ಜಯದ ಹೊಸ್ತಿಲಲ್ಲಿ ಮತ್ತೊಮ್ಮೆ ಮುಗ್ಗುರಿಸಿದ ಪಂಜಾಬ್, ಸತತ ಆರನೇ ಸೋಲು

ಗೆಲ್ಲಲು 17 ಎಸೆತಗಳಲ್ಲಿ ಕೇವಲ 21 ರನ್ ಮಾತ್ರ ಬೇಕು, ಬ್ಯಾಟಿಂಗ್ ಮಾಡುತ್ತಿರುವ ತಂಡಕ್ಕೆ 9 ವಿಕೆಟ್​ಗಳು ಕೈಯಲ್ಲಿವೆ. ಅಂದ ಹಾಗೆ ಅದು ಪಂದ್ಯವನ್ನು ಸುಲಭವಾಗಿ ಗೆದ್ದಿರಬಹುದು ತಾನೆ? ಬೇರೆ ಯಾವುದೇ ತಂಡವಾದರೂ ಅದನ್ನು ಗೆದ್ದಿರುತ್ತೆ. ಆದರೆ ಕೆ ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೋತುಬಿಡುವುದು ಅಭ್ಯಾಸವಾಗಿಬಿಟ್ಟಿದೆ. ಸೋಲಿನ ದವಡೆಯಿಂದ ಗೆಲುವನ್ನು ಕಿತ್ತುಕೊಂಡರು ಎನ್ನವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ, ಪಂಜಾಬ್ ಟೀಮು ಅದನ್ನು ಉಲ್ಟಾ ಮಾಡಿದೆ. ಕೊಲ್ಕತಾ ನೈಟ್​ರೈಡರ್ಸ್ […]

ಜಯದ ಹೊಸ್ತಿಲಲ್ಲಿ ಮತ್ತೊಮ್ಮೆ ಮುಗ್ಗುರಿಸಿದ ಪಂಜಾಬ್, ಸತತ ಆರನೇ ಸೋಲು
ಪ್ರಸಿದ್ಧ್​ ಕೃಷ್ಣ

Updated on: Oct 10, 2020 | 9:01 PM

ಗೆಲ್ಲಲು 17 ಎಸೆತಗಳಲ್ಲಿ ಕೇವಲ 21 ರನ್ ಮಾತ್ರ ಬೇಕು, ಬ್ಯಾಟಿಂಗ್ ಮಾಡುತ್ತಿರುವ ತಂಡಕ್ಕೆ 9 ವಿಕೆಟ್​ಗಳು ಕೈಯಲ್ಲಿವೆ. ಅಂದ ಹಾಗೆ ಅದು ಪಂದ್ಯವನ್ನು ಸುಲಭವಾಗಿ ಗೆದ್ದಿರಬಹುದು ತಾನೆ? ಬೇರೆ ಯಾವುದೇ ತಂಡವಾದರೂ ಅದನ್ನು ಗೆದ್ದಿರುತ್ತೆ. ಆದರೆ ಕೆ ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೋತುಬಿಡುವುದು ಅಭ್ಯಾಸವಾಗಿಬಿಟ್ಟಿದೆ. ಸೋಲಿನ ದವಡೆಯಿಂದ ಗೆಲುವನ್ನು ಕಿತ್ತುಕೊಂಡರು ಎನ್ನವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ, ಪಂಜಾಬ್ ಟೀಮು ಅದನ್ನು ಉಲ್ಟಾ ಮಾಡಿದೆ.

ಕೊಲ್ಕತಾ ನೈಟ್​ರೈಡರ್ಸ್ ವಿರುದ್ಧ ಇಂದು ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಮೈದಾನಕ್ಕಿಳಿದ ಪಂಜಾಬ್ ಕೊನೆವರೆಗೂ ಚೆನ್ನಾಗಿ ಆಡಿ ಜಯದ ಹೊಸ್ತಲಲ್ಲಿ ಬಂದು ಎಡವಿತು. ಟಾಸ್ ಗೆದ್ದು ಬ್ಯಾಟ್ ಮಾಡಲು ನಿರ್ಧರಿಸಿದ ಕೊಲ್ಕತಾ ಕೆಟ್ಟ ಆರಂಭದ ಹೊರತಾಗಿಯೂ ಉತ್ತಮ ಎನ್ನಬಹುದಾದ 164/5 ಮೊತ್ತ ಗಳಿಸಿತು. ಮುಜೀಬ್ ಉರ್ ರಹೆಮಾನ್ ಮತ್ತು ಕ್ರಿಸ್ ಜೊರ್ಡನ್ ಅವರನ್ನು ಬಿಟ್ಟರೆ, ಪಂಜಾಬಿನ ಇತರ ಬೌಲರ್​ಗಳು ನಿಯಂತ್ರಣ ಕಾಯ್ದುಕೊಂಡು ಕೊಲ್ಕತಾ ಬ್ಯಾಟ್ಸ್​ಮನ್​ಗಳನ್ನು ಕಟ್ಟಿ ಹಾಕುವಲ್ಲಿ ಯಶಕಂಡರು. ಮೊಹಮ್ಮದ್ ಶಮಿ 30 ರನ್ ನೀಡಿ 1 ವಿಕೆಟ್ ಪಡೆದರೆ, ಅತ್ಯಂತ ಕರಾರುವಕ್ಕಾದ ದಾಳಿ ನಡೆಸಿದ ಅಕ್ಷರ್​ದೀಪ್ ಸಿಂಗ್ ತನ್ನ 4 ಓವರ್​ಗಳಲ್ಲಿ 1 ಮೇಡನ್ ಎಸೆದು ಕೇವಲ 25 ರನ್ ನೀಡಿ 1 ವಿಕೆಟ್ ಪಡೆದರು. ರವಿ ಬಿಷ್ಣೋಯಿ ಮತ್ತೊಮ್ಮೆ ಜಿಗುಟುತನದ ಬೌಲಿಂಗ್ ಪ್ರದರ್ಶಿಸಿ 25 ರನ್​ಗಳಿಗೆ 1 ವಿಕೆಟ್ ಪಡೆದರು.

ಬಹಳ ಸಮಯದ ನಂತರ ಬ್ಯಾಟಿಂಗ್​ನಲ್ಲಿ ಮಿಂಚಿದ ದಿನೇಶ್ ಕಾರ್ತೀಕ್ ಇಂದು ಕೇವಲ 29 ಎಸೆತಗಳಲ್ಲಿ 58 ರನ್ (8X4 2X6) ಚಚ್ಚಿದರು. ಹಾಗೆಯೇ, ಮತ್ತೊಮ್ಮೆ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಶುಭ್​ಮನ್ ಗಿಲ್ 47 ಎಸೆತಗಳಲ್ಲಿ 57 (5X4) ಬಾರಿಸಿದರು.

ಇಂಪೋಸಿಂಗ್ ಅಲ್ಲದ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್​ನ ಆರಂಭ ಕೊಲ್ಕತಾದ ಆರಂಭಕ್ಕೆ ತದ್ವಿರುದ್ಧವಾಗಿತ್ತು. ರಾಹುಲ್ (74 58 6X4) ಹಾಗೂ ಮಾಯಾಂಕ್ ಅಗರ್ವಾಲ್(56 39 6X4 1X6) 14 ಓವರ್​ಗಳಲ್ಲಿ 115 ರನ್ ಸೇರಿಸಿದರು. ಅಗರ್ವಾಲ್ ಔಟಾದ ನಂತರ ಆಡಲು ಬಂದ ನಿಕೊಲಾಸ್ ಪೂರನ್ 10 ಎಸೆತಗಳಲ್ಲಿ 16 ರನ್ ಬಾರಿಸಿ ಟೀಮಿನ ಸ್ಕೋರನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಆ ಸಂದರ್ಭದಲ್ಲೇ ಪಂಜಾಬ್​ಗೆ 17 ಎಸೆತಗಳಲ್ಲಿ 21 ರನ್ ಬೇಕಿದ್ದವು. ಗೆಲುವು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಆದರೆ, ಪಂಜಾಬ್ ಜಯದ ಹೊಸ್ತಿಲಲ್ಲಿ ಮುಗ್ಗುರಿಸಿತು.

ಮಧ್ಯಮ ವೇಗದ ಬೌಲರ್ ಕರ್ನಾಟಕದ ಪ್ರಸಿಧ್ ಕೃಷ್ಣ ತಮ್ಮ ನಿಖರವಾದ ಬೌಲಿಂಗ್ ಮೂಲಕ (3/29) ಪಂಜಾಬ್ ಸೋಲಿಗೆ ಕಾರಣರಾದರು. ಅವರಷ್ಟೇ ಉತ್ತಮವಾಗಿ ದಾಳಿ ನಡೆಸಿದ ಮತ್ತು ನಿರ್ಣಾಯಕ ಕೊನೆಯ ಓವರ್ ಬೌಲ್ ಮಾಡಿದ ಸುನಿಲ್ ನರೈನ್ 28ರನ್ ಮಾತ್ರ ನೀಡಿ 2 ವಿಕೆಟ್ ಪಡೆದರು.

ಅಂತಿಮ ಸ್ಕೋರ್​ಗಳು

ಕೊಲ್ಕತಾ ನೈಟ್ ರೈಡರ್ಸ್: 164/5 (20 ಓವರ್)

ಕಿಂಗ್ಸ್ ಇಲೆವೆನ್ ಪಂಜಾಬ್: 162/5 (20 ಓವರ್)

ಫಲಿತಾಂಶ: ಕೊಲ್ಕತಾ ನೈಟ್ ರೈಡರ್ಸ್​ಗೆ 2 ರನ್​ಗಳ ಜಯ