
ಬಾಯಲ್ಲಿದ್ದ ಸುಪಾರಿ ಉಗಿಯುತ್ತ ಅರೆ ಹೋ ಸಾಂಬ ಎಂದು ಘರ್ಜಿಸುವ ಗಬ್ಬರ್ ಸಿಂಗ್ ಎಂದಾಕ್ಷಣ ಹಿಂದಿಯ ಶೋಲೆ ಸಿನಿಮಾ, ರಾಮನಗರದ ರಾಮದೇವರ ಬೆಟ್ಟ ನೆನಪಾಗುತ್ತೆ. ಪ್ರಭು ಶ್ರೀ ರಾಮಚಂದ್ರನ ನೆಲೆಬೀಡಾಗಿದ್ದ ರಾಮದೇವರ ಬೆಟ್ಟದ ಪೌರಾಣಿಕತೆ, ಸ್ಥಳ ಮಹಾತ್ಮೆ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಇದರ ಜೊತೆಗೆ ರಾಮದೇವರ ಬೆಟ್ಟ ರಾಜ್ಯದ ಏಕೈಕ ರಣಹದ್ದು ಸಂರಕ್ಷಣಾ ತಾಣವೂ ಹೌದು. ಅಪರೂಪದ ರಣಹದ್ದುಗಳೆಂದರೆ ಸಾಕು, ವಿಚಿತ್ರ ಪ್ರಾಣಿ, ಕೊಳೆತ ಮಾಂಸ ತಿನ್ನುತ್ತೆ ಎಂದು ನಮ್ಮ ಜನ ಮೂಗು ಮುರಿಯುವುದೇ ಹೆಚ್ಚು. ಆದರೆ ಇಲ್ಲಿನ ಜನರಿಗೆ ಅದು ಸೀತಾ ಮಾತೆಯನ್ನು ರಾವಣನಿಂದ ಕಾಪಾಡಲು ಹೋರಾಡಿದ ಜಟಾಯು. ಆದರೆ ಈಗ ಜಟಾಯುವಿನ ವಂಶಸ್ಥರೆಂದು ಭಾವಿಸಲಾದ ರಣಹದ್ದುಗಳ ಸಂಖ್ಯೆ ಕುಸಿಯುತ್ತಿದೆ. ಬೆಂಗಳೂರಿನಿಂದ 54, ರಾಮನಗರದಿಂದ 4 ಕಿ.ಮೀ ದೂರದಲ್ಲಿರುವ ರಾಮದೇವರ ಬೆಟ್ಟ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ರಣಹದ್ದು ಸಂರಕ್ಷಣಾ ಕೇಂದ್ರ. ಇಲ್ಲಿ ಸುಮಾರು 1990ರ ಇಸವಿಯಲ್ಲಿ ಸಾವಿರಾರು ರಣಹದ್ದುಗಳು ವಾಸವಾಗಿದ್ದವು. ಆದರೆ ಈಗ ಬೆರಳೆಣಿಗೆಯಷ್ಟು ರಣಹದ್ದುಗಳು ಕೂಡ ಕಾಣಲು ಸಿಗುತ್ತಿಲ್ಲ. ಮೃತಪಟ್ಟ ಪ್ರಾಣಿ, ಪಕ್ಷಿಗಳನ್ನು ತಿಂದು ಜೀವ ಸಂಕುಲವನ್ನು ರೋಗರುಜಿನಗಳಿಂದ ಕಾಪಾಡಿ ಪರಿಸರ ಸ್ವಚ್ಛವಾಗಿಡಲು ಸಹಾಯ ಮಾಡುತ್ತಿದ್ದ ಈ ಆಕಾಶ ವೈದ್ಯರಾದ ರಣಹದ್ದುಗಳು ಈಗ ಬಹುತೇಕ ಕಣ್ಮರೆಯಾಗುತ್ತಿವೆ. ಇದಕ್ಕೆ ಕಾರಣವೇನು? ಜೈವಿಕ ಸಮತೋಲನದಲ್ಲಿ ರಣಹದ್ದುಗಳ ಪಾತ್ರ ಮತ್ತು ಮಹತ್ವವೇನು ಎಂಬ ಬಗ್ಗೆ...
Published On - 3:32 pm, Mon, 6 May 24