
ಹಾವೇರಿ, ನವೆಂಬರ್ 19: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು , ನರ್ಸ್ಗಳ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿರುವ ಆರೋಪ ಕೇಳಿಬಂದಿದೆ. ಆಸ್ಪತ್ರೆ ಶೌಚಾಲಯಕ್ಕೆ ಹೋಗೋ ಮಾರ್ಗದಲ್ಲೇ ಮಹಿಳೆಗೆ ಹೆರಿಗೆಯಾದ ಪರಿಣಾಮ, ಆಗತಾನೇ ಜನಿಸಿದ ನವಜಾತ ಶಿಶುವಿಗೆ ಪೆಟ್ಟಾಗಿ ಮಗು ಮೃತಪಟ್ಟಿದೆ. ಶಿಶು ಸಾವನ್ನಪ್ಪಲು ಆಸ್ಪತ್ರೆಯ ಸಿಬ್ಬಂದಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ರಾಣೆಬೆನ್ನೂರು ತಾಲೂಕು ಕಾಕೋಳ ಗ್ರಾಮ ರೂಪಾ ಗಿರೀಶ್ ಕರಬಣ್ಣನವರ ಎಂಬ ಗರ್ಭಿಣಿಯನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರತರಲಾಗಿತ್ತು. ಬಳಿಕ, ರೂಪಾ ಅವರಿಗೆ ಹೆರಿಗೆ ನೋವು ಹೆಚ್ಚಿದ್ದು, ಒಂದು ಬೆಡ್ ಕೂಡ ನೀಡಿರಲಿಲ್ಲ. ಬದಲಾಗಿ ನೆಲದ ಮೇಲೆಯೇ ಅವರನ್ನು ಕೂರಿಸಿದ್ದರು. ಶೌಚಾಲಯ ಎಲ್ಲಿದೆ ಎಂದು ಕೇಳಿದರೂ ಸಿಬ್ಬಂದಿ ಮಾಹಿತಿ ಕೊಡಲಿಲ್ಲ. ಕೊನೆಗೆ ಅವರಿವರನ್ನು ಕೇಳಿಕೊಂಡು ಶೌಚಾಲಯಕ್ಕೆ ತೆರಳುತ್ತಿರುವಾಗ ರೂಪಾಗೆ ಹೆರಿಗೆ ಆಗಿದೆ. ದಾರಿಯಲ್ಲೇ ಹೆರಿಗೆಯಾದ ಕಾರಣ ಮಗುವಿಗೆ ಪೆಟ್ಟಾಗಿ ಮಗು ಮೃತ ಪಟ್ಟಿದೆ. ಸೂಕ್ತ ಚಿಕಿತ್ಸೆ ಕೊಡದೇ ವೈದ್ಯರು, ನರ್ಸ್ಗಳು ನಿರ್ಲಕ್ಷ್ಯ ವಹಿಸಿದ್ದ ಕಾರಣದಿಂದಲೇ ಮಗು ಸಾವನ್ನಪ್ಪಿದೆ ಎಂದು ರೂಪಾ ಸಂಬಂಧಿಕರು ದೂರಿದ್ದಾರೆ.
ಇದನ್ನೂ ಓದಿ: ಶಬರಿಮಲೆಗೆ ತೆರಳುತ್ತಿದ್ದ ಬಸ್ ಪಲ್ಟಿ, ಪವಾಡಸದೃಶ ಪಾರಾದ ಮಂಡ್ಯದ 33 ಮಾಲಾಧಾರಿಗಳು
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಹಾವೇರಿ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಪಿ. ಆರ್. ಹಾವನೂರ್ ಬೇರೇಯದ್ದೇ ಹೇಳಿಕೆ ನೀಡಿದ್ದಾರೆ. ರೂಪಾ ಎಂಬ ಗರ್ಭಿಣಿ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದು, ಆಗ ನಮ್ಮ ವೈದ್ಯರು ತಪಾಸಣೆ ನಡೆಸಿದ್ದಾರೆ. ಈ ವೇಳೆ ನಿನ್ನೆಯಿಂದ ಹೊಟ್ಟೆಯಲ್ಲಿ ಮಗುವಿನ ಚಲನವಲನ ಇಲ್ಲ ಎಂದು ಮಹಿಳೆ ಹೇಳಿದ್ದು, ಹೊಟ್ಟೆಯಲ್ಲಿ ಮಗು ಮೃತಪಟ್ಟಿತ್ತು. ಶೌಚಾಲಯಕ್ಕೆ ಅವರು ತೆರಳುವ ಸಂದರ್ಭದಲ್ಲಿ ಹೆರಿಗೆ ನೋವು ಹೆಚ್ಚಾಗಿದೆ. ಈ ವೇಳೆ ನಮ್ಮ ನರ್ಸ್ ಕರೆದುಕೊಂಡು ಬಂದು ನೋಡಿದ್ದಾರೆ. ಮಹಿಳೆಗೆ ಬಿಪಿ ಹೆಚ್ಚಿತ್ತು. ಇನ್ನೂ ಮೂರು ಹೆರಿಗೆ ನಡೆದಿದ್ದರಿಂದ ನಮ್ಮ ಸಿಬ್ಬಂದಿಯೂ ಬ್ಯುಸಿ ಇದ್ದರು. ಇದೇ ವೇಳೆ ಅವರು ಶೌಚಾಲಯಕ್ಕೆ ತೆರಳಿದ್ದಾರೆ. ಘಟನೆ ಸಂಬಂಧ ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಆ ಮೂಲಕ ವೈದ್ಯರ ನಿರ್ಲಕ್ಷಯ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ 9 ಹಾವೇರಿ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:16 am, Wed, 19 November 25