ಭಾರತ ಪ್ರವಾಸಕ್ಕೆ ಬಂದ ನಂತರ ಶ್ರೀಲಂಕಾ ತಂಡವು ತನ್ನ ಆಟಗಾರರ ಫಿಟ್ನೆಸ್ ಸಮಸ್ಯೆಯಿಂದ ನಿರಂತರವಾಗಿ ತೊಂದರೆಗೊಳಗಾಗುತ್ತಿದೆ. T20I ಸರಣಿಯಲ್ಲಿ ಪ್ರಮುಖ ಆಟಗಾರರನ್ನು ಗಾಯದಿಂದ ಕಳೆದುಕೊಂಡ ಬಳಿಕ ಟೆಸ್ಟ್ ಸರಣಿಯಲ್ಲೂ ಇದೇ ಸಮಸ್ಯೆ ಎದುರಿಸುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಡೇ-ನೈಟ್ ಟೆಸ್ಟ್ನ ಎರಡನೇ ದಿನದಂದು ಶ್ರೀಲಂಕಾದ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಗಾಯಗೊಂಡಿದ್ದು, ಪಂದ್ಯದಿಂದ ಹೊರಗುಳಿದಿದ್ದಾರೆ.
ಎರಡನೇ ಟೆಸ್ಟ್ನ ಎರಡನೇ ದಿನದ ಭಾರತ ಬ್ಯಾಟಿಂಗ್ನ ಎರಡನೇ ಇನಿಂಗ್ಸ್ನ ಏಳನೇ ಓವರ್ನಲ್ಲಿ, ಜಯವಿಕ್ರಮ ರೋಹಿತ್ ಶರ್ಮಾ ಅವರಿಗೆ ಬಾಲ್ ಹಾಕುವಾಗ ತಮ್ಮ ಮೊಣಕಾಲು ಗಾಯಗೊಂಡರು. ಈ ಸಂದರ್ಭ ಅವರು ತುಂಬಾ ನೋವಿನಿಂದ ಬಳಲಿದರು. ಶ್ರೀಲಂಕಾ ತಂಡದ ಫಿಸಿಯೋ ಜಯವಿಕ್ರಮ ಅವರನ್ನು ಪರೀಕ್ಷಿಸಿ ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ಇವರಿಗೆ ನಡೆಯಲೂ ಸಾಧ್ಯವಾಗದ ಕಾರಣ ಇಬ್ಬರು ಆಟಗಾರರ ನೆರವಿನಿಂದ ಜಯವಿಕ್ರಮ ಪೆವಿಲಿಯನ್ ಮೆಟ್ಟಿಲೇರಿದರು.
ಎಡಗೈ ಸ್ಪಿನ್ನರ್ ಜಯವಿಕ್ರಮ ಗಾಯಗೊಂಡಿರುವುದು ಪರಿಣಾಮ ಶ್ರೀಲಂಕಾ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ . ಜಯವಿಕ್ರಮ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದರು. ಹನುಮ ವಿಹಾರಿ ಮತ್ತು ಶ್ರೇಯಸ್ ಅಯ್ಯರ್ ಸೇರಿದಂತೆ ಒಟ್ಟು 3 ವಿಕೆಟ್ ಪಡೆದಿದ್ದರು.
ಈ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿರುವ ಶ್ರೀಲಂಕಾದ ಮೊದಲ ಆಟಗಾರ ಜಯವಿಕ್ರಮ ಅಲ್ಲ. ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಅವರಿಗಿಂತ ಮೊದಲು, ವೇಗದ ಬೌಲರ್ ಲಹಿರು ಕುಮಾರ ಮಂಡಿರಜ್ಜು ಗಾಯದಿಂದ ಹೊರಗುಳಿದಿದ್ದರು. ಇನ್ನು ಎರಡನೇ ಟೆಸ್ಟ್ಗೆ ಎರಡು ದಿನ ಇರುವಾಗ ಬ್ಯಾಟರ್ ಪಾತುಮ್ ನಿಸಂಕಾ ಕೂಡ ಬೆನ್ನುಮೂಳೆಯ ಸಮಸ್ಯೆಯಿಂದಾಗಿ ಬೆಂಗಳೂರು ಟೆಸ್ಟ್ನಿಂದ ಹೊರಗುಳಿದಿದ್ದರು.
Published On - 9:09 am, Mon, 14 March 22