ಕರ್ನಾಟಕ ಹೈಕೋರ್ಟ್‌ಗೆ ನೇಮಕಗೊಂಡ ಐವರು ಹೆಚ್ಚುವರಿ ನ್ಯಾಯಮೂರ್ತಿಗಳು

ಹೈಕೋರ್ಟ್‌ಗೆ ಐವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಇಂದು (ಆಗಸ್ಟ್ 12) ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಹೈಕೋರ್ಟ್‌ಗೆ ನೇಮಕಗೊಂಡ ಐವರು ಹೆಚ್ಚುವರಿ ನ್ಯಾಯಮೂರ್ತಿಗಳು
ಕರ್ನಾಟಕ ಹೈಕೋರ್ಟ್
Updated By: ವಿವೇಕ ಬಿರಾದಾರ

Updated on: Aug 12, 2022 | 10:19 PM

ಬೆಂಗಳೂರು: ಹೈಕೋರ್ಟ್‌ಗೆ (High Court) ಐವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರ (Central Government) ಇಂದು (ಆಗಸ್ಟ್ 12) ಅಧಿಸೂಚನೆ ಹೊರಡಿಸಿದೆ. ನ್ಯಾಯಮೂರ್ತಿ ಅನಿಲ್ ಭೀಮಸೇನ್ ಕಟ್ಟಿ, ನ್ಯಾಯಮೂರ್ತಿ ಗುರುಸಿದ್ದಯ್ಯ ಬಸವರಾಜ, ನ್ಯಾಯಮೂರ್ತಿ ಚಂದ್ರಶೇಖರ್ ಮೃತ್ಯುಂಜಯ ಜೋಶಿ ಮತ್ತು ನ್ಯಾಯಮೂರ್ತಿ ಉಮೇಶ್ ಮಂಜುನಾಥ್ ಭಟ್ ಅಡಿಗ ಮತ್ತು ನ್ಯಾಯಮೂರ್ತಿ ತಲಕಾಡ್ ಗಿರಿಗೌಡ ಶಿವಶಂಕರೇಗೌಡ ಅವರನ್ನು ನೇಮಕ ಮಾಡಲಾಗಿದೆ.

ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ  ಶಿಫಾರಸಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಹಾಲಿ ಹಿರಿಯ ಜಿಲ್ಲಾ ನ್ಯಾಯಾಧೀಶರಾಗಿದ್ದವರಿಗೆ ಪದೋನ್ನತಿ ಮಾಡಲಾಗಿದೆ.

ಜುಲೈ 20 ರಂದು ಕರ್ನಾಟಕ ಹೈಕೋರ್ಟ್​ಗೆ ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಜಿಲ್ಲಾ ಕೋರ್ಟ್ ಜಡ್ಜ್​ಗಳಿಗೆ ಹೈಕೋರ್ಟ್ ಜಡ್ಜ್​​ ಆಗಿ ಬಡ್ತಿ ಮಾಡಲು ಕೊಲಿಜಿಯಂ ಶಿಫಾರಸು ಮಾಡಿತ್ತು.

ಈ ಶಿಫಾರಸ್ಸಿನಲ್ಲಿ ಅನಿಲ್ ಭೀಮಸೇನ ಕತ್ತಿ, ಗುರುಸಿದ್ದಯ್ಯ ಬಸವರಾಜ, ಚಂದ್ರಶೇಖರ ಮೃತ್ಯುಂಜಯ ಜೋಷಿ, ಉಮೇಶ್ ಮಂಜುನಾಥ ಭಟ್ ಅಡಿಗ, ತಲಕಾಡು ಗಿರಿಗೌಡ ಶಿವಶಂಕರೇಗೌಡ‌ ಅವರನ್ನು ಹೈಕೋರ್ಟ್ ಜಡ್ಜ್ ಗಳಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ಕರ್ನಾಟಕದ ಹೈಕೋರ್ಟ್​​ಗೆ 62 ಜಡ್ಜ್ ಹುದ್ದೆಗಳು ಮಂಜೂರಾಗಿದ್ದವು. ಇಲ್ಲಿವರೆಗೆ 45 ಜಡ್ಜ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿತ್ತು. ಈಗ ಐದು ಮಂದಿ ಬಡ್ತಿ ಪಡೆದು ನೇಮಕವಾದ ಮೇಲೆ, ಜಡ್ಜ್​ಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

‌ಕೇಂದ್ರ ಸರ್ಕಾರ ಕೊಲಿಜಿಯಂ ಶಿಫಾರಸು ಒಪ್ಪಿಕೊಂಡು ನ್ಯಾಯಾಧೀಶರ ‌ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಕೊಲಿಜಿಯಂ ಮೊದಲ ಬಾರಿ ಮಾಡಿದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪದೇ ಮರುಪರಿಶೀಲನೆ ಮಾಡುವಂತೆ ‌ಕೊಲಿಜಿಯಂಗೆ ಕಳಿಸಬಹುದು. ಆದರೆ ಎರಡನೇ ಬಾರಿಯೂ ಕೊಲಿಜಿಯಂ‌ ಅದೇ ಹೆಸರುಗಳನ್ನು‌ ನೇಮಕಕ್ಕೆ ಶಿಫಾರಸು ಮಾಡಿದರೇ, ಆಗ ಕೇಂದ್ರ ಸರ್ಕಾರ ಕೊಲಿಜಿಯಂ ಶಿಫಾರಸುಗಳನ್ನು ಒಪ್ಪಿಕೊಳ್ಳಲೇಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Fri, 12 August 22