ಬಿಸಿಸಿಐ ತನ್ನ ಹೊಸ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ಈ ಒಪ್ಪಂದದಲ್ಲಿ ಬರೋಬ್ಬರಿ 11 ಯುವ ಮುಖಗಳು ಸ್ಥಾನ ಪಡೆದಿದ್ದರೆ, ಕೆಲವು ದಿಗ್ಗಜ ಆಟಗಾರರು ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರಲ್ಲಿ ಪ್ರಮುಖವಾಗಿ ಈ ಐವರು ಆಟಗಾರರ ವೃತ್ತಿಜೀವನ ಭಾಗಶಃ ಅಂತ್ಯವಾದಂತೆ ತೋರುತ್ತಿದೆ.
ಶಿಖರ್ ಧವನ್: 2022 ರ ಡಿಸೆಂಬರ್ನಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನು ಆಡಿದ ಶಿಖರ್ ಧವನ್ ಅವರನ್ನು ಸಹ ಬಿಸಿಸಿಐ ಕೇಂದ್ರ ಒಪ್ಪಂದಿಂದ ಹೊರಗಿಟ್ಟಿದೆ. ಪ್ರಸ್ತುತ ಧವನ್ ಯಾವುದೇ ಸ್ವರೂಪದಲ್ಲಿ ತಂಡದ ಭಾಗವಾಗಿಲ್ಲ. ಈಗ ಅವರ ವಾಪಸಾತಿ ಬಗ್ಗೆಯೂ ಅನುಮಾನ ಮೂಡಿದೆ. ಅವರು ಟೀಂ ಇಂಡಿಯಾದಲ್ಲಿ ಪುನರಾಗಮನ ಮಾಡಲು ಸಾಧ್ಯವೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಚೇತೇಶ್ವರ ಪೂಜಾರ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 ರ ಫೈನಲ್ನ ನಂತರ ಪೂಜಾರ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಪೂಜಾರ ಈ ನಡುವೆ ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೂ ಅವರನ್ನು ಬಿಸಿಸಿಐ ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ. ಹೀಗಾಗಿ ಪೂಜಾರ ಅವರ ವೃತ್ತಿಜೀವನ ಅಂತ್ಯಗೊಂಡಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಅಜಿಂಕ್ಯ ರಹಾನೆ: ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಕೂಡ ಒಪ್ಪಂದದ ಭಾಗವಾಗಿಲ್ಲ. ಕಳೆದ ವರ್ಷ ಐಪಿಎಲ್ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ರಹಾನೆ, 2023 ರ ಡಬ್ಲ್ಯುಟಿಸಿ ಫೈನಲ್ ಆಡಿದ್ದರು. ಅದರ ನಂತರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವರನ್ನು ಉಪನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇದಾದ ಬಳಿಕ ಏಕಾಏಕಿ ತಂಡದಿಂದ ಹೊರಬಿದ್ದಿದ್ದ ರಹಾನೆ, ರಣಜಿಯಲ್ಲೂ ಸಪ್ಪೆಯಾಗಿದ್ದು, ಇದೀಗ ಅವರನ್ನು ಗುತ್ತಿಗೆಯಿಂದಲೂ ಹೊರಗಿಡಲಾಗಿದೆ.
ಉಮೇಶ್ ಯಾದವ್: ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಕೂಡ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಬಹಳ ದಿನಗಳಿಂದ ಹರಸಾಹಸ ಪಡುತ್ತಿದ್ದಾರೆ. ಪೂಜಾರ ಮತ್ತು ರಹಾನೆ ಅವರಂತೆ ಅವರು ಕೂಡ ಹಿಂದಿನ ಒಪ್ಪಂದದ ಭಾಗವಾಗಿದ್ದರು. ಆದರೆ ಈಗ ಹೊಸ ಒಪ್ಪಂದದಲ್ಲಿ ಅವರಿಗೂ ಸ್ಥಾನ ಸಿಕ್ಕಿಲ್ಲ. ಈಗ ಅವರ ವಾಪಸಾತಿ ಬಗ್ಗೆಯೂ ಅನುಮಾನದ ಮೋಡ ಕವಿದಿದೆ.
ಇಶಾಂತ್ ಶರ್ಮಾ: ಭಾರತ ತಂಡದ ಮತ್ತೊಬ್ಬ ವೇಗದ ಬೌಲರ್ ಇಶಾಂತ್ ಶರ್ಮಾ ಕೂಡ ಈ ಕೇಂದ್ರ ಒಪ್ಪಂದದ ಭಾಗವಾಗಿಲ್ಲ. ಅವರು ಕಳೆದ ಎರಡು ವರ್ಷಗಳಿಂದ ತಂಡದ ಭಾಗವೂ ಆಗಿಲ್ಲ. ಹೀಗಾಗಿ ಇಶಾಂತ್ ಅವರ ವೃತ್ತಿಜೀವನಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.