ನೋಡನೋಡುತ್ತಲೇ ಧಗಧಗಿಸಿದ ಕಾರು; ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ಎರಡು ಕಾರುಗಳು ಹೊತ್ತಿ ಉರಿದ ಘಟನೆ ತುಮಕೂರು ಮತ್ತು ಚಾಮರಾಜನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೋಡನೋಡುತ್ತಲೇ ಧಗಧಗಿಸಿದ ಕಾರು; ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು
ಸಾಂದರ್ಭಿಕ ಚಿತ್ರ
Edited By: Rakesh Nayak Manchi

Updated on: Jan 01, 2023 | 9:41 PM

ತುಮಕೂರು: ಸ್ಟೇರಿಂಗ್ ಲಾಕ್ ಆಯ್ತು ಎಂದು ಪ್ರಯಾಣಿಕರೆಲ್ಲರೂ ಕೆಳಗಿಳಿದು ಪರಿಶೀಲಿಸುತ್ತಿದ್ದಾಗಲೇ ಕಾರು ಹೊತ್ತಿ ಉರಿದ (Car catches fire) ಘಟನೆ ಶಿರಾ (Fire Accident in Shira) ತಾಲೂಕಿನ ಡೊಡ್ಡ ಆಲದಮರದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿ ನಡೆದಿದೆ. ದೊಡ್ಡ ಆಲದಮರದ ಬಳಿ ಆಂಧ್ರಪ್ರದೇಶದ ನಾಲ್ವರು ಕಾರು ಮೂಲಕ ಪ್ರಯಾಣಿಸುತ್ತಿದ್ದಾಗ ಸ್ಟೇರಿಂಗ್ ಲಾಕ್ ಆಗಿದೆ. ಅದರಂತೆ ನಾಲ್ವರೂ ಕಾರಿನಿಂದ ಕೆಳಗೆ ಇಳಿದು ಪರಿಶೀಲಿಸುತ್ತಿದ್ದಾಗ ಏಕಾಏಕಿಯಾಗಿ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಅವಘಡ ಸಂಭವಿಸಿದ್ದು, ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಚಾಮರಾಜನಗರ: ನಡುರಸ್ತೆಯಲ್ಲೇ ಕಾರು ಹೊತ್ತಿ ಉರಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಬಳಿ ನಡೆದಿದೆ. ಹೊಸ ವರ್ಷಾಚರಣೆಗೆ ಕೇರಳ ರಾಜ್ಯದಿಂದ 7 ಜನರು ಕಾರು ಮೂಲಕ ಆಗಮಿಸುತ್ತಿದ್ದರು. ಅದರಂತೆ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟದಿಂದ ಹಿಂದಿರುಗುವಾಗ ಹೊನ್ನೇಗೌಡನಹಳ್ಳಿ ಬಳಿಯ ಗೋಪಾಲಪುರ ರಸ್ತೆಯಲ್ಲಿ ಏಕಾಏಕಿ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕೂಡಲೇ ಕಾರಿನಲ್ಲಿದ್ದ ಪ್ರಯಾಣಿಕರು ಕಾರಿನಿಂದ ಇಳಿದು ದೂರಕ್ಕೆ ಹೋಗಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದರೂ ಕಾರು ಸುಟ್ಟು ಕರಕಲಾಗಿದೆ. ರಸ್ತೆಯಲ್ಲಿ ಹರಡಿದ್ದ ಹುರುಳಿ ಸೊಪ್ಪು ಕಾರಿನಡಿ ಸಿಲುಕಿ ಇಂಜಿನ್​ಗೆ ತಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಗುಂಡ್ಲುಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Sun, 1 January 23

TV9 Web

TV9 Kannada

Read More
Follow Us