National Defence: ಹಿಂದೂ ಮಹಾಸಾಗರದಲ್ಲಿ ಚೀನಾದ ಆಕ್ರಮಣಕಾರಿ ಪ್ರವೃತ್ತಿ: ಹಲವು ಪ್ರತಿತಂತ್ರ ಹೆಣೆಯುತ್ತಿರುವ ಭಾರತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 28, 2021 | 9:00 AM

2021ರ ಅಮೆರಿಕದ ರಕ್ಷಣಾ ವಾರ್ಷಿಕ ವರದಿಯ ಪ್ರಕಾರ, ಚೀನಾ ತನ್ನ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿಯನ್ನು ವಿಶ್ವದ ಅತಿದೊಡ್ಡ ನೌಕಾಪಡೆಯಾಗಿ ನಿರ್ಮಿಸಿದೆ. ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಲು ಚೀನಾದ ಮತ್ತೊಂದು ಸಂಘಟಿತ ಪ್ರಯತ್ನವೆಂದು ಈ ಬೆಳವಣಿಗೆಯನ್ನು ತಳ್ಳಿಹಾಕಬಹುದಿತ್ತು. ಆದರೆ ಇದು ಅಷ್ಟು ಸರಳವಲ್ಲ. ನೌಕಾಪಡೆಯ ಮೂಲಕ, ಕಳೆದ ಎರಡು ದಶಕಗಳಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಆಸಕ್ತಿಯನ್ನು ಚೀನಾ ಮಹತ್ತರವಾಗಿ ಹೆಚ್ಚಿಸಿದೆ. ಸಾಗರದಲ್ಲಿ ಬೀಜಿಂಗ್‌ನ ಹೆಜ್ಜೆಗುರುತುಗಳ ಜಾಡನ್ನು ಹಿಡಿಯಲು ಅಮೆರಿಕ ಮತ್ತು ಭಾರತ ಒಂದಾಗಿವೆ. ಆದರೆ, ಅದಕ್ಕಾಗಿ ಇನ್ನೂ […]

National Defence: ಹಿಂದೂ ಮಹಾಸಾಗರದಲ್ಲಿ ಚೀನಾದ ಆಕ್ರಮಣಕಾರಿ ಪ್ರವೃತ್ತಿ: ಹಲವು ಪ್ರತಿತಂತ್ರ ಹೆಣೆಯುತ್ತಿರುವ ಭಾರತ
ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್​ಎಸ್ ವಿಕ್ರಮಾದಿತ್ಯ
Follow us on

2021ರ ಅಮೆರಿಕದ ರಕ್ಷಣಾ ವಾರ್ಷಿಕ ವರದಿಯ ಪ್ರಕಾರ, ಚೀನಾ ತನ್ನ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿಯನ್ನು ವಿಶ್ವದ ಅತಿದೊಡ್ಡ ನೌಕಾಪಡೆಯಾಗಿ ನಿರ್ಮಿಸಿದೆ. ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಲು ಚೀನಾದ ಮತ್ತೊಂದು ಸಂಘಟಿತ ಪ್ರಯತ್ನವೆಂದು ಈ ಬೆಳವಣಿಗೆಯನ್ನು ತಳ್ಳಿಹಾಕಬಹುದಿತ್ತು. ಆದರೆ ಇದು ಅಷ್ಟು ಸರಳವಲ್ಲ. ನೌಕಾಪಡೆಯ ಮೂಲಕ, ಕಳೆದ ಎರಡು ದಶಕಗಳಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಆಸಕ್ತಿಯನ್ನು ಚೀನಾ ಮಹತ್ತರವಾಗಿ ಹೆಚ್ಚಿಸಿದೆ. ಸಾಗರದಲ್ಲಿ ಬೀಜಿಂಗ್‌ನ ಹೆಜ್ಜೆಗುರುತುಗಳ ಜಾಡನ್ನು ಹಿಡಿಯಲು ಅಮೆರಿಕ ಮತ್ತು ಭಾರತ ಒಂದಾಗಿವೆ. ಆದರೆ, ಅದಕ್ಕಾಗಿ ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗಿದೆ ಎನ್ನುತ್ತಾರೆ ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ.

ಹಿಂದೂ ಮಹಾಸಾಗರ ಪ್ರದೇಶವು (Indian Ocean Region – IOR) ಭಾರತಕ್ಕೆ ಮಾತ್ರವಲ್ಲ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕಕ್ಕೂ ವ್ಯಾಪಾರ ಮತ್ತು ವಾಣಿಜ್ಯ ಉದ್ದೇಶದ ಸಮುದ್ರ ಮಾರ್ಗವಾಗಿದೆ. ಈ ಪ್ರದೇಶದಲ್ಲಿ ಚೀನಾ ನೌಕಾಪಡೆಯ ಸಾಮರ್ಥ್ಯ ವೃದ್ಧಿಸುತ್ತಿರುವುದು ಇಂಡೋ-ಪೆಸಿಫಿಕ್ ಶಕ್ತಿಗಳ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ, ತನ್ನ ನೌಕಾಪಡೆಯ ಸಾಮರ್ಥ್ಯಗಳನ್ನು ವೃದ್ಧಿಸಲು ಪ್ರಯತ್ನಿಸುವ ಮೂಲಕ ಭಾರತವು ಬೀಜಿಂಗ್‌ನ ಬೆದರಿಕೆ ತಂತ್ರಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗಿದೆ. ಆದರೆ ಚೀನಾದ ಸಾಮರ್ಥ್ಯಕ್ಕೆ ಹೋಲಿಸಿದರೆ ಇದು ಕಡಿಮೆ.

ಚೀನಾವು ಹಿಂದೂ ಮಹಾಸಾಗರದ ಸಾಗರ ಮಾರ್ಗಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವ ದೇಶವಾಗಿದೆ. ಇಂಡೋನೇಷ್ಯಾ, ಮಲೇಷ್ಯಾ ಮತ್ತು ಸಿಂಗಾಪುರದ ನಡುವಿರುವ ಮಲಕ್ಕಾ ಜಲಸಂಧಿಯ ಮೂಲಕವೇ ಚೀನಾದ ಶೇ 80ರಷ್ಟು ತೈಲ ಆಮದು ಆಗುತ್ತಿದೆ ಎಂದು ಹೇಳಲಾಗುತ್ತದೆ. ಇದು ದಕ್ಷಿಣ ಚೀನಾ ಸಮುದ್ರದ ಮೂಲಕ ಪೆಸಿಫಿಕ್ ಮಹಾಸಾಗರದೊಂದಿಗೆ ಹಿಂದೂ ಮಹಾಸಾಗರವನ್ನು ಸಂಪರ್ಕಿಸುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಚೀನಾ ಆಮದು ಮಾಡುವ ತೈಲದ ಸಾಗಣೆಯನ್ನು ಇತರ ದೇಶಗಳು ನಿಯಂತ್ರಿಸುತ್ತವೆ. ಇದರ ಜೊತೆಗೆ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಯುರೋಪ್‌ನೊಂದಿಗೆ ಚೀನಾದ ವ್ಯಾಪಾರದ ಸುಮಾರು ಶೇ 90ರಿಂದ 95ರಷ್ಟು ಪ್ರಮಾಣದ ಸರಕುಗಳು ಹಿಂದೂ ಮಹಾಸಾಗರದ ಮೂಲಕವೇ ಹಾದುಹೋಗುತ್ತದೆ. ಇದಲ್ಲದೆ, ದಕ್ಷಿಣ ಚೀನಾ ಸಮುದ್ರವು ಸಂಪೂರ್ಣವಾಗಿ ತನಗೇ ಸೇರಿದ್ದೆಂದು ಚೀನಾ ಪದೇಪದೇ ಘೋಷಿಸುತ್ತಿದೆ. ಭಾರತಕ್ಕೂ ಈ ಸಮುದ್ರ ಮಾರ್ಗವು ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಇಂಡೋ-ಪೆಸಿಫಿಕ್ ಪ್ರದೇಶದೊಂದಿಗಿನ ಅದರ ವ್ಯಾಪಾರದ ಸುಮಾರು 55% ಈ ನೀರಿನ ಮೂಲಕವೇ ಹಾದುಹೋಗುತ್ತದೆ.

ಚೀನಾದಂತೆಯೇ, ಭಾರತಕ್ಕೂ ಹಿಂದೂ ಮಹಾಸಾಗರವು ಮುಖ್ಯವಾಗಿದೆ. ಏಕೆಂದರೆ ತೈಲ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತವು ಹಿಂದೂ ಮಹಾಸಾಗರದ ಮೂಲಕ ತನ್ನ ಶೇ 80ರಷ್ಟು ಆವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದೆ. ಭಾರತದ ಶೇ 65ರಷ್ಟು ವ್ಯಾಪಾರಿ ಸರಕುಗಳು ಹಿಂದೂ ಮಹಾಸಾಗರದ ಮೂಲಕವೇ ಸಾಗುತ್ತದೆ. ಭಾರತವು ತನ್ನ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಹೆಚ್ಚು ಎಚ್ಚರಿಕೆ ವಹಿಸಬೇಕೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. 2015ರವರೆಗೂ, ಭಾರತವು ಈ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಬಹಿರಂಗವಾಗಿ ಪ್ರತಿಪಾದಿಸುತ್ತಿರಲಿಲ್ಲ. ಆದರೆ ಈಗ ಸುಮಾರು 24 ದೇಶಗಳಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತವೂ ಗಂಭೀರವಾಗಿ ತೊಡಗಿಸಿಕೊಂಡಿದೆ. ಶಕ್ತಿಯ ಸಮೀಕರಣವನ್ನು ಕ್ರೋಡೀಕರಿಸಲು ಹಿಂದೂ ಮಹಾಸಾಗರದಲ್ಲಿ ಬಾಹ್ಯ ಪಾಲುದಾರ ಶಕ್ತಿಗಳೊಂದಿಗೆ ಹೆಚ್ಚಿನ ಸಹಕಾರಕ್ಕಾಗಿ ಐಒಆರ್-ಪ್ರದೇಶದಲ್ಲಿರುವ ಮೂರು ದೇಶಗಳಾದ ಸೀಶೆಲ್ಸ್, ಮಾರಿಷಸ್ ಮತ್ತು ಶ್ರೀಲಂಕಾ ಭೇಟಿಗಳ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು. ಚೀನಾ ಸೇನೆಯ ಅನಗತ್ಯ ಆಕ್ರಮಣಶೀಲತೆಯ ಕಾರಣದಿಂದ ಹಿಂದೂ ಮಹಾಸಾಗರವು ಪ್ರಮುಖ ಶಕ್ತಿಗಳ ಮೇಲಾಟದ ಸ್ಥಳವಾಗಿ ಪರಿವರ್ತಿತವಾಗಿದೆ.

ಚೀನಾ ನೌಕಾಪಡೆಯು ಎಂದಿನಂತೆ ಹಿಂದೂ ಮಹಾಸಾಗರದಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತ, ಚೀನಾ ಮತ್ತು ಇತರ ದೇಶಗಳಲ್ಲಿನ ರಕ್ಷಣಾ ವಿಶ್ಲೇಷಕರ ಪ್ರಕಾರ, ಚೀನಾ ತನ್ನ ಹಿತಾಸಕ್ತಿಗಳನ್ನು ಕಾಪಾಡಲು ಹಿಂದೂ ಮಹಾಸಾಗರದಲ್ಲಿ ನೌಕಾಪಡೆ ಅಥವಾ ಸೇನಾಶಕ್ತಿಗಳ ನಿಯೋಜನೆಯ ಬಗ್ಗೆ ಆಲೋಚಿಸುತ್ತಿರಬಹುದು. ಇದು ಸಮುದ್ರದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುವ ಮಟ್ಟಕ್ಕೆ ಹೋಗದಿರಬಹುದು. ಆದರೆ ಚೀನಾ ಸಮುದ್ರ ಮಾರ್ಗಗಳನ್ನು ಇದು ಇತರ ದೇಶಗಳು ಸಂವಹನಕ್ಕಾಗಿ ಬಳಸುವುದಕ್ಕೆ ಗಂಭೀರ ಅಡಚಣೆಯನ್ನು ಉಂಟುಮಾಡಬಹುದು. ಚೀನಾದ ಉದಯೋನ್ಮುಖ ಸಾಗರ ಕೇಂದ್ರ ಆರ್ಥಿಕತೆ ಈ ಪ್ರದೇಶದ ದೇಶಗಳಿಗೆ ಕಾಣಿಸುವುದಿಲ್ಲ ಎಂದಲ್ಲ.

ಹಿಂದೂ ಮಹಾಸಾಗರದಲ್ಲಿ ಬೀಜಿಂಗ್‌ನ ಚಟುವಟಿಕೆಗಳನ್ನು ಗಮನಿಸಲು ಭಾರತ, ಅಮೆರಿಕ, ಇತರ ದೇಶಗಳಿಗೆ ಇರುವ ಕಾರಣವೇನು? ಚೀನಾದ ಆರ್ಥಿಕತೆಯು ಸಮುದ್ರದ ಮೇಲೆ ಅವಲಂಬಿತವಾಗಿರುವ ಕಾರಣಕ್ಕಾಗಿಯೇ ಜಾಗತಿಕ ಸಮುದ್ರ ಶಕ್ತಿಯಾಗುವುದು ಚೀನಾದ ಧ್ಯೇಯವಾಗಿದೆಯೇ? ಉತ್ತರಗಳನ್ನು ಅನ್ವೇಷಿಸುವಾಗ, ಚೀನಾ ಮಾತ್ರವಲ್ಲದೆ ಏಷ್ಯಾದ ಅನೇಕ ದೇಶಗಳ ಆರ್ಥಿಕ ಚಟುವಟಿಕೆಗಳಿಗೆ ಹಿಂದೂ ಮಹಾಸಾಗರದ ಸಂವಹನ (ಎಸ್‌ಎಲ್‌ಒಸಿ) ಗಳು ಪ್ರಮುಖವಾಗಿವೆ ಎಂಬುದನ್ನು ನೆನಪಿನಲ್ಲಿಡಬೇಕು.

ಚೀನಾದ ಪ್ರಯತ್ನಗಳನ್ನು ಅಮೆರಿಕ ಮತ್ತು ಭಾರತದ ನೌಕಾಪಡೆಗಳು ಜಂಟಿಯಾಗಿ ವಿಫಲಗೊಳಿಸಬಹುದು. ಇದನ್ನು ಅರಿತಿರುವ ಚೀನಾ ವಿವಿಧ ದೇಶಗಳಲ್ಲಿ ಬಂದರುಗಳನ್ನು ನಿರ್ಮಿಸಲು ಯತ್ನಿಸುತ್ತಿದೆ. ಪಾಕಿಸ್ತಾನದ ಗ್ವಾದರ್ ಬಂದರು ಮತ್ತು ಕರಾಚಿ ಬಂದರು, ಶ್ರೀಲಂಕಾದ ಹಂಬಂತೋಟ ಬಂದರು, ಮ್ಯಾನ್ಮಾರ್‌ನ ಕ್ಯೌಕ್ಫ್ಯು ಬಂದರು ಮತ್ತು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರುಗಳಲ್ಲಿ ಚೀನಾದ ಕಾರ್ಯಚಟುವಟಿಕೆ ಕಾಣಸಿಗುತ್ತದೆ. ಪ್ರತಿ ಬಂದರಿನಲ್ಲಿಯೂ ಚೀನಾದ ಪಾತ್ರವು ವಿಭಿನ್ನವಾಗಿದೆ. ಆದರೆ, ಸಾಕಷ್ಟು ತಂತ್ರಗಾರಿಕೆಯಿಂದ ಕೂಡಿದೆ.

ಗ್ವಾದರ್ ಬಂದರು ಕಾಮಗಾರಿಯನ್ನು ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಬಂದರನ್ನು ವ್ಯಾಪಾರಕ್ಕಾಗಿ ಮಾತ್ರ ಬಳಸುವುದು ಗುರಿ ಎಂದು ಹೇಳಲಾಗಿದೆ. ಪಾಕಿಸ್ತಾನದ ಹಿಂದುಳಿದ ಪ್ರದೇಶವಾಗಿರುವ ಗ್ವಾದರ್, ಚೀನಾದಿಂದ ಸುಮಾರು 1,800 ಕಿಮೀ ದೂರದಲ್ಲಿದೆ. ಹಾಗಾಗಿ ಇಲ್ಲಿಂದ ವ್ಯಾಪಾರ ಮಾಡಲಿದ್ದೇವೆ ಎಂಬ ಚೀನಾದ ಸಮರ್ಥನೆಗೆ ಬೆಲೆ ಕೊಡುವವರು ಯಾರೂ ಇಲ್ಲ. ಇದು ಚೀನಾದ ಸೇನಾ ಬಲವನ್ನು ಹೆಚ್ಚಿಸುವುದಲ್ಲದೆ ಬೇರೇನೂ ಅಲ್ಲ. ಈ ಬಂದರು ವಾಣಿಜ್ಯ ಮತ್ತು ಮಿಲಿಟರಿ ಕಾರ್ಯಾಚರಣೆ – ಎರಡೂ ರೀತಿಯಿಂದ ಕಾರ್ಯನಿರ್ವಹಿಸಬಹುದು. ಚೀನಾ ನೌಕಾಪಡೆಯ ಹಡಗುಗಳು ಹಲವು ವರ್ಷಗಳ ಕಾಲ ಕರಾಚಿ ಬಂದರಿಗೆ ಆಗಾಗ ಬರುತ್ತಲೇ ಇದ್ದವು. ಚೀನಾ ಮತ್ತು ಪಾಕಿಸ್ತಾನದ ನೌಕಾಪಡೆಗಳು 2020ರಲ್ಲಿ ಸೀ ಗಾರ್ಡಿಯನ್ಸ್ ಕವಾಯತು ನಡೆಸಿದ್ದವು. ಎರಡೂ ದೇಶಗಳು ಜಂಟಿಯಾಗಿ ಕರಾಚಿ ಕರಾವಳಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿವೆ.

ಚೀನಾವು ಶ್ರೀಲಂಕಾದ ಹಂಬಂತೋಟ ಬಂದರಿನಲ್ಲಿ ವ್ಯೂಹಾತ್ಮಕವಾಗಿ ಹೂಡಿಕೆ ಮಾಡಿ, ಬಂದರು ಅಭಿವೃದ್ಧಿಪಡಿಸಿದೆ. ಹಂಬಂತೋಟ ಇಂಟರ್‌ನ್ಯಾಷನಲ್ ಪೋರ್ಟ್ ಗ್ರೂಪ್ (ಎಚ್ಐಪಿಜಿ) ಶ್ರೀಲಂಕಾ ಬಂದರು ಪ್ರಾಧಿಕಾರ ಮತ್ತು ಚೀನಾದ ಸರ್ಕಾರಿ ಸ್ವಾಮ್ಯದ ಚೀನಾ ಮರ್ಚೆಂಟ್ಸ್ ಪೋರ್ಟ್ ಹೋಲ್ಡಿಂಗ್ಸ್ ನಡುವಿನ ಜಂಟಿ ಉದ್ಯಮವಾಗಿದೆ. ಶ್ರೀಲಂಕಾ ಈ ಬಂದರನ್ನು 99 ವರ್ಷಗಳ ಕಾಲ ಚೀನಾಕ್ಕೆ ಗುತ್ತಿಗೆ ನೀಡಿದೆ ಮತ್ತು ಇದು 2022ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಆಳವಾದ ಕ್ಯೌಕ್ಫ್ಯು ಬಂದರನ್ನು ನಿರ್ಮಿಸುವ ಒಪ್ಪಂದಕ್ಕೆ 2020ರಲ್ಲಿ ಸಹಿ ಹಾಕಲಾಯಿತು. ಕಾರ್ಯರೂಪಕ್ಕೆ ಬಂದ ಮೇಲೆ, ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆಯಿಂದ ನಿರ್ಮಾಣವಾಗುತ್ತಿರುವ ಜಲಾಂತರ್ಗಾಮಿ ನೆಲೆಯಿಂದ ಈ ಬಂದರು ತುಂಬಾ ದೂರದಲ್ಲೇನೂ ಇರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ, ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನ ಅಭಿವೃದ್ಧಿಗೆ ಚೀನಾ ಹೂಡಿಕೆ ಮಾಡುತ್ತಿದೆ. ಈ ಎಲ್ಲ ಐದು ಬಂದರುಗಳು ಭಾರತದ ನೌಕಾನೆಲೆಗಳಿಗೆ ತುಂಬಾ ಹತ್ತಿರದಲ್ಲಿವೆ. ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿಯ ಮೇಲೆ ಚೀನಾ ತನ್ನ ನಿಯಂತ್ರಣವನ್ನು ಕ್ರಮೇಣ ಹೆಚ್ಚಿಸಿಕೊಳ್ಳುತ್ತಿದೆ.

ಪರಮಾಣು ಶಕ್ತ ಭಾರತವು ಕರಾವಳಿಯ ಸುರಕ್ಷತೆಯ ಬಗ್ಗೆ ಚಿಂತಿಸಲು ಹಲವು ಕಾರಣಗಳಿವೆ. 2008ರಲ್ಲಿ ಮುಂಬೈ ಮೇಲೆ ದಾಳಿ ಮಾಡಲು ಸಮುದ್ರ ಮಾರ್ಗವಾಗಿಯೇ ಭಯೋತ್ಪಾದಕರು ನುಸುಳಿ ಬಂದರೆಂಬುದನ್ನು ನಾವು ಹೇಗೆ ಮರೆಯಲು ಸಾಧ್ಯ? ಕರಾವಳಿಯ ಮೂಲಕ ಭಾರತಕ್ಕೆ ಮಾನವ ಕಳ್ಳಸಾಗಣೆ, ಅಕ್ರಮ ಮೀನುಗಾರಿಕೆ ಮತ್ತು ಮಾದಕವಸ್ತು ಮುಂತಾದವುಗಳ ಕಳ್ಳಸಾಗಾಣಿಕೆ ಗಂಭೀರ ಸವಾಲಾಗಿ ಪರಿಣಮಿಸಿದೆ.

ಭಾರತವು ಈಗ ನೌಕಾಪಡೆಯನ್ನು ಶಕ್ತಿ ಹೆಚ್ಚಿಸುವುದನ್ನು ಆದ್ಯತೆಯಾಗಿ ಪರಿಗಣಿಸಿದೆ. ಸಾಗರದ ಮೇಲೆ ಏಕಸ್ವಾಮ್ಯ ಸಾಧಿಸುವ ಚೀನಾದ ಮಹತ್ವಾಕಾಂಕ್ಷೆಗಳನ್ನು ತಡೆಯುವಲ್ಲಿ ವಿವಿಧ ದೇಶಗಳ ರಾಜಕೀಯ ನಿರ್ಧಾರಗಳು ಬಹಳ ಮುಖ್ಯವಾಗಿವೆ. ಕ್ವಾಡ್ ದೇಶಗಳಾದ ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ದೇಶಗಳು ದಕ್ಷಿಣ ಚೀನಾ ಸಮುದ್ರ, ಪೆಸಿಫಿಕ್ ಕರಾವಳಿ ಮತ್ತು ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಗಸ್ತು ತಿರುಗುವ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಚೀನಾದ ಮೇಲೆ ನಿಗಾ ಇಡಲು ಕ್ವಾಡ್ ದೇಶಗಳು ಆಗ್ನೇಯ ಏಷ್ಯಾದ ದೇಶಗಳಲ್ಲಿಯೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಬೇಕು. ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಸಾಮೂಹಿಕ ಸಹಕಾರದಲ್ಲಿ ಸಮುದ್ರ ತಾಲೀಮು ನಡೆಸುವುದು ಮತ್ತು ಕರಾವಳಿಯಲ್ಲಿ ಜಂಟಿ ವಿಶೇಷ ಆರ್ಥಿಕ ವಲಯಗಳ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದು ಸೂಕ್ತವಾಗಿದೆ. ಭಾರತವು 2015ರಲ್ಲಿ ಹಿಂದೂ ಮಹಾಸಾಗರದ ದ್ವೀಪಗಳಿಗೆ ತನ್ನ ಕಡಲ ರಾಜತಾಂತ್ರಿಕತೆ ಮತ್ತು ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ (SAGAR) ಉಪಕ್ರಮದೊಂದಿಗೆ ಕಾರ್ಯಪ್ರವೃತ್ತವಾಗಿದೆ. ಮಾಲ್ಡೀವ್ಸ್, ಮಾರಿಷಸ್, ಸೀಶೆಲ್ಸ್ ಮತ್ತು ಮಡಗಾಸ್ಕರ್‌ನಂತಹ ಸಣ್ಣ ದ್ವೀಪಗಳ ನಡುವೆ ಮುಕ್ತ ವ್ಯಾಪಾರವನ್ನು ಉತ್ತೇಜಿಸುವ ಮೂಲಕ ಇದನ್ನು ಮತ್ತಷ್ಟು ಬಲಪಡಿಸಬೇಕಾಗಿದೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದರೆ ಚೀನಾಗೆ ಹಲವು ಅನುಕೂಲಗಳಿವೆ. ಆದರೆ ಅಗತ್ಯ ಪ್ರಮಾಣದ ವಾಯುಬಲವನ್ನು ಚೀನಾ ಸೇನೆ ಹೊಂದಿಲ್ಲ. ಭಾರತ ಮತ್ತು ಅಮೆರಿಕದ ನಡುವೆ ಬೆಳೆಯುತ್ತಿರುವ ಸಂಬಂಧವು ಅವುಗಳ ಸಾಮಾನ್ಯ ಶತ್ರುವಾಗಿರುವ ಚೀನಾಕ್ಕೆ ಗಂಭೀರವಾದ ಭೌಗೋಳಿಕ ರಾಜಕೀಯ ಅಡಚಣೆಯನ್ನು ಒಡ್ಡುತ್ತಿದೆ. ಶಾಂತಿ, ವ್ಯಾಪಾರ ಮತ್ತು ವ್ಯವಹಾರಕ್ಕೆ ಅಡ್ಡಿಪಡಿಸುವ ಚೀನಾದ ಬೆದರಿಕೆಯ ತಂತ್ರಗಳನ್ನು ತಡೆಯಲು ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ.

ಸುಖೋಯ್ ಯುದ್ಧವಿಮಾನ (ಒಳಚಿತ್ರದಲ್ಲಿ ಲೇಖಕ ಗಿರೀಶ್ ಲಿಂಗಣ್ಣ)

ಇದನ್ನೂ ಓದಿ: National Defence: ಕೂನೂರಿನ ಬಟ್ಟಲಿನಂಥ ಹೆಲಿಪ್ಯಾಡ್, ಮಂಜಿನ ಆಟ ಮತ್ತು ವಿಎಫ್​ಆರ್​ ಹಾರಾಟ ನಿಯಮಗಳು
ಇದನ್ನೂ ಓದಿ: National Defence: ಕೈಲಿ ಮಿಠಾಯಿ, ಬಗಲಲ್ಲಿ ದೊಣ್ಣೆ: ಭಾರತವನ್ನು ಬಾಗಿಸುವ ಅಮೆರಿಕದ ಯತ್ನ ಎಸ್​-400 ವಿಚಾರದಲ್ಲಿ ವಿಫಲವಾಗಿದ್ದು ಏಕೆ?