
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಇನ್ನೇರಡು ದಿನಗಳ ಒಳಗೆ ಪ್ರಕಟಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೂ ಮುನ್ನ ತಂಡದ ಯುವ ಆಟಗಾರ ಸಾಯಿ ಸುದರ್ಶನ್ ಗಂಭೀರ ಗಾಯಕ್ಕೆ ತುತ್ತಾಗಿದ್ದು, ಕೆಲವು ವಾರಗಳ ವರೆಗೆ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ.

ಆದಾಗ್ಯೂ ಸಾಯಿ ಸುದರ್ಶನ್ ಗಾಯಗೊಂಡಿರುವುದು ಟೀಂ ಇಂಡಿಯಾ ಆಯ್ಕೆಗೆ ಯಾವುದೇ ಸಮಸ್ಯೆಯನ್ನುಂಟು ಮಾಡುವುದಿಲ್ಲ. ಏಕೆಂದರೆ ಏಕದಿನ ಸರಣಿಗೆ ಅವರನ್ನು ಆಯ್ಕೆಗೆ ಪರಿಗಣಿಸುವ ಸಾಧ್ಯತೆಗಳಿರಲಿಲ್ಲ. ಆದರೆ ಸಾಯಿ ಸುದರ್ಶನ್ ಗಾಯಗೊಂಡಿರುವುದರಿಂದ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿರುವ ತಮಿಳುನಾಡು ತಂಡಕ್ಕೆ ದೊಡ್ಡ ಆಘಾತ ನೀಡಿದೆ.

ವಾಸ್ತವವಾಗಿ ಕೆಲವು ದಿನಗಳ ಹಿಂದೆ ಅಭ್ಯಾಸದ ಸಮಯದಲ್ಲಿ ಸಾಯಿ ಸುದರ್ಶನ್ ಅವರ ಪಕ್ಕೆಲುಬುಗಳಿಗೆ ಚೆಂಡು ತಗುಲಿತ್ತು. ಇದರ ನಡುವೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದ ಸುದರ್ಶನ್ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದ್ದರು. ಆದರೆ ಅದೇ ಪಂದ್ಯದಲ್ಲಿ ರನ್ಗಾಗಿ ಓಡುವ ವೇಳೆ ಸುದರ್ಶನ್ಗೆ ಪಕ್ಕೆಲುಬು ನೋವು ಮತ್ತಷ್ಟು ಹೆಚ್ಚಾಗಿತ್ತು.

ನೋವಿನ ನಡುವೆಯೂ ಆಟ ಮುಂದುವರೆಸಿದ್ದ ಸುದರ್ಶನ್ ಅವರನ್ನು ಪಂದ್ಯ ಮುಗಿದ ಬಳಿಕ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ಗೆ ದಾಖಲಿಸಲಾಗಿತ್ತು. ಇದೀಗ ಸುದರ್ಶನ್ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲಿದ್ದಾರೆ. ವರದಿಯ ಪ್ರಕಾರ, ಸುದರ್ಶನ್ ಸುಮಾರು 6 ವಾರಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಸುದರ್ಶನ್ ಚೇತರಿಕೆಗೆ ಸಾಕಷ್ಟು ಸಮಯಾವಕಾಶ ಸಿಗಲಿದೆ. ಏಕೆಂದರೆ ಟೀಂ ಇಂಡಿಯಾ ಪ್ರಸ್ತುತ ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡುತ್ತಿಲ್ಲ. ಆದರೆ 2026 ರ ಐಪಿಎಲ್ ಆರಂಭಕ್ಕೂ ಮುನ್ನ ಸುದರ್ಶನ್ ಗುಣಮುಖರಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಈ ಪಂದ್ಯಾವಳಿ ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗಲಿದ್ದು, ಸುದರ್ಶನ್ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ.