ತುಂಗಭದ್ರಾ ಜಲಾಶಯದ ಎಚ್‌ಎಲ್‌ಸಿ ಕಾಲುವೆಯಲ್ಲಿ ಕೊಚ್ಚಿಹೋದ ಕಾರು

ಕಾರೊಂದು ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಅಲ್ಲೀಪುರ ಬಳಿ ತುಂಗಭದ್ರಾ ಜಲಾಶಯದ ಎಚ್‌ಎಲ್‌ಸಿ ಕಾಲುವೆಯಲ್ಲಿ ನಡೆದಿದೆ. ಕಾರು ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಕಾಲುವೆಗೆ ಜಾರಿದೆ ಎನ್ನಲಾಗಿದ್ದು,ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇರಲಿಲ್ಲ. ಕೊಚ್ಚಿ ಹೋದ ಕಾರು ವಿನಾಯಕ ನಗರದ ಕೊರಚ ಅವರಿಗೆ ಸೇರಿದ್ದಾಗಿದೆ.

ಬಳ್ಳಾರಿ, ನವೆಂಬರ್​ 17: ತೊಳೆಯುತ್ತಿರುವ ವೇಳೆ ಕಾರೊಂದು ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಅಲ್ಲೀಪುರ ಬಳಿ ತುಂಗಭದ್ರಾ ಜಲಾಶಯದ ಎಚ್‌ಎಲ್‌ಸಿ ಕಾಲುವೆಯಲ್ಲಿ ನಡೆದಿದೆ.
ಆಕಸ್ಮಿಕವಾಗಿ ಕಾರು ನ್ಯೂಟ್ರಲ್‌ ಗೇರ್‌ಗೆ ಹೋದ ಪರಿಣಾಮ, ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಇಳಿದಿದೆ. ಈ ವೇಳೆ ಕಾಲುವೆಯಲ್ಲಿ ನೀರಿನ ಸೆಳೆತವಿದ್ದ ಕಾರಣ ನೀರಲ್ಲಿ ಕೊಚ್ಚಿ ಹೋಗಿದೆ. ಕಾರು ವಿನಾಯಕ ನಗರ ನಿವಾಸಿ ಕೊರಚ ಎಂಬುವವರಿಗೆ ಸೇರಿದ್ದಾಗಿದ್ದು, ಕಾರು ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಾಲುವೆ ನೀರಿನಲ್ಲಿ ಕಾರು ತೇಲುತ್ತಾ ಕೆಲ ದೂರದವರೆಗೆ ಸಾಗಿದ್ದು ಬಳಿಕ ಮುಳುಗಿದೆ. ಕಾರನ್ನು ನಿಲ್ಲಿಸಲು ಮಾಲಿಕ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಸ್ಥಳೀಯರು ಹಾಗೂ ಈಜು ತಜ್ಞರ ಸಾಹಾಯದಿಂದ ಕಾಲುವೆಯಿಂದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಕಾರು ಕೊಚ್ಚಿ ಹೋಗುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್​ ಕ್ಯಾಮರಾದಲ್ಲಿ ರೆಕಾರ್ಡ್​ ಮಾಡಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

 

Published On - 3:24 pm, Mon, 17 November 25