ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಅವರ ತಂದೆ ‘ಸೂಪರ್ ಸ್ಟಾರ್’ ಕೃಷ್ಣ (Super Star Krishna) ಅವರು ಮಂಗಳವಾರ (ನ.15) ನಸುಕಿನ 4 ಗಂಟೆ ಸುಮಾರಿಗೆ ನಿಧನರಾದರು. ಅವರ ಅಗಲಿಕೆಗೆ ಅಭಿಮಾನಿಗಳು, ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ಮಹೇಶ್ ಬಾಬು (Mahesh Babu) ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಟಾಲಿವುಡ್ನ ಅನೇಕರು ಮಂಗಳವಾರ ಬಂದು ಕೃಷ್ಣ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮಂಗಳವಾರ ಸಂಜೆಯೇ ಸಾರ್ವಜನಿಕರಿಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗಿಲ್ಲ. ಇಂದು (ನ.16) ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು ಮಧ್ಯಾಹ್ನ 12 ಗಂಟೆ ನಂತರ ಕೃಷ್ಣ ಘಟ್ಟಮನೇನಿ ಅವರ ಅಂತ್ಯಕ್ರಿಯೆ (Krishna Ghattamaneni Funeral) ನಡೆಯಲಿದೆ.
ಪದ್ಮಾಲಯ ಸ್ಟುಡಿಯೋಸ್ನಲ್ಲಿ ಮಧ್ಯಾಹ್ನ 12 ವರೆಗೆ ಸಾರ್ವಜನಿಕರು ಕೃಷ್ಣ ಘಟ್ಟಮನೇನಿ ಅವರ ಅಂತಿಮ ದರ್ಶನ ಪಡೆಯಬಹುದು. ಆ ಬಳಿಕ ಅವರ ಪಾರ್ಥೀವ ಶರೀರವನ್ನು ಮಹಾಪ್ರಸ್ಥಾನಂಗೆ ಶಿಫ್ಟ್ ಮಾಡಲಾಗುವುದು. ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕೃಷ್ಣ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಆಂಧ್ರ ಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಕೃಷ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸೆಪ್ಟೆಂಬರ್ 28ರಂದು ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ನಿಧನರಾದರು. ಅದಾಗಿ ಒಂದೂವರೆ ತಿಂಗಳು ಕಳೆಯುವುದರೊಳಗೆ ‘ಪ್ರಿನ್ಸ್’ ತಂದೆ ಕೃಷ್ಣ ಕೂಡ ಇಹಲೋಕ ತ್ಯಜಿಸಿದ್ದು ತೀವ್ರ ನೋವಿನ ಸಂಗತಿ. ಒಟ್ಟಾರೆ ಅವರ ಕುಟುಂಬಕ್ಕೆ ಒಂದರಮೇಲೊಂದು ಆಘಾತ ಎದುರಾಗುತ್ತಿದೆ. ತಾಯಿ ಇಂದಿರಾ ದೇವಿ ಅವರ ನಿಧನದ ನೋವು ಮಾಸುವ ಮುನ್ನವೇ ತಂದೆ ಕೂಡ ಕೊನೆಯುಸಿರು ಎಳೆದಿರುವುದು ಮಹೇಶ್ ಬಾಬು ಪಾಲಿನ ದುಃಖವನ್ನು ದುಪ್ಪಟ್ಟುಗೊಳಿಸಿದೆ.
ತೆಲುಗು ಚಿತ್ರರಂಗದಲ್ಲಿ ಕೃಷ್ಣ ಅವರು ಸೂಪರ್ ಸ್ಟಾರ್ ಆಗಿದ್ದರು. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪ್ರಾರ್ಥಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.