ಮುಡಾ ಕೇಸ್​: ಕಾಂಗ್ರೆಸ್​-ಬಿಜೆಪಿಯಿಂದ ರಾಷ್ಟ್ರಮಟ್ಟದಲ್ಲಿ ತಂತ್ರ-ಪ್ರತಿತಂತ್ರ

| Updated By: ವಿವೇಕ ಬಿರಾದಾರ

Updated on: Oct 01, 2024 | 11:28 AM

ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಬಿಜೆಪಿ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ, ಬಿಜೆಪಿಯೇತರ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರ ಇಡಿ-ಸಿಬಿಐ ಮುಖಾಂತರ ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್​ ಹೋರಾಟ ನಡೆಸಲು ತಯಾರಿ ನಡೆಸಿದೆ.

ಮುಡಾ ಕೇಸ್​: ಕಾಂಗ್ರೆಸ್​-ಬಿಜೆಪಿಯಿಂದ ರಾಷ್ಟ್ರಮಟ್ಟದಲ್ಲಿ ತಂತ್ರ-ಪ್ರತಿತಂತ್ರ
ಬಿಜೆಪಿ, ಕಾಂಗ್ರೆಸ್​
Follow us on

ಬೆಂಗಳೂರು, ಅಕ್ಟೋಬರ್​ 01: ಮುಡಾ ಹಗರಣ (Muda Case) ರಾಷ್ಟ್ರ ಮಟ್ಟದಲ್ಲೂ ಭಾರಿ ಚರ್ಚೆಯಾಗುತ್ತಿದೆ. ಈ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಉರುಳಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ವಿಪಕ್ಷ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಲು ಮುಂದಾಗಿದೆ. ​​ಕೇಂದ್ರ ಸರ್ಕಾರ ಬಿಜೆಪಿಯೇತರ ಸರ್ಕಾರದ ಮೇಲೆ ಟಾರ್ಗೆಟ್​ ಮಾಡಿದ್ದು, ಇಡಿ-ಸಿಬಿಐ ಮುಖಾಂತರ ದಾಳಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್ ಕೂಡ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಲು ಚಿಂತನೆ ನಡೆಸಿದೆ.

ಬಿಜೆಪಿ ಹೋರಾಟ ಹೇಗಿರಲಿದೆ?

14 ನಿವೇಶನಗಳನ್ನು ಹಿಂದಿರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಇದನ್ನೇ ಮುಂದಿಟ್ಟುಕೊಂಡಿರುವ ಬಿಜೆಪಿ, ಸೈಟ್ ವಾಪಸ್ ಕೊಟ್ಟಿದ್ದು ಭ್ರಷ್ಟಾಚಾರಕ್ಕೆ ಆಧಾರ ಎಂದು ರಾಷ್ಟ್ರಮಟ್ಟದಲ್ಲಿ ಅಭಿಯಾನ ನಡೆಸಲು ತಯಾರಿ ನಡೆಸಿದೆ. ರಾಷ್ಟ್ರಮಟ್ಟದಲ್ಲಿ ಸುದ್ದಿಗೋಷ್ಠಿ ಮತ್ತು ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದೆ. ಮುಡಾ ಪ್ರಕರಣದ ಹೋರಾಟ ತೀವ್ರಗೊಳಿಸಲು ಬಿಜೆಪಿ ನಾಯಕರು ಯೋಜನೆ ರೂಪಿಸುತ್ತಿದ್ದಾರೆ. ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲೂ ಮುಡಾ ಕೇಸ್ ಪ್ರಸ್ತಾಪಿಸಲಾಗುತ್ತಿದೆ. ಅಲ್ಲದೇ, ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲೂ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ಮುಡಾ ಹಗರಣದ ಬಗ್ಗೆ ಮಾತನಾಡಲಿದ್ದಾರೆ.

ಕಾಂಗ್ರೆಸ್ ಹೋರಾಟ ಹೇಗಿರಲಿದೆ?

ಸೋಮವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಡಿ ಅಧಿಕಾರಿಗಳು ಸಿದ್ದರಾಮಯ್ಯ ಅವರಿಗೆ ಯಾವುದೇ ಕ್ಷಣದಲ್ಲಿ ನೋಟಿಸ್ ಕೊಟ್ಟು ವಿಚಾರಣೆ ನಡೆಸಬಹುದಾಗಿದೆ. ಹೀಗಾಗಿ, ಹೈಕಮಾಂಡ್ ನಾಯಕರು ಇಡಿ ಇಕ್ಕಳದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಇಡಿ ಪ್ರಕರಣ ದಾಖಲಿಸಿಕೊಂಡಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಜನಪರ ಆಡಳಿತ ನೀಡುತ್ತಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯೇತರ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಈ ಆರೋಪಕ್ಕೆ ಕಾಂಗ್ರೆಸ್​ ಜಾರ್ಖಂಡ್ ಹಾಗೂ ದೆಹಲಿ ಮುಖ್ಯಮಂತ್ರಿಗಳನ್ನು ಇಡಿ ಬಂಧಿಸಿದನ್ನು ಮುಂದಿಟ್ಟಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್
ಅವರನ್ನು ಇಡಿ ಬಂಧಿಸಿದೆ. ಇದರ ಹಿಂದೆ ಕೇಂದ್ರ ಸರ್ಕಾರ ಕುತಂತ್ರವಿದೆ ಎಂದು ಕಾಂಗ್ರೆಸ್​ ಹೇಳಿದೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ​ತಡವಾಗಿ ಜ್ಞಾನೋದಯವಾಗಿದೆ ಎಂದ ಜೋಶಿ

ಅರವಿಂದ್​ ಕೇಜ್ರಿವಾಲ್​ ಬಂಧನ

ದೆಹಲಿ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದ ಮೇಲೆ ಬಂಧಿಸಿದ್ದರು. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರೀವಾಲ್ ಕಿಂಗ್ ಪಿನ್‌ ಎಂದು ಇಡಿ ಆರೋಪಿಸಿತ್ತು. ಆದಾಯವನ್ನು ಹೆಚ್ಚಿಸಲು, ಪರವಾನಗಿಯನ್ನು ಸರಳೀಕರಿಸಲು ತಂದ ಹೊಸ ನೀತಿಯಲ್ಲಿ ತಮಗೆ ಬೇಕಾದವರಿಗೆ ಪರವಾಗಿ ನೀಡಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಇಡಿ ಆರೋಪಿಸಿತ್ತು.

ರಾಜ್ಯದ ಬೊಕ್ಕಸಕ್ಕೆ ನಷ್ಟವಲ್ಲದೆ, ಪಕ್ಷ ಸಂಘಟನೆ ಹಾಗೂ ಚುನಾವಣೆಗೆ ಕಿಕ್ ಬ್ಯಾಕ್ ಹಣ ಬಳಸಲಾಗಿದೆ ಎಂದು ಇಡಿ ಹೇಳಿತ್ತು. ಲೋಕಸಭಾ ಚುನಾವಣೆಗೂ ಮುನ್ನ ಇಡಿ ಅರವಿಂದ್ ಕೇಜ್ರಿವಾಲ್​ ಅವರನ್ನು ಬಂಧಿಸಿತ್ತು. ಜೊತೆಗೆ ಸಿಬಿಐ ಕೂಡ ಇದೇ ಪ್ರಕರಣವನ್ನು ತನಿಖೆ ಮಾಡುತ್ತಿತ್ತು. ಆರು ತಿಂಗಳು ಜೈಲು ಅನುಭವಿಸಿ ಜಾಮೀನು ಪಡೆದು ಬಂದಿರುವ ಕೇಜ್ರೀವಾಲ್ ಈಗ ರಾಜೀನಾಮೆ‌ ಕೊಟ್ಟು ಸಿಎಂ‌ ಸ್ಥಾನವನ್ನು ಆಪ್ತೆ ಅತಿಶಿಗೆ ಬಿಟ್ಟುಕೊಟ್ಟಿದ್ದಾರೆ.

ಜಾರ್ಖಂಡ್​ ಸಿಎಂ ಹೇಮಂತ್ ಸೊರೇನ್ ಬಂಧನ

ಅಕ್ರಮ ಗಣಿಗಾರಿಕೆ ಮತ್ತು ಗಣಿ ಗುತ್ತಿಗೆ ಹಂಚಿಕೆಯಲ್ಲಿ ಅವ್ಯವಹಾರ ಅಕ್ರಮ ಹಣದ ವರ್ಗಾವಣೆ ಬಗ್ಗೆ ಇಡಿ ತನಿಖೆ ನಡೆಸಿತ್ತು. ಹೇಮಂತ್ ಸೊರೇನ್ ಕಿಕ್‌ ಬ್ಯಾಕ್ ಮತ್ತು ಲಂಚವನ್ನು ಸ್ವೀಕರಿಸಿದ್ದಾರೆ. ಶೆಲ್ ಕಂಪನಿಗಳ ಮೂಲಕ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಇಡಿ ಆರೋಪಿಸಿತ್ತು. ಕಳೆದ ವರ್ಷ ಆಗಸ್ಟ್​ನಲ್ಲಿ ಇಡಿ ಅಧಿಕಾರಿಗಳು ಜಾರ್ಕಾಂಡ್ ಸಿಎಂ ಅವರನ್ನು ಬಂಧಿಸಿತ್ತು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಇಡಿ ಬಂಧನಕ್ಕೆ ಹೇಮಂತ್ ಸೊರೇನ್ ಒಳಗಾಗಿದ್ದರು.

ಆಪ್ ನಾಯಕ ಅರವಿಂದ್ ಕೇಜ್ರೀವಾಲ್ ಹಾಗೂ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ನಡುವೆ ವ್ಯತ್ಯಾಸ ಏನು ಅಂದ್ರೆ, ಇಡಿ ಕೇಸ್​ನಲ್ಲಿ ಅರೆಸ್ಟ್ ಆಗಿದ್ದರೂ ಕೂಡ ಸಿಎಂ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿರಲಿಲ್ಲ. ಆದರೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ತಾವು ರಾಜೀನಾಮೆ ನೀಡಿ ಇಡಿ ಬಂಧನಕ್ಕೆ ಒಳಗಾಗಿದ್ದರು.

ಈಗ ಮುಡಾ ಕೇಸ್​ನಲ್ಲೂ ಸಿಎಂ ಸಿದ್ದರಾಮಯ್ಯ ಅವರ ಮೇಲೂ ಜಾರಿ ನಿರ್ದೇಶನಾಲಯದ ತೂಗುಗತ್ತಿ ನೇತಾಡುತ್ತಿದೆ. ಯಾವಾಗ ಬೇಕಾದರೂ ಈಡಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಸಮನ್ಸ್ ಕೊಟ್ಟು ವಿಚಾರಣೆಗೆ ಕರೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಚಿಂತನೆ ನಡೆಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:12 am, Tue, 1 October 24