
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಭಾರತ ಅಮೋಘ ಜಯ ಸಾಧಿಸಿತು. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಪಂದ್ಯದಲ್ಲಿ 6 ರನ್ಗಳ ಗೆಲುವು ಕಂಡಿತು. ಈ ಮೂಲಕ 4-1 ಅಂತರದಿಂದ ಸರಣಿ ಜಯಿಸಿದ ಸಾಧನೆ ಕೂಡ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿದರೆ, ಆಸ್ಟ್ರೇಲಿಯಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ಏನು ಹೇಳಿದ್ದಾರೆ ನೋಡಿ.

ನಮಗೆ ಇದೊಂದು ಉತ್ತಮ ಸರಣಿಯಾಗಿತ್ತು. ನಮ್ಮ ಹುಡುಗರು ತಮ್ಮ ಕೌಶಲ್ಯವನ್ನು ತೋರಿದ ರೀತಿ ಶ್ಲಾಘನೀಯ. ನಾವು ಪಂದ್ಯವನ್ನು ಆನಂದಿಸುತ್ತಾ ನಿರ್ಭೀತದಿಂದ ಆಡಿದ್ದೇವೆ. "ಯಾವುದು ಸರಿಯೋ ಅದನ್ನು ಮಾಡಿ ಮತ್ತು ನಿಮ್ಮ ಆಟವನ್ನು ನೀವು ಆನಂದಿಸಿ" ಎಂದು ನಾನು ಅವರಿಗೆ ಹೇಳಿದ್ದೆ. ಮತ್ತು ಅವರು ಅದೇ ರೀತಿ ಆಡಿದರು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಗೆದ್ದಿರುವುದು ಹಾಗು ಆಟಗಾರರ ಪ್ರದರ್ಶನ ಕಂಡು ತುಂಬಾ ಸಂತೋಷವಾಗಿದೆ. ವಾಷಿಂಗ್ಟನ್ ಸುಂದರ್ ಇದ್ದಿದ್ದರೆ ಅದು ಆಡ್-ಆನ್ ಆಗುತ್ತಿತ್ತು. ಚಿನ್ನಸ್ವಾಮಿಯಲ್ಲಿ, 200+ ಬೆನ್ನಟ್ಟುವುದು ಸುಲಭ. ಅದೇ 160-175 ಇಲ್ಲಿ ಹೇಳಲಾದ ಒಂದು ಟ್ರಿಕ್ಕಿ ಸ್ಕೋರ್ ಆಗಿದೆ. 10 ಓವರ್ಗಳ ನಂತರ, ನಾವು ಆಟಕ್ಕೆ ಮರಳಬಹುದು ಎಂದು ನಾನು ಹುಡುಗರಿಗೆ ಹೇಳಿದೆ. ಅದೇರೀತಿ ಆಯಿತು ಎಂಬುದು ಸೂರ್ಯಕುಮಾರ್ ಮಾತು.

ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡ ಅಕ್ಷರ್ ಪಟೇಲ್ ಮಾತನಾಡಿ, ಇಂದು ಅತ್ಯುತ್ತಮ ಆಟ ಆಡಿದೆವು. ಇದು ನನಗೆ ಹೇಳಿ ಮಾಡಿಸಿದ ವಿಕೆಟ್. ಒಂದೆರಡು ಆಟಗಳ ನಂತರ, ನಾನು ನನ್ನ ಲಯವನ್ನು ಕಂಡುಕೊಳ್ಳಲು ಸಾಧ್ಯವಾಯಿತು. ನಾನು ಮತ್ತು ರವಿ ಬಿಷ್ಣೋಯ್ ಗುಜರಾತ್ಗಾಗಿ ಕೆಲವು ಪಂದ್ಯಗಳನ್ನು ಒಟ್ಟಿಗೆ ಆಡಿದ್ದೇವೆ. ನಮ್ಮಲ್ಲಿ ಉತ್ತಮ ಹೊಂದಾಣಿಕೆ ಇದೆ ಎಂದು ಹೇಳಿದ್ದಾರೆ.

ಸೋತ ತಂಡದ ನಾಯಕ ಮ್ಯಾಥ್ಯೂ ವೇಡ್ ಮಾತನಾಡಿ, ನಾವು ಚೆನ್ನಾಗಿ ಬೌಲ್ ಮಾಡಿದ್ದೇವೆ ಎಂದು ನಾನು ಭಾವಿಸಿದೆವು. ಬಹುಶಃ ಈ ಮೈದಾನದಲ್ಲಿ ಚೇಸ್ ಮಾಡಬೇಕಾಗಿದ್ದ ಮೊತ್ತಕ್ಕೆ ನಾವು ಅವರನ್ನು ಕಟ್ಟಿಹಾಕಿದ್ದೆವು. ಆದರೆ, ಕೊನೆಯ ಐದು ಅಥವಾ ಆರು ಓವರ್ಗಳಲ್ಲಿ ನಮ್ಮ ಬ್ಯಾಟಿಂಗ್ ಚೆನ್ನಾಗಿರಲಿಲ್ಲ ಎಂದು ಸೋಲಿಗೆ ಕಾರಣ ತಿಳಿಸಿದ್ದಾರೆ.