ಕೋಲಾರ: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೋಲಾರದ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ (S Muniswamy), ಕಾಂಗ್ರೆಸ್ ಸರ್ಕಾರ ಮತ್ತು ಕೆಲ ಸಚಿವರ ವಿರುದ್ಧ ಆರೋಪಗಳ ಸರಮಾಲೆಯನ್ನು ಹರಿಸಿದರು. ಮುಂದಿನ 3 ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ (Congress government) ಉರುಳಲಿದೆ, ಶಾಸಕರಲ್ಲಿ ಕಿತ್ತಾಟ ಶುರುವಾಗಿದೆ ಎಂದು ಹೇಳಿದ ಅವರು, ಶಾಸಕರಲ್ಲಿ ಹಲವಾರು ಬಣಗಳು ಹುಟ್ಟಿಕೊಂಡಿದ್ದು, ಎಲ್ಲರೂ ಹೈಕಮಾಂಡ್ ಗೆ ದೂರು ನೀಡುವ ಮಾತಾಡುತ್ತಾರೆ ಇಲ್ಲವೇ ರಾಜೀನಾಮೆ ಸಲ್ಲಿಸುವ ಬೆದರಿಕೆ ಒಡ್ಡುತ್ತಾರೆ ಎಂದು ಹೇಳಿದರು. ಭ್ರಷ್ಟಾಚಾರ ತಾಂಡವಾಡುತ್ತಿದೆ, ಸರ್ಕಾರದ ಮಂತ್ರಿಗಳು 60 ಪರ್ಸೆಂಟ್ ಕಮೀಶನ್ ಹೊಡೆಯುತ್ತಿದ್ದಾರೆ ಎಂದು ಹೇಳಿದ ಅವರಿಗೆ ಆವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಕೂಡ ಮರೆತು ಹೋಗಿತ್ತು. ಕೊನೆಗೆ ಹೆಬ್ಬಾಳ್ಕರ್ ಅಂತಷ್ಟೇ ಹೇಳಿ ಅವರು ಗೃಹಲಕ್ಷ್ಮಿ ಯೋಜನೆಯ ನೂರಾರು ಕೋಟಿ ರೂ. ಕಬಳಿಸಿದ್ದಾರೆ ಅಂತ ಗುರುತರವಾದ ಆರೋಪ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ