ಬೀದರ್: ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆಯನ್ನು ರೈತರು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಹಬ್ಬದ ಸಂಭ್ರಮದಲ್ಲಿ ಜನರು ತೊಡಗಿದ್ದಾರೆ.
ನಗರವಾಸಿಗಳು ಹಬ್ಬದಲ್ಲಿ ಭಾಗಿ: ಹಳ್ಳಿಯ ಜನರು ಹೊಲದಲ್ಲಿ ಕೂತು ಕಾಳಿನ ಬಜ್ಜಿ, ರೊಟ್ಟಿ ಸೇರಿದಂತೆ ದೇಶಿ ಊಟದ ರುಚಿಯನ್ನು ಸವಿದು ಹಬ್ಬ ಸಂಭ್ರಮಿಸಿರುವುದರ ಜೊತೆಗೆ, ನಗರ ನಿವಾಸಿಗಳು ಒಂದು ದಿನದ ದೇಶಿ ಹಬ್ಬಕ್ಕೆ ಸಾಕ್ಷಿಯಾಗಿದ್ದರು. ಹೊಲದಲ್ಲಿ ಖಡಕ್ ರೊಟ್ಟಿ, ಕೆನೆ ಮೊಸರು, ಕಡುಬು, ಎಣ್ಣೆಗಾಯಿ ಬದನೆಕಾಯಿ ಪಲ್ಯ, ಹಸಿ ಟೊಮೊಟೊ, ಹಸಿ ಮೆಣಸಿನಕಾಯಿ ಮತ್ತು ಹಸಿ ಈರುಳ್ಳಿ ಚಟ್ನಿ, ಅಗಸೆ, ಶೇಂಗಾ ಚಟ್ನಿಪುಡಿ, ಅವರೆಕಾಳು, ಹೆಸರು, ಶೇಂಗಾ ಹೋಳಿಗೆ, ಸಜ್ಜಕ ಹೋಳಿಗೆ , ಬೇಳೆ ಹೋಳಿಗೆ ಹೀಗೆ ವಿವಿಧ ರೀತಿಯ ಅಡುಗೆ ಸಿದ್ಧಗೊಂಡಿತ್ತು.
ಸಾಂಪ್ರದಾಯಿಕ ಹಬ್ಬ: ಜೋಳದ ಕಿಚಡಿಗೆ ಎಲ್ಲ ಅಡುಗೆ ಮಿಶ್ರಣ ಮಾಡಿ ‘ಹರಿಗೋ ಮುರಿಗೋ’ ಎಂದೆನ್ನುತ್ತಾ (ಚರಗ ಚೆಲ್ಲುವರು) ಹೊಲದ ನಾಲ್ಕು ದಿಕ್ಕಿಗೆ ಸಿಂಪಡಿಸುತ್ತಾರೆ. ಆ ದಿನ ಹೊಲದಲ್ಲಿಯ ಗ್ರಾಮದೇವತೆ ಲಕ್ಷ್ಮಿಗೆ ಹೊಸ ಹೊದಿಕೆ ತೊಡಿಸಿ ಉಡಿ ತುಂಬುತ್ತಾರೆ. ನಮ್ಮನ್ನು ಸಲಹು ತಾಯಿ, ಹಗಲಿರುಳು ನಿನ್ನ ಹೊಲದಲ್ಲಿ ದುಡಿಯುವ ಮಕ್ಕಳನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ.
ಒಂದು ಸಮುದಾಯಕ್ಕೆಂದು ಸೀಮಿತವಲ್ಲ: ಈ ಹಬ್ಬ ಯಾವುದೇ ಒಂದು ಸಮುದಾಯಕ್ಕೆಂದು ಸೀಮಿತವಾಗಿಲ್ಲ. ಈ ದಿನ ಹೊಲದಲ್ಲಿ ಬಂದು ಹಬ್ಬ ಮಾಡುವುದರಿಂದ ಲಕ್ಷ್ಮಿ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ರೈತರದ್ದು. ಡಿಸೆಂಬರ್ ಜನವರಿ ತಿಂಗಳಲ್ಲಿ ರೈತನ ಮುಂಗಾರು ಬೆಳೆಯ ಕಟಾವು ಸಂದರ್ಭ. ಹಿಂಗಾರು ಬೆಳೆಗೆ ಮೊಳಕೆ ಸಂದರ್ಭ ಈ ಹಬ್ಬ ರೈತನಲ್ಲಿ ಸಂತಸ, ಹೊಸ ಹುಮ್ಮಸ್ಸು ಮೂಡಿಸುತ್ತದೆ.