆ. ಟೂರ್ನಿಯುದ್ದಕ್ಕೂ ಒಂದೇ ಒಂದು ಸೋಲು ಕಾಣದೆ ಉತ್ತಮ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಅಂತಿಮ ಫೈನಲ್ ಪಂದ್ಯದಲ್ಲಿ ಅದೃಷ್ಟ ಕೈಹಿಡಿಯಲಿಲ್ಲ. ಟಾಸ್-ಪಂದ್ಯ ಎರಡನ್ನೂ ಸೋತಿತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚೆಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ವಿಶ್ವಕಪ್ ಪರಿಶೀಲನಾ ಸಭೆ ನಡೆಸಿದ್ದು, ಇದರಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಇದರಲ್ಲಿ ಫೈನಲ್ ಸೋಲಿಗೆ ಕೋಚ್ ರಾಹುಲ್ ದ್ರಾವಿಡ್ ಅವರು ಕಾರಣ ತಿಳಿಸಿದ್ದಾರೆ.
ವರದಿಯೊಂದರ ಪ್ರಕಾರ, ಫೈನಲ್ ಪಂದ್ಯದಲ್ಲಿ ಭಾರತದ ಸೋಲಿಗೆ ಪಿಚ್ ಕಾರಣ ಎಂದು ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐ ಮುಂದೆ ನೇರವಾಗಿ ಹೇಳಿದ್ದಾರೆ. ಫೈನಲ್ನಲ್ಲಿ ನಾವು ನಿರೀಕ್ಷಿಸಿದಷ್ಟು ಪಿಚ್ ಸಹಾಯ ಮಾಡಲಿಲ್ಲ. ಪಿಚ್ ಸ್ವಲ್ಪವಾದರೂ ಸಹಾಯ ಮಾಡಿದ್ದರೆ ಸ್ಪಿನ್ನರ್ಗಳು ಅದ್ಭುತಗಳನ್ನು ಮಾಡಬಹುದಿತ್ತು ಮತ್ತು ಟೀಮ್ ಇಂಡಿಯಾ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಬಹುದಿತ್ತು ಎಂದು ಹೇಳಿದ್ದಾರೆ.
"ನಾವು ವಿಶ್ವಕಪ್ ಫೈನಲ್ನಲ್ಲಿ ಸೋತಿದ್ದೇವೆ. ಏಕೆಂದರೆ ನಮಗೆ ಪಿಚ್ನಿಂದ ನಿರೀಕ್ಷಿತ ತಿರುವು ಸಿಗಲಿಲ್ಲ. ಸ್ಪಿನ್ನರ್ಗಳಿಗೆ ಪಿಚ್ ಕೊಂಚ ತಿರುವು ಕೊಡುತ್ತಿದ್ದರೂ ನಾವು ಗೆಲ್ಲುತ್ತಿದ್ದೆವು. ನಾವು ಅದೇ ತಂತ್ರದಲ್ಲಿ ಮೊದಲ 10 ಪಂದ್ಯಗಳನ್ನು ಗೆದ್ದಿದ್ದೇವೆ. ಆದರೆ ಫೈನಲ್ನಲ್ಲಿ ಅದು ಸಾಧ್ಯವಾಗಲಿಲ್ಲ'', ಎಂದು ಹೇಳಿ ಸೋಲಿಗೆ ಪಿಚ್ ಕಾರಣ ಎಂದಿದ್ದಾರೆ ದ್ರಾವಿಡ್.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯವು ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯವನ್ನು ಭಾರತ-ಪಾಕಿಸ್ತಾನ ಪಂದ್ಯ ನಡೆದ ಅದೇ ಪಿಚ್ನಲ್ಲಿ ಆಡಿಸಲಾಯಿತು. ಫೈನಲ್ನಂತಹ ದೊಡ್ಡ ಪಂದ್ಯಗಳಿಗೆ ಹೊಸ ಪಿಚ್ ಬಳಸುವ ಬದಲು, ಇಲ್ಲಿ ಹಳೆಯ ಪಿಚ್ ಅನ್ನು ಬಳಸಲಾಗಿದೆ. ಇದು ಟೀಮ್ ಇಂಡಿಯಾಕ್ಕೆ ಭಾರೀ ಹೊರೆಯಾಗಿ ಪರಿಣಮಿಸಿತು.
ಈ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ವಿಶ್ವಕಪ್ನಲ್ಲಿ ತಂಡದ ಪ್ರದರ್ಶನವು ಸಾಕಷ್ಟು ಅತ್ಯುತ್ತಮವಾಗಿದೆ ಎಂದು ತಂಡದ ಮ್ಯಾನೇಜ್ಮೆಂಟ್ ಹೇಳಿದೆ. ಅದೇ ಸಭೆಯಲ್ಲಿ, ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ವರೆಗೆ ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರೆಯುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದೇ ಸಭೆಯಲ್ಲಿ ಮತ್ತೊಂದು ಮಹತ್ವದ ತೀರ್ಮಾಣ ತೆಗೆದುಕೊಳ್ಳಲಾಗಿದ್ದು, ಟಿ-20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸುವ ಬಗ್ಗೆಯೂ ನಿರ್ಧರಿಸಲಾಗಿದೆ. ಆದರೆ, ಆಘಾತಕಾರಿ ಸುದ್ದಿ ಏನೆಂದರೆ, ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಆಡುವುದು ಖಚಿತವಾಗಿಲ್ಲ. ಏಕೆಂದರೆ ಬಿಸಿಸಿಐ ಅವರ ಸ್ಟ್ರೈಕ್ ರೇಟ್ನಿಂದ ಸಂತೋಷವಾಗಿಲ್ಲ ಎನ್ನಲಾಗಿದೆ.