ಮಾದಕ ದ್ರವ್ಯ ಕಳ್ಳ ಸಾಗಾಣಿಕಾ ದಂಧೆಯ ಬಂದೂಕಿನ ನಳಿಗೆಯಲ್ಲಿ ಸಿಲುಕಿರುವ ಭಾರತ

|

Updated on: Apr 09, 2023 | 11:46 AM

ಎಐಐಎಂಎಸ್ (ಏಮ್ಸ್) ವರದಿಯ ಪ್ರಕಾರ, ಭಾರತದ ಮಾದಕ ವ್ಯಸನಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಹಾಗೂ ಆಂಧ್ರಪ್ರದೇಶಗಳಿಗೆ ಸೇರಿದ್ದಾರೆ. ಆದರೆ ಮಾದಕ ವ್ಯಸನ ಎನ್ನುವುದು ಒಂದು ಗಂಭೀರ ವಿಚಾರವಾಗಿದ್ದು, ಭೂಪ್ರದೇಶಗಳು ಮತ್ತು ಸಮುದಾಯಗಳಿಗೆ ಭಿನ್ನವಾಗುತ್ತಾ ಹೋಗುತ್ತವೆ

ಮಾದಕ ದ್ರವ್ಯ ಕಳ್ಳ ಸಾಗಾಣಿಕಾ ದಂಧೆಯ ಬಂದೂಕಿನ ನಳಿಗೆಯಲ್ಲಿ ಸಿಲುಕಿರುವ ಭಾರತ
ಮಾದಕ ವ್ಯಸನಿ
Follow us on

ಭಾರತದ ಯುವ ಜನತೆಯಲ್ಲಿ (Youngsters) ಮಾದಕ ವ್ಯಸನ (Drug addicts) ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದೆ. ದ ವರ್ಲ್ಡ್ ಡ್ರಗ್ ರಿಪೋರ್ಟ್ 2021 ಪ್ರಿಸ್ಕ್ರಿಪ್ಷನ್ ಡ್ರಗ್ಸ್ ಹಾಗೂ ಅವುಗಳ ಪದಾರ್ಥಗಳು, ಅಥವಾ ಅವುಗಳ ‘ಪೂರ್ವಗಾಮಿಗಳು’ ಜಗತ್ತಿನ ಅತಿದೊಡ್ಡ ಜೆನೆರಿಕ್ ಔಷಧ ಉತ್ಪಾದಕನಾದ ಭಾರತಕ್ಕೆ ಹೆಚ್ಚು ಹೆಚ್ಚು ದಾರಿ ಹುಡುಕುತ್ತಿವೆ. ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) 2019ರಲ್ಲಿ ಪ್ರಕಟಿಸಿದ ‘ಮ್ಯಾಗ್ನಿಟ್ಯೂಡ್ ಆಫ್ ಸಬ್ಸ್ಟೆನ್ಸ್ ಯೂಸ್ ಇನ್ ಇಂಡಿಯಾ’ ಎಂಬ ವರದಿಯಲ್ಲಿ, 2018ರ ಸಮೀಕ್ಷೆಗೂ ಮೊದಲೇ, 8 ಕೋಟಿ ಭಾರತೀಯರು ಓಪಿಯಾಯ್ಡ್ ಅಥವಾ ಗಾಂಜಾ ಉಪಯೋಗಿಸಿರುವುದಾಗಿ ಉಲ್ಲೇಖಿಸಲಾಗಿದೆ.

ಭಾರತ ವಿವಿಧ ದೇಶಗಳೊಡನೆ ನಾರ್ಕೋಟಿಕ್ಸ್, ಡ್ರಗ್ಸ್, ಹಾಗೂ ಸೈಕೋಟ್ರೊಪಿಕ್ ಉತ್ಪನ್ನಗಳ ಕಳ್ಳ ಸಾಗಾಣಿಕೆಯನ್ನು ತಡೆಯುವ ಸಲುವಾಗಿ 26 ದ್ವಿಪಕ್ಷೀಯ ಒಪ್ಪಂದಗಳು, 15 ಎಂಒಯುಗಳು ಹಾಗೂ 2 ರಕ್ಷಣಾ ಸಹಕಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಜಗತ್ತಿನಾದ್ಯಂತ ವಿವಿಧ ಸಂಸ್ಥೆಗಳೊಡನೆ ಸಮನ್ವಯ ಸಾಧಿಸಿ, ಗಡಿಯಾಚೆಗಿನ ಮಾದಕ ವಸ್ತು ಕಳ್ಳ ಸಾಗಾಣಿಕೆಯ ವಿರುದ್ಧ ಹೋರಾಡಲು ಪ್ರಯತ್ನ ನಡೆಸುತ್ತಿದೆ. ಭಾರತದಾದ್ಯಂತ ಮಾದಕ ವಸ್ತುಗಳ ವಶಪಡಿಸಿಕೊಂಡ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಗೃಹ ಸಚಿವಾಲಯ (ಎಂಎಚ್ಎ) ‘ಎಸ್ಐಎಂಎಸ್’ ಎಂಬ ಇ-ಪೋರ್ಟಲ್ ಅನ್ನು 2019ರಲ್ಲಿ ಆರಂಭಿಸಿತು. ಈ ಮೂಲಕ ಮಾದಕ ವಸ್ತುಗಳಿಗೆ ಸಂಬಂಧಿಸಿದ ಎಲ್ಲ ಕಾನೂನು ಜಾರಿ ಸಂಸ್ಥೆಗಳು ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೊಪಿಕ್ ಸಬ್‌ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯಿದೆಯಡಿಯಲ್ಲಿ ಬರುವಂತಾಯಿತು. ಭಾರತ ಜಗತ್ತಿನ ಅತ್ಯಧಿಕ ಓಪಿಯಂ ಉತ್ಪಾದಕ ಪ್ರದೇಶಗಳಾದ – ಗೋಲ್ಡನ್ ಟ್ರಯಾಂಗಲ್ ಮತ್ತು ಗೋಲ್ಡನ್ ಕ್ರೆಸೆಂಟ್‌ಗಳಿಂದ ಆವೃತವಾಗಿದೆ. ಮೊದಲನೆಯದಾದ ಗೋಲ್ಡನ್ ಟ್ರಯಾಂಗಲ್ ಎನ್ನುವುದು ಥೈಲ್ಯಾಂಡ್, ಲಾವೋಸ್ ಹಾಗೂ ಮಯನ್ಮಾರ್‌ಗಳ ಗಡಿಗಳು ಸೇರುವ, ರುವಾಕ್ ಮತ್ತು ಮೆಕಾಂಗ್ ನದಿಗಳು ಸಂಧಿಸುವ ಭೂಪ್ರದೇಶವಾಗಿದೆ. ಗೋಲ್ಡನ್ ಕ್ರೆಸೆಂಟ್ ಆಗಿರುವ ಅಫ್ಘಾನಿಸ್ತಾನವೂ ಸೇರಿದಂತೆ, ಈ ಭೂಪ್ರದೇಶಗಳು 1950ರ ದಶಕದ ಬಳಿಕ ಜಗತ್ತಿನ ಅತಿದೊಡ್ಡ ಓಪಿಯಂ ಉತ್ಪಾದಕ ಪ್ರದೇಶವಾಗಿದೆ. 21ನೇ ಶತಮಾನದ ಆರಂಭದ ತನಕವೂ, ಗೋಲ್ಡನ್ ಟ್ರಯಾಂಗಲ್ ಪ್ರದೇಶ ಜಗತ್ತಿನ ಅತ್ಯಧಿಕ ಹೆರಾಯಿನ್ ಉತ್ಪಾದಿಸುವ ಪ್ರದೇಶ ಎನಿಸಿಕೊಂಡಿತ್ತು. ಆದರೆ ಅಫ್ಘಾನಿಸ್ತಾನ ಈ ಸ್ಥಾನವನ್ನು ಪಡೆದುಕೊಂಡು, ಜಗತ್ತಿನ ಅತಿದೊಡ್ಡ ಓಪಿಯಂ ಉತ್ಪಾದಕ ಎಂಬ ಕುಖ್ಯಾತಿ ಗಳಿಸಿತು.

ಈ ಗೋಲ್ಡನ್‌ ಕ್ರೆಸೆಂಟ್ ಎನ್ನುವುದು ಏಷ್ಯಾದ ಅಕ್ರಮ ಓಪಿಯಂ ಉತ್ಪಾದನೆಯ ಎರಡು ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ. ಕೇಂದ್ರ, ಪಶ್ಚಿಮ ಹಾಗೂ ದಕ್ಷಿಣ ಏಷ್ಯಾಗಳ ಸಂಗಮ ಸ್ಥಾನದಲ್ಲಿರುವ ಈ ಪ್ರದೇಶ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಪೂರ್ವ ಇರಾನಿನ ಪರ್ವತ ಪ್ರದೇಶಗಳ ತನಕ ವ್ಯಾಪಿಸಿದೆ. ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಆ್ಯಂಡ್ ಕ್ರೈಮ್ (ಯುಎನ್ಒಡಿಸಿ) ವರದಿಯ ಪ್ರಕಾರ, ಗೋಲ್ಡನ್ ಟ್ರಯಾಂಗಲ್ ಹಾಗೂ ಗೋಲ್ಡನ್ ಕ್ರೆಸೆಂಟ್ ಎರಡು ಭೂಪ್ರದೇಶಗಳು ಅಕ್ರಮ ಬೆಳೆಗಳನ್ನು ಇನ್ನಷ್ಟು ಹೆಚ್ಚಿಸಿವೆ. ಮಯನ್ಮಾರಿನಲ್ಲಿ ಗಸಗಸೆ ಬೆಳೆಯುವ ಪ್ರದೇಶ 33% ಹೆಚ್ಚಾಗಿದ್ದರೆ, ಅಫ್ಘಾನಿಸ್ತಾನ 2022ರಿಂದ 32% ಹೆಚ್ಚಳ ದಾಖಲಿಸಿದೆ.

ಏಮ್ಸ್ ನಡೆಸಿದ ಸಮೀಕ್ಷೆಯ ವರದಿಯ ಪ್ರಕಾರ, ಭಾರತದ ಮಾದಕ ವ್ಯಸನಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಹಾಗೂ ಆಂಧ್ರಪ್ರದೇಶಗಳಿಗೆ ಸೇರಿದ್ದಾರೆ. ಆದರೆ ಗಮನಿಸಬೇಕಾದ ಅಂಶವೆಂದರೆ, ಮಾದಕ ವ್ಯಸನ ಎನ್ನುವುದು ಒಂದು ಸಂಕೀರ್ಣ ವಿಚಾರವಾಗಿದ್ದು, ಪ್ರದೇಶ ಮತ್ತು ಜನಾಂಗದ ಆಧಾರದಲ್ಲಿ ಅಪಾರ ವ್ಯತ್ಯಾಸ ಹೊಂದಿರಬಹುದು. ಸಮೀಕ್ಷೆಗಳನ್ನು ಆಧರಿಸಿದ ಸರ್ಕಾರಿ ವರದಿಯ ಪ್ರಕಾರ, ಪಂಜಾಬಿನ 67% ಗ್ರಾಮೀಣ ಮನೆಗಳಲ್ಲಿ ಕನಿಷ್ಠ ಒಬ್ಬ ಮದ್ಯ ವ್ಯಸನಿ ಅಥವಾ ಮಾದಕ ದ್ರವ್ಯ ವ್ಯಸನಿ ಇದ್ದಾರೆ. ಪಂಜಾಬಿನ 70% ಯುವ ಜನತೆ ಮಾದಕದ್ರವ್ಯ ಅಥವಾ ಮದ್ಯ ವ್ಯಸನಕ್ಕೆ ಒಳಗಾಗಿದ್ದಾರೆ. ಈ ವ್ಯಸನ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಹಲವಾರು ವರ್ಷಗಳಿಂದ ರಾಜ್ಯಕ್ಕೆ ಪ್ರಮುಖ ಸಮಸ್ಯೆಯಾಗಿದೆ. ಹಲವು ಪ್ರಕರಣಗಳಲ್ಲಿ, ಉಗ್ರರಿಗೆ ಹಣ ಪೂರೈಕೆ ನಡೆಸಿರುವ ಅಥವಾ ನಾರ್ಕೋ ಟೆರರಿಸಂ ಅನ್ನು ಒಳಗೊಂಡಿರುವ ಅಂಶಗಳು ಬೆಳಕಿಗೆ ಬಂದಿದ್ದು, ಎನ್ಐಎ ಇದರ ವಿಚಾರಣೆ ನಡೆಸಿದೆ.

ಇದನ್ನೂ ಓದಿ: ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಯಾದ ಫಿನ್‌ಲ್ಯಾಂಡ್: ಕಿಡಿ ಹಚ್ಚಿದ ಪುಟಿನ್‌ಗೆ ಜಾಗತಿಕ ರಾಜಕಾರಣದಲ್ಲಿ ಹೊಸ ದುಃಸ್ವಪ್ನ

ಪಂಜಾಬ್ ಸರ್ಕಾರ ಮಾದಕ ವ್ಯಸನದ ವಿರುದ್ಧ ಹೋರಾಡಲು ಎರಡು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಅವೆಂದರೆ, ಬಡಿ ಹಾಗೂ ಡ್ರಗ್ ಅಬ್ಯೂಸ್ ಪ್ರಿವೆನ್ಷನ್ ಆಫೀಸರ್ಸ್ (ಡಿಎಪಿಓ) ಯೋಜನೆಗಳು. ಬಡಿ ಯೋಜನೆಯು ಅನುಮಾನಾಸ್ಪದವಾಗಿರುವ ಹದಿಹರೆಯದ ಯುವಜನತೆಯನ್ನು ಗುರುತಿಸಿ, ಅವರು ಮಾದಕ ದ್ರವ್ಯಗಳ ಜಾಲಕ್ಕೆ ಬೀಳದಂತೆ ತಡೆಯುವ ಉದ್ದೇಶ ಹೊಂದಿದೆ. ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಡಿ ಗುಂಪುಗಳನ್ನು ರಚಿಸಲಾಗಿದೆ. ಬಡಿ ಸದಸ್ಯರ ಪಾತ್ರವೆಂದರೆ ಮಾದಕ ದ್ರವ್ಯ ಸೇವನೆಯ ಲಕ್ಷಣಗಳನ್ನು ಗುರುತಿಸುವುದು, ಮಾದಕ ದ್ರವ್ಯ ಸೇವಿಸುವ ವಿದ್ಯಾರ್ಥಿಗಳೊಡನೆ ಧನಾತ್ಮಕ ವಿಚಾರಗಳ ಕುರಿತು ಚರ್ಚಿಸುವುದು, ಅವರಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುವುದು ಮತ್ತು ಅವರಿಗೆ ಆಗಾಗ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು. ಈ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವ್ಯಸನದ ಹಾವಳಿ ತಪ್ಪಿಸಲು ಪಂಜಾಬ್ ಸರ್ಕಾರ ಪ್ರಯತ್ನ ನಡೆಸುತ್ತಿದೆ.

ಲೇಖನ: ಗಿರೀಶ್​ ಲಿಂಗಣ್ಣ- ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ