
ಮಳೆಗಾಲ ಆರಂಭಕ್ಕೂ ಮುಂಚಿತವಾಗಿಯೇ ರಾಜ್ಯದಲ್ಲಿ ಭಾರೀ ಮಳೆ ಆಗುತ್ತಿದೆ. ಮಳೆರಾಯನ ಆರ್ಭಟದಿಂದ ರಾಜ್ಯದ ವಿವಿಧೆಡೆ ಅವಾಂತರಗಳು ಸೃಷ್ಠಿಯಾಗಿವೆ. ಶಿವಮೊಗ್ಗದಲ್ಲಿ ಗಾಳಿ ಸಹಿತ ಮಳೆಯಿಂದ 2 ಕಾರುಗಳ ಮೇಲೆ ತೆಂಗಿನ ಮರ ಬಿದ್ದಿದೆ. ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೊಂದು ಕಾರಿನಲ್ಲಿ ಯಾರೂ ಇರಲಿಲ್ಲ. ತೆಂಗಿನ ಮರ ಬಿದ್ದಿದ್ದರಿಂದ ಎರಡು ಕಾರುಗಳು ಸಂಪೂರ್ಣ ಜಖಂ ಆಗಿದೆ.

ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ ಆಗಿದೆ. ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಹಾಸನ ಜಿಲ್ಲೆಯಲ್ಲೂ ವರುಣ ಅಬ್ಬರಿಸಿದ್ದು, ನಗರ ಸೇರಿದಂತೆ ಹಲವೆಡೆ ದಿಡೀರ್ ಮಳೆಯಿಂದ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳ ಪರದಾಡಿದ್ದಾರೆ. ಸುಮಾರು ಒಂದು ಗಂಟೆ ಮಳೆ ಸುರಿದೆ.

ಕೋಟೆನಾಡು ಚಿತ್ರದುರ್ಗಕ್ಕೂ ಮಳೆ ಕಾಟ ತಪ್ಪಿಲ್ಲ. ಬರದನಾಡಿನ ಭೂಮಿಗೆ ಜಡಿ ಮಳೆ ತಂಪೆರೆದಿದ್ದು, ರೈತರಲ್ಲಿ ಮುಖದಲ್ಲಿ ಖುಷಿ ಮೂಡಿಸಿದೆ.

ನೆಲಮಂಗಲದ ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ ಸೇರಿದಂತೆ ಹಲವೆಡೆ ಕೂಡ ಮಳೆ ಆಗಿದೆ. ಪರಿಣಾಮ ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ತುಂಬಿ ಹರಿದಿದೆ.