ಗೃಹ ಲಕ್ಷ್ಮಿ ಯೋಜನೆಯ ಎಲ್ಲ ಲಾಭಾರ್ಥಿಗಳ ಖಾತೆಗಳಿಗೆ ನಾಲ್ಕೈದು ದಿನಗಳಲ್ಲಿ ಹಣ ಜಮೆಯಾಗುತ್ತದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2023 | 5:25 PM

ಸಂಬಂಧಪಟ್ಟ ಅಧಿಕಾರಿಗಳು, ಟ್ರೆಜರಿ, ಈ-ಆಡಳಿತ ಎಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ 63 ಲಕ್ಷ ಗೃಹಿಣಿಯರ ಖಾತೆಗಳಿಗೆ ಹಣ ಜಮಾ ಆಗಿದೆ. ಇನ್ನು 4-5 ದಿನಗಳಲ್ಲಿ ನೋಂದಣಿಯಾಗಿರುವ ಎಲ್ಲ 1.08 ಗೃಹಿಣಿಯರ ಖಾತೆಗಳಿಗೆ ಹಣ ಸೇರುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಬೆಂಗಳೂರು: ದೇವರ ವರ ಕೊಟ್ಟರೂ ಪೂಜಾರಿ ಕೊಡಲ್ಲ ಅಂತ ಗಾದೆಯಿದೆ, ಆದರೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ದೇವರು ಯಾರೋ ಪೂಜಾರಿ ಯಾರೋ ಅಂತ ಗೊಂದಲ ಶುರುವಾವಾಗಿದೆ. ಆಗಸ್ಟ್ 30 ರಂದು ಮೈಸೂರಲ್ಲಿ ಕಾಂಗ್ರೆಸ್ ಸರ್ಕಾರ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಂದ ಯೋಜನೆಯನ್ನು ಉದ್ಘಾಟಿಸಿ, ಅವತ್ತೇ ಒಂದು ಕೋಟಿಗೂ ಹೆಚ್ಚು ಗೃಹಿಣಿಯ ಬ್ಯಾಂಕ್ ಖಾತೆಗಳಿಗೆ (bank accounts) ತಲಾ ರೂ. 2,000 ಡಿಬಿಟಿ ಮೂಲಕ ವರ್ಗಾಯಿಸಿರುವುದಾಗಿ ಹೇಳಿತ್ತು. ಆದರೆ ವಸ್ತುಸ್ಥಿತಿ ಬೇರೆಯೇ ಇದೆ. ಬಹಳಷ್ಟು ಗೃಹಿಣಿಯರಿಗೆ ಇದುವರೆಗೆ ಹಣ ಸಿಕ್ಕಿಲ್ಲ. ಇದೇ ಸಂಗತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು ತಿಳಿಸಿದಾಗ, ತಾವು ಸಂಬಂಧಪಟ್ಟ ಅಧಿಕಾರಿಗಳು, ಟ್ರೆಜರಿ, ಈ-ಆಡಳಿತ ಎಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ 63 ಲಕ್ಷ ಗೃಹಿಣಿಯರ ಖಾತೆಗಳಿಗೆ ಹಣ ಜಮಾ ಆಗಿದೆ. ಇನ್ನು 4-5 ದಿನಗಳಲ್ಲಿ ನೋಂದಣಿಯಾಗಿರುವ ಎಲ್ಲ 1.08 ಗೃಹಿಣಿಯರ ಖಾತೆಗಳಿಗೆ ಹಣ ಸೇರುವುದು ಎಂದು ಹೇಳಿದರು. ದಿನವೊಂದಕ್ಕೆ 25 ಲಕ್ಷಖಾತೆಗಳಿಗೆ ಹಣ ವರ್ಗವಾಗಬೇಕಿತ್ತು, ಆದರೆ ಕೇವಲ 10-15 ಲಕ್ಷ ಖಾತೆಗಳಿಗೆ ಹಣ ಟ್ರಾನ್ಸಫರ್ ಆಗುತ್ತಿರುವುದರಿಂದ ತಡವಾಗುತ್ತಿದೆ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಸಮಜಾಯಿಷಿ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.