ನೂತನ ಪದಾಧಿಕಾರಿಗಳ ನೇಮಕ: ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ, ಹೈಕಮಾಂಡ್​ ಬಗ್ಗೆ ಬಹಿರಂಗ ಮಾತು

| Updated By: ರಮೇಶ್ ಬಿ. ಜವಳಗೇರಾ

Updated on: Dec 24, 2023 | 11:34 AM

ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷರು, ರಾಜ್ಯ ಪ್ರಧಾ‌ನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು, ಖಜಾಂಚಿ ಮತ್ತು 7 ಮೋರ್ಛಾಗಳ ಅಧ್ಯಕ್ಷರ ನೇಮಕ ಮಾಡಲಾಗಿದೆ. ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ 6 ಆಪ್ತರಿಗೆ ಸ್ಥಾನ ನೀಡಲಾಗಿದೆ. ಹೀಗಾಗಿ ಇದಕ್ಕೆ ಅಪಸ್ವರಗಳು ವ್ಯಕ್ತವಾಗಿದ್ದು, ಈ ಬಗ್ಗೆ ಸದಾನಂದಗೌಡ ಹೈಕಮಾಂಡ್​ಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ನೂತನ ಪದಾಧಿಕಾರಿಗಳ ನೇಮಕ: ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ, ಹೈಕಮಾಂಡ್​ ಬಗ್ಗೆ ಬಹಿರಂಗ ಮಾತು
Follow us on

ಬೆಂಗಳೂರು, (ಡಿಸೆಂಬರ್ 24): ಬಿವೈ ವಿಜಯೇಂದ್ರ (BY Vijayendra) ಅವರು ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿ(BJP) ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಆದ್ರೆ, ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ (BS Yediyurappa) 6 ಆಪ್ತರಿಗೆ ಸ್ಥಾನ ನೀಡಲಾಗಿದ್ದು, ಇದು ಇತರೆ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಸಂಸದ ಸದಾನಂದಗೌಡ ಪ್ರತಿಕ್ರಿಯಿಸಿ, ಈ ತಂಡವನ್ನು ಅಸಮರ್ಥ ತಂಡ ಅಂತಾ ಹೇಳಲ್ಲ. ಆದರೆ ಅಲ್ಲೋ ಇಲ್ಲೋ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲ ಮಾಡುವ ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜೊತೆ ಕುಳಿತು‌ ತಿಳಿದುಕೊಳ್ಳಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ತಂಡ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದರೆ ಖಂಡಿತ ಯಶಸ್ವಿಯಾಗುತ್ತದೆ. ಮತ್ತೆ ಏನಾದರೂ ಹಳೆಯ ಚಾಳಿ ಮುಂದುವರಿಸಿದರೆ ಅದು ಪಕ್ಷದ ಮೇಲೆ ಸಮಸ್ಯೆ ಆಗುತ್ತದೆ. ದಕ್ಷಿಣ ಭಾಗಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ, ಉತ್ತರ ಭಾಗಕ್ಕೆ ಸರಿಯಾಗಿ ಸಿಕ್ಕಿಲ್ಲ ಎಂಬ ಮಾತುಗಳು ಇವೆ. ಈ ತಂಡವನ್ನು ಅಸಮರ್ಥ ತಂಡ ಅಂತಾ ಹೇಳಲ್ಲ. ಆದರೆ ಅಲ್ಲೋ ಇಲ್ಲೋ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲ ಮಾಡುವ ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜೊತೆ ಕುಳಿತು‌ ತಿಳಿದುಕೊಳ್ಳಬೇಕಿತ್ತು. ಅವರಿಂದ ಹೊಸ ವಿಷಯ ತೆಗೆದುಕೊಂಡು ತಂಡವನ್ನು ಮಾಡಬೇಕಿತ್ತು ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ: ಇಲ್ಲಿದೆ ಮಾಹಿತಿ

ಇವತ್ತು ಅವರನ್ನು ಕರೆದು ಮಾತಾಡಿದ್ದರೆ ಈ ಅತೃಪ್ತರ ಸಮಸ್ಯೆ ಇರುತ್ತಿರಲಿಲ್ಲ. ಇವತ್ತಿನ ಟೀಮ್ ನಲ್ಲಿ ಅಧ್ಯಕ್ಷರನ್ನು ಕ್ರಿಯಾಶೀಲರನ್ನು ನೇಮಕ ಮಾಡಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ನೇಮಕ ಆಗುವಾಗ ಸಮಾನವಾಗಿ ನೇಮಕ ಆಗಬೇಕು. ಒಂದು ತಂಡ ಅಂದರೆ ಅದು ಒಂದು ಗುಂಪಿಗೆ ಸೀಮಿತ ಆಗಬಾರದು. ಈಗಲಾದರೂ ಕರ್ನಾಟಕಕ್ಕೆ ವರಿಷ್ಠರು ಬರಬೇಕು ಎಂದು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಕುಳಿತು ತೀರ್ಮಾನ ಮಾಡುವುದು ಸರಿಯಲ್ಲ. ಕೋರ್ ಕಮಿಟಿ ಎನ್ನುವುದು ಒಂದು ಹಿರಿಯರ ತಂಡ, ಆ ಕೋರ್ ಕಮಿಟಿ ಜೊತೆ ಚರ್ಚಿಸಿ ತೀರ್ಮಾನ ಆಗಿದ್ದರೆ, ಇನ್ನೂ ಸದೃಢವಾದ ಟೀಮ್ ಕಟ್ಟಲು ಸಾಧ್ಯವಾಗಬಹುದಿತ್ತು. ಉತ್ತರ ಕರ್ನಾಟಕ ಭಾಗಕ್ಕೆ ಮತ್ತಷ್ಟು ಒತ್ತು ಕೊಡಬೇಕಿತ್ತು. ಯಾಕೋ ಏನೋ ಗೊತ್ತಿಲ್ಲ, ಹಿರಿಯರ ವೈಫಲ್ಯದಿಂದ ಸೋಲಾಗಿದೆ ಎಂಬ ಭಾವನೆ ವರಿಷ್ಠರಲ್ಲಿದೆ. ದಯವಿಟ್ಟು ಅದನ್ನು ಅಲ್ಲಿಗೆ ಬಿಟ್ಟು ಬಿಡಿ ಎಂದು ಹೇಳಿದ್ದಾರೆ.

ಸೋಲಿನ‌ ಬಗ್ಗೆ ಇನ್ನೂ ನಾವು ಆತ್ಮಾವಲೋಕನವನ್ನೇ ಮಾಡಿಲ್ಲ. ಮೊದಲು ಈ ಕೆಲಸವನ್ನು ವರಿಷ್ಠರು ಹಿರಿಯ ನಾಯಕರ ಜೊತೆ ಮಾತಾಡಬೇಕಿತ್ತು. ಇನ್ನು ಮುಂದೆ ಆದರೂ ವರಿಷ್ಠರು ರಾಜ್ಯಕ್ಕೆ ಬರಬೇಕು, ಎಲ್ಲರ ಜೊತೆ ಮಾತಾಡಬೇಕು ಎಂದು ಸದಾನಂದಗೌಡ ಅವರು ಹೈಕಮಾಂಡ್​ಗೆ ಸಲಹೆ ನೀಡಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ