ಕಲುಷಿತ ನೀರು ಸೇವಿಸಿ ದುರಂತ: 5 ಲಕ್ಷ ರೂ ಪರಿಹಾರ ನೀಡುವಂತೆ ಡಿಸಿಗೆ ಸೂಚಿಸಿದ ಸಚಿವ ಆರ್​ಬಿ ತಿಮ್ಮಾಪುರ

Chitradurga News: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ದುರಂತ ಸಂಭವಿಸಿದೆ. ಮೃತರ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡಿರಲಿಲ್ಲ. ಇದನ್ನು ತಿಳಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಇಂದೇ 5 ಲಕ್ಷ ರೂ. ಪರಿಹಾರದ ಚೆಕ್‌ ನೀಡುವಂತೆ ಡಿಸಿ ದಿವ್ಯಾಪ್ರಭುಗೆ ಸೂಚನೆ ನೀಡಿದ್ದಾರೆ.

ಕಲುಷಿತ ನೀರು ಸೇವಿಸಿ ದುರಂತ: 5 ಲಕ್ಷ ರೂ ಪರಿಹಾರ ನೀಡುವಂತೆ ಡಿಸಿಗೆ ಸೂಚಿಸಿದ ಸಚಿವ ಆರ್​ಬಿ ತಿಮ್ಮಾಪುರ
ಸಚಿವ ಆರ್‌.ಬಿ.ತಿಮ್ಮಾಪುರ
Edited By:

Updated on: Aug 04, 2023 | 8:48 PM

ಚಿತ್ರದುರ್ಗ, ಆಗಸ್ಟ್​ 04: ಕೋಟೆನಾಡು ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ದುರಂತವೇ ನಡೆದು ಹೋಗಿದೆ. ಇಂದು ಕವಾಡಿಗರಹಟ್ಟಿಯ ಆಕ್ರೋಶ ಸ್ಪೋಟಿಸಿದೆ. ಮತ್ತೊಂದು ಕಡೆ ಲ್ಯಾಬ್ ರಿಪೋರ್ಟ್ ಬಹಿರಂಗ ಆಗಿದೆ. ಇವೆಲ್ಲದರ ಮಧ್ಯೆ ಇಂದೇ 5 ಲಕ್ಷ ರೂ. ಪರಿಹಾರದ ಚೆಕ್‌ ನೀಡುವಂತೆ ಡಿಸಿಗೆ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ (RB Timmapur) ಸೂಚನೆ ನೀಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ 50 ಸಾವಿರ ರೂ. ವೈಯಕ್ತಿಕ ಸಹಾಯ ಮಾಡಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ, ಅನುಮಾನವಿದ್ದರೆ ಮತ್ತೆ ತನಿಖೆ ಮಾಡುತ್ತೇವೆ. ಬೇಕಾದರೆ ಮತ್ತೊಮ್ಮೆ ತನಿಖೆ ಮಾಡಿಸೋಣ. ಲ್ಯಾಬ್ ವರದಿ ವೀಕ್ಷಿಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಸಾವು ಪ್ರಕರಣ; ನಗರಸಭೆ ಎಇಇ, ಜೆಇ, ವಾಲ್ವ್​ಮ್ಯಾನ್​ ಅಮಾನತು

ತಡವಾಗಿ ಬಂದ ಡಿಸಿ ದಿವ್ಯಾಪ್ರಭುಗೆ ಸಚಿವರ ತರಾಟೆ

ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಗೆ ಭೇಟಿ ನೀಡಿದ ಸಚಿವ ಆರ್‌.ಬಿ.ತಿಮ್ಮಾಪುರ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಭೇಟಿ ವೇಳೆ ತಡವಾಗಿ ಬಂದ ಡಿಸಿ ದಿವ್ಯಾಪ್ರಭುಗೆ ಸರ್ಕಾರದಿಂದ ಪರಿಹಾರ ಚೆಕ್‌ ವಿತರಿಸಿಲ್ಲ ಏಕೆ ಎಂದು ತರಾಟೆ ತೆಗೆದುಕೊಂಡರು.

ಸಿಎಂಗೆ ಡಿಸಿ ವಿರುದ್ಧ ದೂರು ಹೇಳಿದ ಸಚಿವ ತಿಮ್ಮಾಪುರ

ಸ್ಥಳದಲ್ಲೇ ಸಿಎಂಗೆ ಫೋನ್‌ ಮಾಡಿದ ಅವರು, ಡಿಸಿ ದಿವ್ಯಾಪ್ರಭು ವಿರುದ್ಧ ದೂರು ಹೇಳಿದರು. ಸರ್ಕಾರಕ್ಕೆ ವರದಿ ಕಳಿಸಿದ್ದೇನೆಂದು ಹೇಳುತ್ತಾ ಕುಳಿತಿದ್ದಾರೆಂದು ದೂರಿದ್ದಾರೆ. ವರದಿ ಬರುವವರೆಗೂ ಕಾದು ಕೂರುವುದು ಬೇಡ, ಪರಿಹಾರ ಕೊಡಿ. ಜನರಿಗೆ ಉತ್ತರ ಕೊಡುವವರು ನಾವು, ನೀವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇಂದೇ ಪರಿಹಾರದ ಚೆಕ್ ನೀಡುವಂತೆ ಸೂಚಿಸಿದ್ದು, ಸರಿ ಸರ್ ಎಲ್ಲವೂ ಸಿದ್ಧವಾಗಿದೆ ಪರಿಹಾರದ ಚೆಕ್ ಕೊಡುತ್ತೇನೆ ಎಂದು ಡಿಸಿ ಹೇಳಿದರು.

ಇದನ್ನೂ ಓದಿ: ಚಿತ್ರದುರ್ಗ- ವಿಷಕಾರಿ ನೀರು ಸೇವನೆಯಿಂದ ಸಾವು, ತಹಸೀಲ್ದಾರ್ ಜತೆ ಪ್ರತಿಭಟನಾಕಾರರ ವಾಗ್ವಾದ

ಪ್ರಕರಣ ಸಂಬಂಧ ಮೃತರ ಕುಟುಂಬಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಾಂತ್ವನ ಹೇಳಿದ್ದು, ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ ತಲಾ 50 ಸಾವಿರ ರೂ ಪರಿಹಾರ ನೀಡಿದ್ದಾರೆ. FSL​​ ವರದಿ, ಮರಣೋತ್ತರ ಪರೀಕ್ಷೆ ವರದಿ ನೋಡಿ ಕ್ರಮ ಕೈಗೊಳ್ಳಲಾಗುವುದು. ವಿಷ ಬೆರೆಸಿದ್ದರೆ ವಾಂತಿ ಮಾತ್ರ ಆಗುತ್ತದೆ, ಸಾವು ಸಂಭವಿಸುತ್ತದೆ.

ಕಲುಷಿತ ನೀರಾಗಿದ್ದರೆ ವಾಂತಿ ಭೇದಿ ಆಗುತ್ತದೆ, ಸಾವು ಸಂಭವಿಸಲ್ಲ. ಈ ಘಟನೆ ಬಗ್ಗೆ ಉನ್ನತಮಟ್ಟದ ತನಿಖೆ ಆಗಲಿ. ಯಾರೇ ತಪ್ಪಿತಸ್ಥರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us