ಭಾರತೀಯರಲ್ಲಿ ಹಬ್ಬಗಳು ನೂರಾರು. ಸಂಭ್ರಮಗಳೂ ಹಲವು. ಭಿನ್ನ ಭಿನ್ನ ಹಬ್ಬಗಳಿಂದ ಹರ್ಷಪಡುವರು. ಹರ್ಷಪಡುವುದಕ್ಕಾಗಿಯೇ ಹಬ್ಬಗಳು ಎನ್ನುವ ಮಾತೂ ಇದೆ. ಅದೇನೇ ಇರಲಿ. ಹಬ್ಬ ಎಂದರೆ ಹಬ್ಬುವುದು ಎಂದರ್ಥ. ಹಬ್ಬ ಪದವು ಸಂಸ್ಕೃತದ ಪರ್ವದಿಂದ ಬಂದಿದೆ. ಪರ್ವದ ತದ್ಭವ ರೂಪ ಹಬ್ಬ. ಕಬ್ಬಿನ ಗಿಣ್ಣು ಅಥವಾ ಗಣ್ಣು ಎಂದೂ ಕರೆಯಬಹುದು. ಆ ಗಣ್ಣಿನಿಂದ ಇನ್ನೊಂದು ಹೊಸ ಕಬ್ಬಿನ ಜಲ್ಲೆ ಬರುತ್ತದೆ. ಹಬ್ಬದಲ್ಲಿ ಕೂಡ ಹೊಸತನ ಎದ್ದು ಬರಬೇಕು ಎದ್ದು ಕಾಣಬೇಕು, ಉತ್ಸಾಹವು ಇಮ್ಮಡಿಯಾಗಬೇಕು ಎನ್ನುವುದೇ ಆಗಿದೆ.
ಹೌದು, ಚೈತ್ರದಿಂದ ಆರಂಭಿಸಿ ಹನ್ನೆರಡು ಮಾಸಗಳಿವೆ. ಹೀಗಿದ್ದರೂ ಶ್ರಾವಣ ಮಾಸವೇ ಶ್ರೇಷ್ಠ, ಪೂಜ್ಯ ಎಂದು ಭಾವಿಸಿದ್ದಾರೆ? ಎಂದರೆ ಶ್ರಾವಣವು ಮಾಸವಾಗಿ ಬರುವುದೇ ಒಂದು ವಿಶೇಷ.
ಇಪ್ಪತ್ತೇಳು ನಕ್ಷತ್ರಗಳಲ್ಲಿ ಕೇವಲ ಹನ್ನೆರಡು ನಕ್ಷತ್ರ ಅಥವಾ ಹದಿನೈದು ನಕ್ಷತ್ರಗಳು ಮುಖ್ಯ. ಆ ಹದಿನೈದು ನಕ್ಷತ್ರಗಳೇ ಹನ್ನೆರಡು ಮಾಸಗಳಾಗಲು ಕಾರಣ. ಶ್ರವಣಾ ಎನ್ನುವುದು ಇಪ್ಪತ್ತೆರಡನೇ ನಕ್ಷತ್ರ. ಎಲ್ಲ ನಕ್ಷತ್ರಗಳಿಗೂ ದೇವತೆಗಳಿದ್ದಾರೆ. ಹಾಗೆಯೇ ಶ್ರವಣಾ ನಕ್ಷತ್ರಕ್ಕೂ ಒಂದು ದೇವನಿದ್ದಾನೆ. ಈ ನಕ್ಷತ್ರದ ದೇವತೆ ವಿಷ್ಣು.
ಚಂದ್ರನು ಖಗೋಳದಲ್ಲಿ ಸಂಚರಿಸುವಾಗ ಪೂರ್ಣ ಚಂದ್ರನು ಯಾವ ಸಂದರ್ಭದಲ್ಲಿ ಶ್ರವಣಾ ನಕ್ಷತ್ರದ ಜೊತೆ ಇರುವನೋ ಅದು ಶ್ರಾವಣ ಮಾಸ ಎಂದಾಗುತ್ತದೆ. ಅಂದರೆ ಈ ಮಾಸ ಪೂರ್ಣಚಂದ್ರನು ಶ್ರವಣಾ ನಕ್ಷತ್ರದ ಜೊತೆ ಇರುತ್ತಾನೆ. ಹಾಗಾಗಿ ಶ್ರಾವಣ ಮಾಸ ಎಂದು ಕರೆಯುವುದು.
ಶ್ರವಣಾ ನಕ್ಷತ್ರವು ವಿಷ್ಣುವನ್ನು ದೇವತೆಯಾಗಿಸಿಕೊಂಡಿದ್ದರಿಂದ ಶ್ರಾವಣ ಮಾಸವು ವಿಷ್ಣುವಿಗೆ ಪ್ರಿಯವಾದ ಮಾಸವಾಗಲಿದೆ. ಈ ವಿಷ್ಣುವು ಯಾರು ಎಂದರೆ ತ್ರಿಮೂರ್ತಿಗಳಲ್ಲಿ ಒಬ್ಬ. ಬ್ರಹ್ಮ ಸೃಷ್ಟಿ ಕರ್ತಾ ವಿಷ್ಣು ಸ್ಥಿತಿ ಕರ್ತಾ ಮಹೇಶ್ವರನು ಲಯ ಕರ್ತಾ. ಬ್ರಹ್ಮನಿಂದ ಸೃಷ್ಟಿಯಾದ ಈ ವಿಶ್ವವನ್ನು ನೋಡಿಕೊಳ್ಳುವವನು ವಿಷ್ಣು. ಕಾಲಕ್ಕೆ ಬೇಕಾದ ಎಲ್ಲವನ್ನೂ ಕೊಡುತ್ತಾನೆ.
ಶ್ರಾವಣ ಮಾಸಕ್ಕೆ ಇರುವ ಋತು ವರ್ಷ ಋತು. ವರ್ಷ ಎಂದರೆ ಮಳೆ. ವಿಶ್ವ ಯಾವಾಗ ಸುಭಿಕ್ಷೆಯಾಗುತ್ತದೆ ಎಂದರೆ ಚೆನ್ನಾಗಿ ಮಳೆಯಾದಾಗ ಆಹಾರ ಪದಾರ್ಥಗಳೆಲ್ಲವೂ ಚೆನ್ನಾಗಿ ಇರುತ್ತದೆ. ಕುಡಿಯುವ ನೀರೂ ಸಮೃದ್ಧವಾಗಿ ಸಿಗಲಿದೆ. ಭೂಮಿಯೂ ಸಸ್ಯಶ್ಯಾಮಲೆಯಾಗಿ ಕಾಣುವಳು. ಮಳೆ ಬೆಳೆಗಳಿಂದ ವಿಶ್ವವನ್ನು ರಕ್ಷಿಸುವ ಹೊಣೆ ವಿಷ್ಣುವಿನದ್ದು. ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಾನೆ. ಹಾಗಾಗಿ ವರ್ಷ ಋತುವಿನ ಆರಂಭದಲ್ಲಿ ಪ್ರಕೃತಿ ಆರಾಧನೆ, ದೇವತೆಗಳ ಪೂಜೆ ಎಲ್ಲವೂ ಆರಂಭವಾಗುತ್ತದೆ.
ಇದನ್ನೂ ಓದಿ: ನಾಗದೋಷದಿಂದ ಬಳಲುತ್ತಿದ್ದೀರಾ?! ನಾಗ ಪಂಚಮಿಯ ದಿನ ಈ ಮಂತ್ರಗಳಿಂದ ಪೂಜೆ ಮಾಡಿ
ಇನ್ನೊಂದು ವಿಚಾರವೆಂದರೆ ಆಷಾಢ ಮಾಸದ ಶುಕ್ಲಪಕ್ಷದ ಏಕಾದಶಿಯನ್ನು ಶಯನೈಕಾದಶೀ ಎಂದು ಕರೆಯುತ್ತಾರೆ. ಅಂದರೆ ಮಹಾವಿಷ್ಣುವು ಯೋಗನಿದ್ರೆಗೆ ತೆರಳುವ ಸಮಯ. ನಾಲ್ಕು ತಿಂಗಳು ಸುದೀರ್ಘ ಯೋಗನಿದ್ರೆಯಲ್ಲಿ ಇರುತ್ತಾನೆ. ಸೂರ್ಯನ ಚಲನೆಯು ದಕ್ಷಿಣ ದಿಕ್ಕಿನ ಕಡೆ ಚಲಿಸುತ್ತದೆ. ರಾತ್ರಿ ಹೆಚ್ಚು ಹಾಗೂ ಹಗಲು ಕಡಿಮೆ. ಇದು ಲೌಕಿಕ ಸುಖ, ಸಂತೋಷ, ಭೋಗಗಳನ್ನು ಚೆನ್ನಾಗಿ ಅನುಭವಿಸಲು ತಯಾರಿಮಾಡಿಕೊಳ್ಳುವ ಕಾಲವೂ ಇದೇ ಆಗಿದೆ.
ಯೋಗಿಗಳಿಗೆ ಸಂನ್ಯಾಸಿಗಳಿಗೆ ಏಕಾಂತ, ಧ್ಯಾನ ಇವುಗಳಿಗೆ ಯೋಗ್ಯವೆನಿಸುವ ಕಾಲವೂ ಹೌದು. ಅವರು ತಮ್ಮ ಬಾಹ್ಯ ಕಾರ್ಯಗಳನ್ನು ಬಿಟ್ಟು ಅಂತರ್ಮುಖಿಗಳಾಗಿರುವ ಕಾಲ. ಹಾಗಾಗಿ ಚಾತುರ್ಮಾಸ್ಯ ಎನ್ನುವ ವ್ರತವೂ ವಿಷ್ಣುವಿನ ಯೋಗನಿದ್ರೆಯ ಹಿನ್ನೆಲೆಯಿಂದ ಬಂದುದಾದಗಿದೆ.
-ಲೋಹಿತ ಹೆಬ್ಬಾರ್ – 8762924271
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ