ಮಠಾಧೀಶರ ಮುಂದೆಯೂ ಯಡಿಯೂರಪ್ಪ ಕುಟುಂಬವನ್ನು ತೆಗಳಲಾರಂಭಿಸಿದ ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ

Updated on: Dec 12, 2023 | 11:02 AM

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಯಡಿಯೂರಪ್ಪ ಕುಟುಂಬ ಬಗ್ಗೆ ಹಲವಾರು ಕಾರಣಗಳಿಗೆ ತೀವ್ರ ಅಸಮಾಧಾನ ಇರಬಹುದು. ಅವರು ಒಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷನ ವಿರುದ್ಧ ಹೀಗೆ ಸಾರ್ವಜನಿಕವಾಗಿ, ಮಠಾಧೀಶರ ಮುಂದೆ ಒಂದೇ ಸಮನೆ ಟೀಕೆ ಆರೋಪಗಳನ್ನು ಮಾಡುತ್ತಿರುವುದು ಪಕ್ಷದ ವರ್ಚಸ್ಸಿಗೆ ತುಂಬಾ ಕ್ಷತಿಯನ್ನುಂಟು ಮಾಡುತ್ತಿದೆ. ಮುಂದೆ ರಾಜ್ಯಾಧ್ಯಕ್ಷನಿಗೆ ಯಾರೂ ಬೆಲೆ ಕೊಡಲಾರದಂಥ ಸ್ಥಿತಿ ನಿರ್ಮಾಣವಾದರೆ ಆಶ್ಚರ್ಯವಿಲ್ಲ.

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರನ್ನು ಸಾರ್ವಜನಿಕವಾಗಿ ಟೀಕಿಸಿ ಬೈದಾಡಿದ ಬಳಿಕ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda patil Yatnal) ಈಗ ಆದೇ ಕೆಲಸವನ್ನು ಮಠಾಧೀಶರ ಮುಂದೆ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಯತ್ನಾಳ್, ಯಡಿಯೂರಪ್ಪ ಅವರನ್ನು ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಬಳಿಕ ರಾಜ್ಯದ ಮುಖ್ಯಮಂತ್ರಿ ಮಾಡಿಸಿದ್ದೇ ತಾನು, ಅರುಣ್ ಜೇಟ್ಲಿ ಅವರು ತನ್ನನ್ನು ಬಿಜೆಪಿ ಸೇರುವಂತೆ ಆಹ್ವಾನಿಸಿದಾಗ ಅವರ ಮುಂದೆ ಈ ಷರತ್ತು ಇಟ್ಟೇ ಪಕ್ಷ ಸೇರಿದ್ದೆ ಎಂದು ಹೇಳಿದ ಯತ್ನಾಳ್, ಇಷ್ಟೆಲ್ಲ ಉಪಕಾರ ಮಾಡಿದರೂ ತನಗೆ ಟಿಕೆಟ್ ವಂಚಿಸುವ ಕೆಲಸಕ್ಕೆ ತಂದೆ ಮಗ ಮುಂದಾಗಿದ್ದರು ಎಂದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ತಾನು ರ‍್ಯಾಲಿ ಮಾಡಿದಾಗ ಲಿಂಗಾಯತ ಐಪಿಎಸ್ ಅಧಿಕಾರಿಯಾಗಿದ್ದ ಸಂದೀಪ್ ಪಾಟೀಲ್ ಮುಖಾಂತರ ತಮ್ಮನ್ನು ಬಂಧಿಸುವ ಕುತಂತ್ರ ಮಾಡಿದ್ದೇ ವಿಜಯೇಂದ್ರ ಎಂದು ಯತ್ನಾಳ್ ಸ್ವಾಮೀಜಿಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.