ಇಂದಿನಿಂದ ತಮಿಳುನಾಡಿನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ರಣಜಿ ಪಂದ್ಯ ಆರಂಭವಾಗಿದೆ. ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ ಮೊದಲ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 285 ರನ್ ಕಲೆಹಾಕಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕಕ್ಕೆ ಆರಂಭಿಕ ಆರ್ ಸಮರ್ಥ್ 57 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ನಾಯಕ ಮಯಾಂಕ್ ಅಗರ್ವಾಲ್ 20 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.
ಆದರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ದೇವದತ್ ಪಡಿಕ್ಕಲ್ ತಮಿಳುನಾಡು ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಪ್ರಸಕ್ತ ಸೀಸನ್ನಲ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ್ದಾರೆ. ಪಡಿಕ್ಕಲ್ ಶತಕದ ಆಧಾರದ ಮೇಲೆ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಮೇಲುಗೈ ಸಾಧಿಸಿದೆ.
ಮೊದಲ ದಿನದಂತ್ಯಕ್ಕೆ ಅಜೇಯರಾಗಿ ಉಳಿದಿರುವ ಪಡಿಕ್ಕಲ್, ತಮ್ಮ ಇನ್ನಿಂಗ್ಸ್ನಲ್ಲಿ 216 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ಗಳ ಆಧಾರದ ಮೇಲೆ 151 ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕಳೆದ 8 ಇನ್ನಿಂಗ್ಸ್ಗಳಲ್ಲಿ ಪಡಿಕ್ಕಲ್ ಅವರ ನಾಲ್ಕನೇ ಶತಕ ಇದಾಗಿದೆ. ಇದಕ್ಕೂ ಮುನ್ನ ಪಡಿಕಲ್ ಪಂಜಾಬ್ ವಿರುದ್ಧ 193 ರನ್, ಗೋವಾ ವಿರುದ್ಧ 103 ರನ್, ಇಂಗ್ಲೆಂಡ್ ಲಯನ್ಸ್ ವಿರುದ್ಧ 105 ರನ್ ಹಾಗೂ ಇದೀಗ ತಮಿಳುನಾಡು ವಿರುದ್ಧ ಅಜೇಯ 151 ರನ್ ಸಿಡಿಸಿ ಟೀಂ ಇಂಡಿಯಾದ ಕದ ತಟ್ಟಲಾರಂಭಿಸಿದ್ದಾರೆ.
ಕರ್ನಾಟಕ ಪರ ಪಡಿಕ್ಕಲ್ ಹಾಗೂ ಸಮರ್ಥ್ರನ್ನು ಹೊರತುಪಡಿಸಿ ಉಳಿದ ಆಟಗಾರರಿಂದ ಹೇಳಿಕೊಳ್ಳುವಂತ ಪ್ರದರ್ಶನ ಹೊರಬಂದಿಲ್ಲ. ನಾಯಕ ಮಯಾಂಕ್ 20 ರನ್ಗಳಿಗೆ ಸುಸ್ತಾದರೆ, ಅನುಭವಿ ಮನೀಶ್ ಪಾಂಡೆ ಕೇವಲ 1 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಉಳಿದಂತೆ ಶತಕದ ಅಜೇಯ ಇನ್ನಿಂಗ್ಸ್ ಆಡಿರುವ ಪಡಿಕ್ಕಲ್ ಹಾಗೂ ಅಜೇಯ 35 ರನ್ ಸಿಡಿಸಿರುವ ಹಾರ್ದಿಕ್ ರಾಜ್ ತಂಡದ ಇನ್ನಿಂಗ್ಸ್ ಜವಬ್ದಾರಿ ನಿರ್ವಹಿಸುತ್ತಿದ್ದು, ಬಲಿಷ್ಠ ತಮಿಳುನಾಡಿಗೆ ತಕ್ಕ ತಿರುಗೇಟು ನೀಡಿದ್ದಾರೆ.