ಬರದ ಬೀದರ್​​ ನಾಡಿನಲ್ಲಿ ವಿಭಿನ್ನವಾಗಿ ಯೋಚಿಸಿದ ರೈತ, ಹೊಲದಲ್ಲಿ ಪಾಲಿಹೌಸ್ ನಿರ್ಮಿಸಿ ಸೌತೆಕಾಯಿ ಬೆಳೆದು ಕೈತುಂಬಾ ಹಣ ಎಣಿಸುತ್ತಿದ್ದಾನೆ! 

Cucubmer Bamper: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ರೈತ ಮೂರು ತಿಂಗಳ ಹಿಂದೆ ಸ್ನೇಹಿತರ ಸಲಹೆಯಂತೆ ಅರ್ಧ ಎಕರೆಯಲ್ಲಿ ಪಾಲಿ ಹೌಸ್  ನಿರ್ಮಿಸಿಕೊಂಡು Enza Zaden oroub F1 ತಳಿಯ ಸೌತೆಕಾಯಿ ಬೆಳೆಯಲು ಪ್ರಾರಂಭಿಸಿದರು. ಅದು ರೈತನ ಜೀವನಶೈಲಿಯನ್ನು ಬದಲಾಯಿಸಿದೆ. ಪ್ರತಿಕೂಲ ವಾತಾವರಣದಲ್ಲೂ ಉತ್ತಮ ಇಳುವರಿ ಬಂದಿದೆ. ಜತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಿದೆ.

ಬರದ ಬೀದರ್​​ ನಾಡಿನಲ್ಲಿ ವಿಭಿನ್ನವಾಗಿ ಯೋಚಿಸಿದ ರೈತ, ಹೊಲದಲ್ಲಿ ಪಾಲಿಹೌಸ್ ನಿರ್ಮಿಸಿ ಸೌತೆಕಾಯಿ ಬೆಳೆದು ಕೈತುಂಬಾ ಹಣ ಎಣಿಸುತ್ತಿದ್ದಾನೆ! 
ವಿಭಿನ್ನವಾಗಿ ಯೋಚಿಸಿದ ರೈತ, ಹೊಲದಲ್ಲಿ ಪಾಲಿಹೌಸ್ ನಿರ್ಮಿಸಿ ಸೌತೆಕಾಯಿ ಬೆಳೆದು ಕೈತುಂಬಾ ಹಣ ಎಣಿಸುತ್ತಿದ್ದಾನೆ!
Edited By: ಸಾಧು ಶ್ರೀನಾಥ್​

Updated on: Oct 13, 2023 | 2:59 PM

ಆ ಗ್ರಾಮದ ರೈತರು ಹತ್ತಾರು ವರ್ಷದಿಂದ ಸೋಯಾಬಿನ್, ತೊಗರಿ, ಉದ್ದು, ಹೀಗೆ ಒಂದೆ ಬೆಳೆ ಬೆಳೆದು ಹೈರಾಣ ಆಗಿದ್ರು. ಆದ್ರೆ ಕೊಂಚ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿದ ರೈತ ತನ್ನ ಹೊಲದಲ್ಲಿ ಪಾಲಿಹೌಸ್ ನಲ್ಲಿ ಸೌತೆಕಾಯಿ ಬೆಳೆದು ಕೈತುಂಬಾ ಹಣ ಗಳಿಸುತ್ತಿದ್ದಾನೆ. ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತು ಈ ರೈತ ಅಕ್ಷರಶಃ ಸತ್ಯ ಮಾಡಿ ತೋರಿಸಿದ್ದಾನೆ. ಅನ್ನದಾತನ ಕೈಹಿಡಿದ ಸೌತೆಕಾಯಿ, ಪ್ರತಿಕೂಲ ವಾತಾವರಣದಲ್ಲೂ ಉತ್ತಮ ಇಳುವರಿ… ಪಾಲೀಹೌಸ್ ನಲ್ಲಿ ಸೌತೆಕಾಯಿ ಬೆಳೆದು ಸೈ ಎನಿಸಿಕೊಂಡ ರೈತ… ವಾರಕ್ಕೆ ಮೂರು ಬಾರಿ ಕಟಾವು, ಪ್ರತಿ ಕಟಾವು ಮಾಡಿದಾಗ ಒಂದು ಟನ್ ಇಳುವರಿ… ಪುಣೆ ಹೈದ್ರಾಬಾದ್ ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಿ ಮಾರಾಟ…ಹೌದು ಹೀಗೆ ನೆರಳು ಪರದೆ ಮನೆ (ಪಾಲೀ ಹೌಸ್ -Polyhouse) ಅನ್ನ ನೋಡಿದ್ದರೆ ನಿಮಗೆ ಮೈಸೂರು ದಾವಣಗೆರೆ ಮುಂತಾದ ಮುಂದುವರೆದ ಜಿಲ್ಲೆಯ ಹೊಲಗಳು ನಿಮ್ಮ ಕಣ್ಣು ಮುಂದೆ ಬರಬಹುದು. ಆದ್ರೆ ಈ ಶೇಡ್ ಹೌಸ್ ಇರೋದು ಗಡಿ ಜಿಲ್ಲೆ ಬೀದರ್ ನಲ್ಲಿ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ರೈತ ಗೋರಕ್ ನಾಥ್ ಅವರು ತಮ್ಮ ಅರ್ಧ ಎಕರೆಯಷ್ಟು ಜಮೀನಿನಲ್ಲಿ ಪಾಲಿಹೌಸ್ ನಿರ್ಮಿಸಿಕೊಂಡು ಅದರಲ್ಲಿ ಕುಕುಂಬರ್ ಸೌತೆಕಾಯಿ (Cucumber) ಬೆಳೆಸಿದ್ದಾರೆ (Success Story).

ಈ ಸೌತೆಕಾಯಿ ಬೆಳೆ ಅವರ ಜೀವನ ಶೈಲಿಯನ್ನು ಬದಲಾಯಿಸಿದೆ. ಪ್ರತಿ ಕೊಯ್ಲಿನಲ್ಲಿ ಸರಾಸರಿ ಒಂದರಿಂದ ಒಂದೂವರೆ ಟನ್‌ ಸೌತೆಕಾಯಿ ಇಳುವರಿ ತೆಗೆಯುತ್ತಿದ್ದಾರೆ. ಪ್ರತಿಕೂಲ ವಾತಾವರಣದಲ್ಲೂ ಉತ್ತಮ ಇಳುವರಿ ಬಂದಿದೆ. ಜತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಿರುವುದರಿಂದ ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅರ್ಧ ಎಕರೆಯಲ್ಲಿ ಪಾಲಿ ಹೌಸ್ ನಿರ್ಮಿಸಿಕೊಂಡು ಮೂರು ತಿಂಗಳ ಹಿಂದೆ ಸ್ನೇಹಿತರ ಸಲಹೆಯಂತೆ Enza Zaden oroub F1 ತಳಿಯ ಸೌತೆಕಾಯಿ ಬೆಳೆಯಲು ಪ್ರಾರಂಭಿಸಿದರು. Enza Zaden oroub F1 ತಳಿಯ ವಿಶೇಷತೆಯೆಂದರೆ ನಾಟಿ ಮಾಡಿದ 45ನೇ ದಿನಕ್ಕೆ ಕೊಯ್ಲು ಪ್ರಾರಂಭವಾಗುತ್ತದೆ. ಪ್ರತಿ ಎಲೆಗೂ ಒಂದು ಕಾಯಿ ಮತ್ತು ಮೊಗರು ಬಿಡುವುದರಿಂದ ಸರಾಸರಿ ಒಂದು ಕೊಯ್ಲಿಗೆ ಎರಡು ಟನ್‌ ಇಳುವರಿ ಬರುತ್ತದೆ. ಸುಮಾರು 20ಕ್ಕೂ ಹೆಚ್ಚು ಕೊಯ್ಲು ಮಾಡಬಹುದಾಗಿದೆ. ಮಳೆಗಾಲದಂಥ ಪ್ರತಿಕೂಲ ವಾತಾವರಣದಲ್ಲೂ ಭರ್ಜರಿ ಫಸಲು ಕೊಡುವುದು ಈ ತಳಿಯ ವಿಶೇಷತೆ ಎಂದು ಹೇಳುತ್ತಾರೆ ತೋಟ ನೋಡಿಕೊಳ್ಳುವ ರೈತ ಗಣೇಶ್ ತುಪ್ಪೆವ.

ಇವರು ಅಗಷ್ಟ್ ನಲ್ಲಿ ಸೌತೆಕಾಯಿಯನ್ನ ನಾಟಿ ಮಾಡಿದ್ದಾರೆ, ಮೂರು ಅಡಿ ಅಂತರಕ್ಕೊಂದರಂತೆ ಸೌತೆಕಾಯಿ ಸಸಿ ನಾಟಿ ಮಾಡಿದ್ದು ಅರ್ಧ ಎಕರೆಯಲ್ಲಿ ಸುಮಾರು 5 ಸಾವಿರದಾ ಐದು ನೂರು ಸಸಿಗಳು ಕುಳಿತಿವೆ. ನಾಟಿ ಮಾಡಿದ 45 ದಿನಕ್ಕೆ ಕಾಯಿ ಕಟಾವಿಗೆ ಬಂದಿದ್ದು ಇದುವರೆಗೆ ಎಂಟು ಭಾರಿ ಕಟಾವು ಮಾಡಿದ್ದಾರೆ. ಕಟಾವು ಮಾಡಿದ ಎಲ್ಲಾ ಸೌತೆಕಾಯಿಗಳನ್ನ ಹೈದ್ರಾಬಾದ್ ಹಾಗೂ ಪುಣೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ.

ಒಂದು ಕೇಜಿಗೆ 50 ರೂಪಾಯಿಯಂತೆ ತೆಗೆದುಕೊಳ್ಳುತ್ತಿದ್ದು ದರವೂ ಕೂಡಾ ಚನ್ನಾಗಿ ಸಿಗುತ್ತಿದೆ. ಹೀಗಾಗಿ ಸೌತೆಕಾಯಿ ಬೆಳೆಸಿದ್ದರಿಂದ ಆರ್ಥಿಕವಾಗಿ ರೈತ ಸದೃಢವಾಗಿದ್ದಾನೆ. ಇನ್ನು ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ನೆರಳು ಪರದೆ ಮನೆ ನಿರ್ಮಾಣ ಮಾಡಲು ಬರೊಬ್ಬರಿ 15 ಲಕ್ಷ ರೂ ಹಣ ಖರ್ಚು ಮಾಡಿದ್ದಾರೆ. ಇದರಲ್ಲಿ ಪ್ರತಿಶತ 50ರಷ್ಟು ಹಣ ಇಲ್ಲಿನ ತೋಟಗಾರಿಕಾ ಇಲಾಖೆ ಸಹಾಯ ಧನವಾಗಿ ನೀಡಿದೆ.

ಇದೇ ಫೆಬ್ರುವರಿಯಲ್ಲಿ ನಿರ್ಮಾಣ ಕಾರ್ಯ ಮುಗಿದಿದ್ದು ಅಗಷ್ಠ್ ನಲ್ಲಿ ಅರ್ಧ ಎಕರೆ ಸೌತೆಕಾಯಿ ಹಚ್ಚಿದ್ದಾರೆ. ಈಗ ಕಳೆದ ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ ಒಂದಲ್ಲ ಎರಡಲ್ಲ ಎರಡೂವರೆ ಲಕ್ಷ ಹಣವನ್ನ ಸೌತೆಕಾಯಿ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ. ಜಿಲ್ಲೆಯ ಜಿಲ್ಲಾಧಿಕಾರಿಗಳಿಗಿಂತಲೂ ಹೆಚ್ಚಿನ ಸಂಬಳ ಪಡೆದ ಸಂತಸ ಅವರ ಮೊಗದಲ್ಲಿ ಮನೆ ಮಾಡಿದೆ!

ಸಾಮಾನ್ಯವಾಗಿ ಗಡಿ ಜಿಲ್ಲೆ ಬೀದರ್ ಅಂದ್ರೆ ಸಾಕು ಇಲ್ಲಿನ ರೈತರು ವಾಣಿಜ್ಯ ಬೆಳೆಯಾಗಿ ಕಬ್ಬನ್ನ ಬೆಳೆಯುತ್ತಾ ಬಂದಿದ್ದಾರೆ. ಆದ್ರೆ ಈ ಪಾಲಿಹೌಸ್ ಕಲ್ಪನೆ ಗಡಿ ಜಿಲ್ಲೆಗೆ ಹೊಸದು. ಜೊತೆಗೆ ದುಬಾರಿ ಕೂಡಾ. ಹೀಗಾಗಿ ಯಾರೊಬ್ಬರು ಇದನ್ನ ಮಾಡಲು ಮುಂದೆ ಬಂದಿರಲಿಲ್ಲ.ಆದ್ರೆ ಇಲ್ಲಿನ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರನ್ನ ಈ ಬಗ್ಗೆ ಸಮಗ್ರ ಮಾಹಿತಿ ನೀಡಿ ಹುರಿದುಂಬಿಸಿದ ಪರಿಣಾಮ ಇಲ್ಲಿನ ರೈತ ತೋಟಗಾರಿಕಾ ಇಲಾಖೆ ಸಹಾಯಧನದೊಂದಿಗೆ ನೆರಳು ಪರದೆ ಮನೆಯನ್ನ ನಿರ್ಮಾಣ ಮಾಡಿದ್ದಾರೆ.ಅಷ್ಟೆ ಅಲ್ಲದೆ ನಿರ್ಮಾಣವಾದ ಎರಡು ಮೂರು ತಿಂಗಳಲ್ಲೆ ಲಕ್ಷ ಲಕ್ಷ ಹಣ ಎಣಿಸಲು ಶುರು ಮಾಡಿದ್ದು ಗಡಿ ಜಿಲ್ಲೆಯ ರೈತರನ್ನ ಕಣ್ಣರಳಿಸಿ ನೋಡುವಂತೆ ಮಾಡಿದೆ.

ಒಟ್ಟಾರೆ ಸದಾ ಕಬ್ಬು ಬೆಳೆದು ಕೈ ಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ರೈತ ಗೋರಖ್ ನಾಥ್ ಮಾದರಿಯಾಗಿದ್ದಾರೆ. ಅಷ್ಟೆ ಅಲ್ಲದೆ ಕೆವಲ ಅರ್ಧ ಎಕರೆ ನೆರಳು ಪರದೆ ಮನೆಯಲ್ಲಿ ಇಡಿ ಕುಟುಂಬದ ಸದಸ್ಯರು ಕೆಲಸ ಮಾಡುತ್ತಿರುವುದರಿಂದ ಇವರ ಲಾಭ ಇಮ್ಮಡಿಯಾಗಿಸಿದೆ. ಕೆಲಸಕ್ಕೆ ಬರೋ ಕೂಲಿ ಆಳುಗಳು ಕೂಡಾ ಇವರ ಕುಟುಂಬದ ಸದಸ್ಯರ ಜೊತೆ ಕೆಲಸ ಮಾಡುವುದರಿಂದ ಹೆಚ್ಚಿನ ಕೆಲಸ ಮಾಡದಂತಾಗುತ್ತಿದೆ. ಕೆಲಸ ಯಾವುದಾದರೇನು ಶ್ರದ್ದೆಯಿಂದ ಮಾಡಿದ್ದರೆ ಇನ್ನೊಬ್ಬರಿಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us