ದೇಶದ 3 ಸೇನಾಪಡೆಗಳಿಗೂ ಇನ್ಮುಂದೆ ಏಕೈಕ ದಂಡನಾಯಕ

ದೆಹಲಿ: ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ. ದೇಶದ ರಕ್ಷಣಾ ವ್ಯವಸ್ಥೆಯ ಮೂರು ಅಂಗಗಳು. ಭಯೋತ್ಪಾದಕರ ಹುಟ್ಟಡಗಿಸಲು, ಯುದ್ಧದಂಥ ಪರಿಸ್ಥಿತಿ ಎದುರಿಸಲು ಸದಾ ಸಿದ್ಧವಿರೋ ಸಶಸ್ತ್ರ ಪಡೆಗಳು. ಈ ಮೂರೂ ಸೇನೆಗಳ ನಡುವೆ ಸಮನ್ವಯತೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 3 ಸೇನಾಪಡೆಗಳಿಗೂ ಇನ್ಮುಂದೆ ಏಕೈಕ ದಂಡನಾಯಕ: ದೇಶದ ಮೂರೂ ಸಶಸ್ತ್ರ ಪಡೆಗಳಿಗೆ ಒಬ್ಬರೇ ಮುಖ್ಯಸ್ಥರನ್ನ ನೇಮಿಸುವ ಕುರಿತಂತೆ ಕೇಂದ್ರ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಭದ್ರತೆಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಮಿತಿಯು ಸಿಡಿಎಸ್​ ಅಂದ್ರೆ […]

ದೇಶದ 3 ಸೇನಾಪಡೆಗಳಿಗೂ ಇನ್ಮುಂದೆ ಏಕೈಕ ದಂಡನಾಯಕ
ಸಾಧು ಶ್ರೀನಾಥ್​

Updated on: Dec 25, 2019 | 7:20 AM

ದೆಹಲಿ: ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ. ದೇಶದ ರಕ್ಷಣಾ ವ್ಯವಸ್ಥೆಯ ಮೂರು ಅಂಗಗಳು. ಭಯೋತ್ಪಾದಕರ ಹುಟ್ಟಡಗಿಸಲು, ಯುದ್ಧದಂಥ ಪರಿಸ್ಥಿತಿ ಎದುರಿಸಲು ಸದಾ ಸಿದ್ಧವಿರೋ ಸಶಸ್ತ್ರ ಪಡೆಗಳು. ಈ ಮೂರೂ ಸೇನೆಗಳ ನಡುವೆ ಸಮನ್ವಯತೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

3 ಸೇನಾಪಡೆಗಳಿಗೂ ಇನ್ಮುಂದೆ ಏಕೈಕ ದಂಡನಾಯಕ:
ದೇಶದ ಮೂರೂ ಸಶಸ್ತ್ರ ಪಡೆಗಳಿಗೆ ಒಬ್ಬರೇ ಮುಖ್ಯಸ್ಥರನ್ನ ನೇಮಿಸುವ ಕುರಿತಂತೆ ಕೇಂದ್ರ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಭದ್ರತೆಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಮಿತಿಯು ಸಿಡಿಎಸ್​ ಅಂದ್ರೆ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಹುದ್ದೆ ಸೃಷ್ಟಿಗೆ ಅನುಮೋದನೆ ನೀಡಿದೆ. ಇವರೇ ಮೂರು ಸೇನೆಗಳ ಮುಖ್ಯಸ್ಥರಾಗಿರ್ತಾರೆ. ಅಲ್ಲದೆ, ಸರ್ಕಾರ ಮತ್ತು ಸೇನೆ ನಡುವೆ ಏಕವ್ಯಕ್ತಿ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾರೆ.

ಕಾರ್ಗಿಲ್ ಯುದ್ಧದ ಬಳಿಕ ನೇಮಿಸಿದ್ದ ಸೇನಾ ಸುಧಾರಣಾ ಸಮಿತಿಯ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸಿಡಿಎಸ್‌ ಹುದ್ದೆ ಅತ್ಯಗತ್ಯ ಅಂತ ಶಿಫಾರಸು ಮಾಡಿತ್ತು. ಪ್ರಧಾನಿ ಮೋದಿ ಕೂಡ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಸಿಡಿಎಸ್‌ ನೇಮಕಾತಿ ಕುರಿತು ಪ್ರಸ್ತಾಪಿಸಿದ್ದರು.

ಬಿಪಿನ್ ರಾವತ್ ಆಗ್ತಾರಾ ದೇಶದ ಮೊದಲ ಸಿಡಿಎಸ್..?
ಭೂಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್‌ ರಾವತ್‌ ಡಿಸೆಂಬರ್ 31ರಂದು ನಿವೃತ್ತಿ ಹೊಂದಲಿದ್ದಾರೆ. ಸೇನೆಯಲ್ಲಿ ಸದ್ಯ ಅತಿ ಹಿರಿಯ ಅಧಿಕಾರಿ ಇವರಾಗಿದ್ದಾರೆ. ಹೀಗಾಗಿ, ಬಿಪಿನ್‌ ರಾವತ್ತೇ ದೇಶದ ಮೊದಲ ಸಿಡಿಎಸ್‌ ಆಗಿ ನೇಮಕವಾಗುವ ಸಾಧ್ಯತೆ ಹೆಚ್ಚಿದೆ.

ಸಿಡಿಎಸ್​ ಜವಾಬ್ದಾರಿ & ಅಧಿಕಾರ:
ದೇಶದ ರಕ್ಷಣಾ ಸಚಿವರು ಹಾಗೂ ಮೂರೂ ಸಶಸ್ತ್ರ ಪಡೆಗಳ ದಂಡನಾಯಕರಿಗೆ ಮುಖ್ಯ ಸೇನಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ. ಮೂರು ಪಡೆಗಳ ಆಡಳಿತಾಧಿಕಾರದ ಜೊತೆಗೆ ಬಾಹ್ಯಾಕಾಶ ಮತ್ತು ಸೈಬರ್‌ಸ್ಪೇಸ್‌ ಕ್ಷೇತ್ರಗಳು ಕೂಡ ಸಿಡಿಎಸ್‌ ಅಧಿಕಾರ ವ್ಯಾಪ್ತಿಗೆ ಬರಲಿವೆ. ರಕ್ಷಣಾ ಶಸ್ತ್ರಾಸ್ತ್ರಗಳ ಖರೀದಿ ಮಂಡಳಿ ಹಾಗೂ ರಕ್ಷಣಾ ಯೋಜನಾ ಸಮಿತಿಯ ಸದಸ್ಯರಾಗಿ ಇರಲಿದ್ದಾರೆ. ಮೂರು ಸೇನೆಗಳ ನಡುವೆ ಕಾರ್ಯನಿರ್ವಹಣೆ, ತರಬೇತಿ, ಸಾರಿಗೆ, ಸೇವೆ, ಸಂಪರ್ಕ, ನಿರ್ವಹಣೆ ಕುರಿತು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು.

ಲಭ್ಯವಿರುವ ಸಂಪನ್ಮೂಲಗಳನ್ನ ಪರಿಣಾಮಕಾರಿಯಾಗಿ ಬಳಕೆಯಾಗುವಂತೆ ಮಾಡುವುದು. ದೇಶೀಯ ಶಸ್ತ್ರಾಸ್ತ್ರಗಳ ಪ್ರಮಾಣ ಹೆಚ್ಚಾಗುವಂತೆ ಮಾಡುವುದು ಸಿಡಿಎಸ್​ ಜವಾಬ್ದಾರಿಯಾಗಿದೆ. ಪಂಚವಾರ್ಷಿಕ ರಕ್ಷಣಾ ಬಂಡವಾಳ ಸ್ವಾಧೀನ ಯೋಜನೆ ಹಾಗೂ ವಾರ್ಷಿಕ ಖರೀದಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು. ಅಂತಾರಾಷ್ಟ್ರೀಯ ರಕ್ಷಣಾ ಸಹಕಾರ ಯೋಜನೆಗಳು ದೇಶಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳುವುದು ಸಿಡಿಎಸ್ ಜವಾಬ್ದಾರಿಯಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us