ಸಿದ್ದರಾಮಯ್ಯರನ್ನು ಹೊಗಳುವುದಕ್ಕಾಗೇ ಹೆಚ್ ಆಂಜನೇಯ ಸಂಸದ ಅನಂತಕುಮಾರ್ ಹೆಗಡೆಯನ್ನು ತೆಗಳಿದರೇ?

Updated on: Jan 15, 2024 | 5:51 PM

ಅನಂತಕುಮಾರ್ ಹೆಗಡೆಯನ್ನು ಏಕವಚನದಲ್ಲಿ ಸಂಬೋಧಿಸುತ್ತಾ ಅವನು ಇವನು ಅಂತ ಹೇಳೋದು ತನಗೂ ಸರಿಯೆನಿಸಲ್ಲ ಅದರೇನು ಮಾಡುವುದು? ಅವನು ಬಳಸುವ ಭಾಷೆಯನ್ನೇ ನಾವು ಕೂಡ ಪ್ರಯೋಗಿಸಬೇಕಾಗುತ್ತದೆ ಎಂದು ಹೆಚ್ ಆಂಜನೇಯ ಹೇಳಿದರು.

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳಕಾರಿಯಾಗಿ ಮಾತಾಡಿದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಅವರನ್ನು ತೆಗಳುವ ಭರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಹೆಚ್ ಆಂಜನೇಯ (H Anjaneya) ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಹೊಗಳಿದ್ದೇ ಹೊಗಳಿದ್ದು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಹೆಗಡೆ ಆಡಿರುವ ಮಾತಿಗೆ ಪ್ರತಿಕ್ರಿಯೆ ಕೇಳಿದಾಗ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಆಂಜನೇಯ, ಅವನೊಬ್ಬ ಹುಚ್ಚ ಬಿಡ್ರೀ, ಹುಚ್ಚರಾಡುವ ಮಾತಿಗೆ ಪ್ರತಿಕ್ರಿಯೆ ನೀಡಲಾಗುತ್ತಾ? ಹಾಗೆ ಮಾಡಿದರೆ ಅವನ ಅಂತಸ್ತು ಹೆಚ್ಚಿಸಿದಂತಾಗುತ್ತದೆ, ಅವನೊಬ್ಬ ಮನುಷ್ಯನಾ? ಎಂದು ಹೇಳಿದರು. ನಂತರ, ಮೊನ್ನೆಯಷ್ಟೇ ಸಿದ್ದರಾಮಯ್ಯನೇ ತಮ್ಮ ರಾಮ ಎಂದಿದ್ದ ಆಂಜನೇಯ ಸ್ವಾಮಿನಿಷ್ಠೆ ಪ್ರದರ್ಶಿಸುವುದನ್ನು ಮುಂದುವರಿಸಿದರು. ಮುಖ್ಯಮಂತ್ರಿಯಾಗಿರುವವರು ನಾಡಿನ ದೊರೆಯೆನಿಸಿಕೊಳ್ಳುತ್ತಾರೆ, ಸಿದ್ದರಾಮಯ್ಯ ರಾಮರಾಜ್ಯದ ಪರಿಕಲ್ಪನೆಯನ್ನು ಅನಾವರಣಗೊಳಿಸಿ ಲಕ್ಷಾಂತರ ಬಡವರ ಕಣ್ಣೀರು ಒರೆಸಿರುವ ರಾಷ್ಟ್ರವೇ ಮೆಚ್ಚಿರುವಂಥ ನಾಯಕ ಮತ್ತು ಆರ್ಥಿಕ ತಜ್ಞ ಎಂದು ಹೇಳಿದರು. ಸಿದ್ದರಾಮಯ್ಯ ಖುಷ್ ಹುವಾ!

ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More