ಐರ್ಲೆಂಡ್ ಗ್ರೂಪ್ ಬದಲಿಸಿ… ಬಾಂಗ್ಲಾದೇಶ್​ ತಂಡದ ಹೊಸ ಬೇಡಿಕೆ!

T20 World Cup 2026: ಬಾಂಗ್ಲಾದೇಶ ತಂಡವು ಮುಂಬರುವ ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ಒಟ್ಟು 4 ಪಂದ್ಯಗಳನ್ನಾಡಲಿದೆ. ಮೊದಲ ಮೂರು ಪಂದ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿಗದಿಯಾದರೆ, ಕೊನೆಯ ಪಂದ್ಯವನ್ನು ಮುಂಬೈನಲ್ಲಿ ಆಡಬೇಕಿದೆ. ಆದರೆ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಈ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ಐಸಿಸಿಗೆ ಮನವಿ ಮಾಡಿದೆ.

ಐರ್ಲೆಂಡ್ ಗ್ರೂಪ್ ಬದಲಿಸಿ... ಬಾಂಗ್ಲಾದೇಶ್​ ತಂಡದ ಹೊಸ ಬೇಡಿಕೆ!
Bangladesh

Updated on: Jan 20, 2026 | 9:53 AM

ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಇದಾಗ್ಯೂ ಬಾಂಗ್ಲಾದೇಶ್ ತಂಡ ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆಯಾ ಎಂಬುದು ಖಚಿತವಾಗಿಲ್ಲ. ಏಕೆಂದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ಪಂದ್ಯಗಳನ್ನು ಸ್ಥಳಾಂತರ ಮಾಡುವಂತೆ ಐಸಿಸಿಗೆ ಮನವಿ ಮಾಡಿದೆ. ಐಸಿಸಿ ಈ ಮನವಿಯನ್ನು ತಿರಸ್ಕರಿಸಿದರೂ ಬಿಸಿಬಿ ತನ್ನ ನಿಲುವನ್ನು ಬದಲಿಸಿಲ್ಲ. ಇದೀಗ ಐರ್ಲೆಂಡ್ ತಂಡದ ಗ್ರೂಪ್ ಬದಲಿಸಿ ಪಂದ್ಯವಾಡಲು ಅವಕಾಶ ಮಾಡಿಕೊಡುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ ಹೊಸ ಬೇಡಿಕೆಯನ್ನಿಟ್ಟಿದೆ.

ಮುಂಬರುವ ಟಿ20 ವಿಶ್ವಕಪ್​​ನಲ್ಲಿ ಐರ್ಲೆಂಡ್ ತಂಡವು ಗ್ರೂಪ್-2 ನಲ್ಲಿ ಕಾಣಿಸಿಕೊಂಡಿದೆ. ಅತ್ತ ಬಾಂಗ್ಲಾದೇಶ್ ತಂಡವಿರುವುದು ಗ್ರೂಪ್- 3 ನಲ್ಲಿ. ಇದೀಗ ನಮ್ಮನ್ನು ಗ್ರೂಪ್-2 ಕ್ಕೆ ಸೇರಿಸಿ ಐರ್ಲೆಂಡ್ ತಂಡವನ್ನು ಗ್ರೂಪ್-3 ನಲ್ಲಿ ಕಣಕ್ಕಿಳಿಯುವಂತೆ ಮಾಡಬೇಕೆಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ ಐಸಿಸಿಗೆ ಮನವಿ ಮಾಡಿದೆ.

ಬಾಂಗ್ಲಾದೇಶ್ ಪ್ಲ್ಯಾನ್​ ಏನು?

ಭಾರತದಲ್ಲಿನ ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಆಗ್ರಹಿಸುತ್ತಿದೆ. ಇದಾಗ್ಯೂ ಬಾಂಗ್ಲಾ ಬೇಡಿಕೆಗೆ ಐಸಿಸಿ ಸಮ್ಮತಿ ಸೂಚಿಸಿಲ್ಲ. ಇದೀಗ ಗ್ರೂಪ್ ಸ್ವಾಪ್ ಮಾಡುವಂತೆ ಬಿಸಿಬಿ ಹೊಸ ಬೇಡಿಕೆಯನ್ನಿಟ್ಟಿದೆ.

ಈ ಬೇಡಿಕೆಗೆ ಮುಖ್ಯ ಕಾರಣ, ಗ್ರೂಪ್-2 ನಲ್ಲಿರುವ ಐರ್ಲೆಂಡ್ ತಂಡವು ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತಿರುವುದು. ಐರ್ಲೆಂಡ್ ಲೀಗ್​ ಹಂತದಲ್ಲಿ ಆಡಲಿರುವ 4 ಪಂದ್ಯಗಳನ್ನೂ ಶ್ರೀಲಂಕಾದ ಆರ್​. ಪ್ರೇಮದಾಸ ಹಾಗೂ ಪಲ್ಲೆಕೆಲೆ ಸ್ಟೇಡಿಯಂಗಳಲ್ಲಿ ಆಡಲಿದೆ.

ಇತ್ತ ಗ್ರೂಪ್ ಸ್ವಾಪ್ ಮಾಡುವುದರಿಂದ ಬಾಂಗ್ಲಾದೇಶ್ ತಂಡವು ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಬಹುದು. ಈ ಮೂಲಕ ಪಂದ್ಯಗಳ ಸ್ಥಳಾಂತರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದೇ ಪ್ಲ್ಯಾನಿಂಗ್​ನೊಂದಿಗೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ ಇದೀಗ ಗ್ರೂಪ್ ಸ್ವಾಪ್​ಗಾಗಿ ಬೇಡಿಕೆಯನ್ನಿಟ್ಟಿದೆ. ಅದರಂತೆ ಗ್ರೂಪ್-2 ನಲ್ಲಿರುವ ಐರ್ಲೆಂಡ್ ತಂಡವು ಗ್ರೂಪ್-3 ನಲ್ಲಿ, ಗ್ರೂಪ್-3 ನಲ್ಲಿರುವ ಬಾಂಗ್ಲಾದೇಶ್ ಗ್ರೂಪ್-2 ನಲ್ಲಿ ಕಣಕ್ಕಿಳಿಯಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ: ನೇರವಾಗಿ ಫೈನಲ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಐಸಿಸಿ ಗಡುವು:

ಭಾರತದಿಂದ ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಬೇಕೆಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ತನ್ನ ಅಂತಿಮ ನಿಲುವು ಸ್ಪಷ್ಟಪಡಿಸುವಂತೆ ಗಡುವು ನೀಡಿದೆ. ಅದರಂತೆ ಜನವರಿ 21 ರೊಳಗೆ ಟಿ20 ವಿಶ್ವಕಪ್ ಆಡುತ್ತೀರಾ ಅಥವಾ ಟೂರ್ನಿಯಿಂದ ಹಿಂದೆ ಸರಿಯುತ್ತೀರಾ ಎಂಬುದನ್ನು ಖಚಿತಪಡಿಸಲು ತಿಳಿಸಲಾಗಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.