ಮಧ್ಯಪ್ರದೇಶದಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಖ್ಯಾತ ಬಹುಭಾಷಾ ನಟ ಆರ್. ಮಾಧವನ್ ಅವರ ಮಗ ವೇದಾಂತ್ ಐದು ಚಿನ್ನದ ಪದಕಗಳು ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
ಯುವ ಈಜುಪಟುವಾಗಿರುವ ವೇದಾಂತ್ 100 ಮೀ, 200 ಮೀ ಮತ್ತು 1500 ಮೀ ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಹಾಗೆಯೇ 400 ಮೀ ಮತ್ತು 800 ಮೀ ಸ್ಪರ್ಧೆಗಳಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಭಾರತದ ಭರವಸೆಯ ಈಜುಪಟುಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವೇದಾಂತ್ ಕಳೆದ ಎರಡು ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಈ ಹಿಂದೆ ಕೋಪನ್ ಹ್ಯಾಗನ್ ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು ಸ್ಪರ್ಧೆಯಲ್ಲಿ ವೇದಾಂತ್ ಪುರುಷರ 800 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಸ್ಥಳೀಯ ಈಜುಪಟು ಅಲೆಕ್ಸಾಂಡರ್ ಎಲ್ ಜೋರ್ನ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದಿದ್ದರು. ಇದಕ್ಕೂ ಮುನ್ನ ಈ ಇದೇ ಕೂಟದಲ್ಲಿ 1500 ಮೀಟರ್ ಫ್ರೀಸ್ಟೈಲ್ನಲ್ಲಿ ಬೆಳ್ಳಿ ಪದಕವನ್ನೂ ಸಹ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟಲದಲ್ಲಿ ಮಿಂಚಿದ್ದರು.
ಹಾಗೆಯೇ 2021 ರಲ್ಲಿ ಲಾಟ್ವಿಯಾ ಓಪನ್ನಲ್ಲಿ ನಡೆದ ಈಜು ಸರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವೇದಾಂತ್ ಕಂಚಿನ ಪದಕವನ್ನು ಗೆದ್ದಿದ್ದರು. ಕಳೆದ ವರ್ಷ ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ ಏಳು ಪದಕಗಳನ್ನು (ನಾಲ್ಕು ಬೆಳ್ಳಿ ಮತ್ತು ಮೂರು ಕಂಚು) ಗೆದ್ದು ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದ್ದರು.
ಇದೀಗ ಖೇಲೋ ಇಂಡಿಯಾ ಗೇಮ್ಸ್ನಲ್ಲಿ 7 ಪದಕಗಳನ್ನು ಗೆಲ್ಲುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಒಲಿಂಪಿಕ್ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದು ಕೊಡುವ ಭರವಸೆ ಮೂಡಿಸಿದ್ದಾರೆ.
Published On - 4:58 pm, Mon, 13 February 23