ಕರ್ಫ್ಯೂ ಮಾರ್ಗಸೂಚಿ ಮತ್ತೆ ಪರಿಷ್ಕರಣೆ: ಕಟ್ಟಡ ಕಾಮಗಾರಿಗೆ ಕಡಿವಾಣ, ಹಾಲು ಮಾರಾಟಕ್ಕೆ ಅವಕಾಶ

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಸುವ ಸರಕುಗಳ ಸಾಗಣೆಗೆ ಪೊಲೀಸರು ನಿರ್ಬಂಧ ಹೇರಿದ್ದಾರೆ.

ಕರ್ಫ್ಯೂ ಮಾರ್ಗಸೂಚಿ ಮತ್ತೆ ಪರಿಷ್ಕರಣೆ: ಕಟ್ಟಡ ಕಾಮಗಾರಿಗೆ ಕಡಿವಾಣ, ಹಾಲು ಮಾರಾಟಕ್ಕೆ ಅವಕಾಶ
ಬೆಂಗಳೂರಿನಲ್ಲಿ ರಸ್ತೆಗೆ ಇಳಿಯುತ್ತಿರುವ ವಾಹನಗಳನ್ನು ತಡೆಯುತ್ತಿರುವ ಪೊಲೀಸರು

Updated on: Apr 29, 2021 | 10:23 PM

ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ಕರ್ಫ್ಯೂ ಮಾರ್ಗಸೂಚಿಯಲ್ಲಿ ಮತ್ತೆ ಪರಿಷ್ಕಾರ ತರಲಾಗಿದೆ. ಹೊಸ ನಿಯಮಗಳ ಪ್ರಕಾರ ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದೆಡೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಸುವ ಸರಕುಗಳ ಸಾಗಣೆಗೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಈ ಕುರಿತು ಟಿವಿ9ಗೆ ಪೊಲೀಸ್ ಆಯುಕ್ತ ಕಮಲ್​ ಪಂತ್ ಮಾಹಿತಿ ನೀಡಿದ್ದಾರೆ. ಸಂಜೆ ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿಗೆ ಸರಕು ಸಾಗಣೆಗೆ ಅವಕಾಶ ನೀಡಲಾಗುವುದು. ಸರಕು ಸಾಗಿಸುವ ಲಾರಿ, ಟೆಂಪೊ, ಆಟೋಗಳಿಗೂ ನಗರದಲ್ಲಿ ನಿರ್ಬಂಧ ಹೇರಬೇಕು ಎಂದು ನಗರದ ಡಿಸಿಪಿಗಳಿಗೆ ಪೊಲೀಸ್ ಆಯುಕ್ತರು ಸೂಚಿಸಿದರು.

ಕೊರೊನಾ ಸೋಂಕಿನ 2ನೇ ಅಲೆಗೆ ತಡೆಯೊಡ್ಡಲು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು. ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸರು ನಿಯಮ ಜಾರಿಯನ್ನು ಬಿಗಿ ಮಾಡಿದರು. ಅನಗತ್ಯವಾಗಿ ಓಡಾಡುವವರಿಗೆ ಬಿಸಿ ಮುಟ್ಟಿಸಿದರು. ವಾಹನಗಳ ತಪಾಸಣೆ ತೀವ್ರಗೊಳಿಸಿದರು.

ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದಿದ್ದ 1,707 ವಾಹನಗಳನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದರು. ಈ ಪೈಕಿ 1530 ಬೈಕ್, 80 ಆಟೊಗಳು, 97 ಕಾರುಗಳು ಸೇರಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ 6 ಪ್ರಕರಣಗಳನ್ನು ದಾಖಲಿಸಲಾಗಿದೆ.

ಹಾಲು ಮಾರಾಟಕ್ಕೆ ಅವಕಾಶ ನೀಡಿ ಸರ್ಕಾರವು ಆದೇಶ ಹೊರಡಿಸಿದೆ.

ಕಮಲ್ ಪಂತ್​ಗೆ ಬಡ್ತಿ
ಇಬ್ಬರು IPS ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್ ಅವರಿಗೆ​ ಎಡಿಜಿಪಿಯಿಂದ ಡಿಜಿಪಿ ಱಂಕ್​ಗೆ ಬಡ್ತಿ ನೀಡಲಾಗಿದೆ. ಆರ್.‌ಹಿತೇಂದ್ರ ಅವರಿಗೆ ಐಜಿಪಿಯಿಂದ ಎಡಿಜಿಪಿ ಱಂಕ್​ಗೆ ಬಡ್ತಿ ನೀಡಲಾಗಿದೆ.

ಪೊಲೀಸರಿಗೆ ಕೊರೊನಾ ಸೋಂಕು
ಬೆಂಗಳೂರಿನಲ್ಲಿ ಈವರೆಗೆ 688 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 541 ಪೊಲೀಸರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 28 ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 112 ಪೊಲೀಸರು ಗುಣಮುಖರಾಗಿದ್ದಾರೆ, 7 ಪೊಲೀಸರು ಮೃತಪಟ್ಟಿದ್ದಾರೆ.

(Curfew Guidelines Changed in Karnataka Again Milk Selling Permitted Construction Activity Restricted)

ಇದನ್ನೂ ಓದಿ: ಮೇ 1ರಿಂದ ಮೂರನೇ ಹಂತದ ಕೊವಿಡ್​ ಲಸಿಕೆ ಅಭಿಯಾನ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಇದನ್ನೂ ಓದಿ: Karnataka Weekend Lockdown: ವೀಕೆಂಡ್​ ಲಾಕ್​ಡೌನ್- ಏನಿರುತ್ತೆ ಮತ್ತು ಏನಿರಲ್ಲ, ಯಾರೆಲ್ಲ ಆಚೆ ಬರಬಹುದು, ಆಸ್ಪತ್ರೆಗಳಿಗೆ ಹೋಗಬಹುದಾ? ಇಲ್ಲಿದೆ ಮಾಹಿತಿ

Published On - 10:20 pm, Thu, 29 April 21