ಪ್ರೀತಿಸಿ, ಗರ್ಭಿಣಿಯಾಗಿಸಿ ಕೈಕೊಟ್ಟ ಮಹಾಶಯ: ವರನಿಗೆ ಥಳಿಸಿ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಮದುವೆ!

| Updated By: ಸಾಧು ಶ್ರೀನಾಥ್​

Updated on: Jul 21, 2023 | 3:00 PM

ಮದುವೆಯ ಅಷ್ಟೂ ದೃಶ್ಯಗಳನ್ನು ಮುಖಂಡರು ಸಂಫೂರ್ಣವಾಗಿ ವೀಡಿಯೊ ಮಾಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಮದುವೆ ಮಾಡಿದ ಮೇಲೆ ಹಾಡು ಹಾಡಿಯೂ ವಧು-ವರರನ್ನು ಮುಖಂಡರು ರಂಜಿಸಿದ್ದಾರೆ. ಈ ಪ್ರೇಮ್​ ಕಹಾನಿಗೆ ಟ್ವಿಸ್ಟ್ ಸಿಕ್ಕಿದ್ದು… ಪ್ರಿಯತಮನಿಗೆ ಅದಾಗಲೇ ಬೇರೊಂದು ಮದುವೆಯಾಗಿದೆ!

ಚಿಕ್ಕಬಳ್ಳಾಪುರ, ಜುಲೈ 21: ಅವರಿಬ್ಬರು ಪರಸ್ಪರ ಪ್ರೀತಿಸಿದ್ದರಂತೆ… ಅವರ ಪ್ರೀತಿಗೆ ಎರಡು ವರ್ಷ ತುಂಬಿತ್ತಂತೆ, ಪ್ರೀತಿಯ ಪ್ರತಿಫಲವಾಗಿ ಆಕೆ ಆರು ತಿಂಗಳ ಗರ್ಭಿಣಿಯೂ ಆಗಿದ್ದಳಂತೆ… ಪ್ರಿಯತಮೆ ಗರ್ಭಿಣಿಯಾಗುತ್ತಿದ್ದಂತೆ… ರಿವರ್ಸ್ ಆದ ಪ್ರೀಯತಮ ಮದುವೆಗೆ ನಿರಾಕರಿಸಿ ಏನ್ ಸಾಕ್ಷಿ ಇದೆ ಎಂದಿದ್ದಾನೆ. ಇದ್ರಿಂದ ಕೆರಳಿದ ಪ್ರಿಯತಮೆ ಹಾಗೂ ಕೆಲವು ಸಂಘ ಸಂಸ್ಥೆಗಳ ಮುಖಂಡರು… ಪ್ರವಾಸಿ ಮಂದಿರವೊಂದರ ಬಳಿ ಯುವಕನಿಗೆ ಥಳಿಸಿ ಅಲ್ಲೆ ಡ್ರಾ ಅಲ್ಲೆ ಬಹುಮಾನ ಎನ್ನುವ ರೀತಿಯಲ್ಲಿ ಬಲವಂತವಾಗಿ ಮದುವೆ ಮಾಡಿಸಿ ವೀಡಿಯೊ ಚಿತ್ರೀಕರಣವೂ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಇದೆಲ್ಲ ಎಲ್ಲಿ ನಡೆದಿದ್ದು ಅಂತೀರಾ? ಈ ವರದಿ ನೋಡಿ! ಹೌದು ಈ ಡ್ರಾ, ಡ್ರಾಮಾ ನಡೆದಿರುವುದು (cinematic marriage) ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಎದುರುಗಡೆ ಇರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ (Government Travellers Bungalow in Sidlaghatta).

ಚಿಕ್ಕಬಳ್ಳಾಪುರ ತಾಲೂಕಿನ ಇಟ್ಟಪ್ಪನಹಳ್ಳಿ ಗ್ರಾಮದ ಮಹಿಳೆ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಕಿರುಗುಂಬಿ ಗ್ರಾಮದ ಚೇತನ್ ಎನ್ನುವವರು ಪರಸ್ಪರ ಪ್ರೀತಿಸಿದ್ದರಂತೆ, ಇಬ್ಬರ ಪ್ರೀತಿಯ ಪ್ರತಿಫಲವಾಗಿ ಈಗ ಮಹಿಳೆ 6 ತಿಂಗಳ ಗರ್ಭಿಣಿಯಂತೆ, ಇದ್ರಿಂದ ಜಾರಿಕೊಳ್ಳಲು ಯತ್ನಿಸಿದ ಚೇತನ್… ಮದುವೆಗೆ ನಕಾರ ಮಾಡಿದ್ದಾನೆ. ಇದ್ರಿಂದ ಕೆಲವು ಮಹಿಳಾ ಸಂಘಟನೆಗಳ ನೆರವಿನಿಂದ ಚೇತನ್ ನನ್ನು ರಾಜೀ ಪಂಚಾಯತಿಗೆ ಕರೆಸಿ… ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಎದುರುಗಡೆ ಇರುವ ಪ್ರವಾಸಿ ಮಂದಿರದಲ್ಲಿ ಚೇತನ್ ನನ್ನು ಥಳಿಸಿ ಹಲ್ಲೆ ಮಾಡಿ ಬಲವಂತವಾಗಿ ಮದುವೆ ಮಾಡಿದ್ದಾರೆ.

ಪ್ರೇಮ್​ ಕಹಾನಿಗೆ ಟ್ವಿಸ್ಟ್… ಪ್ರಿಯತಮನಿಗೆ ಅದಾಗಲೇ ಬೇರೊಂದು ಮದುವೆಯಾಗಿದೆಯಂತೆ!

ನಿನ್ನೆ ಸಾಯಂಕಾಲ ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದ ಬಳಿ ನ್ಯಾಯ ಪಂಚಾಯತಿಗೆ ಅಂತ ಚೇತನನನ್ನು ಕರೆಸಲಾಗಿತ್ತು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಕೆಲವು ಮಹಿಳಾ ಸಂಘಟನೆಯ ಮುಖಂಡರು, ಮಾಡೋದೆಲ್ಲಾ ಮಾಡಿ ಈಗ ಮದುವೆ ಆಗಲ್ಲ ಅಂತೀಯಾ…? ಗರ್ಭಿಣಿಯಾಗಲು ಏನ್ ಸಾಕ್ಷಿ ಅಂತೀಯಾ? ಅಂತಾ ಚೇತನ್ ಕೆನ್ನೆಗೆ ಎರಡು ಬಾರಿಸಿದ್ದಾರೆ ನ್ಯಾಯ ಪಂಚಾಯತಿಗೆ ಬಂದಿದ್ದವರು! ಧರ್ಮದೇಟುಗಳ ಕಾರ್ಯಕ್ರಮ ಮುಗಿದ ಮೇಲೆ ಚೇತನ ತನ್ನ ಯುವತಿಯನ್ನು ಧರ್ಮಪತ್ನಿ ಎಂದು ಸ್ವೀಕರಿಸಿದ್ದಾನೆ. ಇದಕ್ಕೆ ಪಕ್ಕವಾದ್ಯಗಳಾಗಿ ಮುಖಂಡರು ತೆಲುಗು ಗೀತೆಗಳನ್ನು ಹಾಡಿ ವಧು ವರರನ್ನು ರಂಜಿಸಿದ್ದಾರೆ. ಮದುವೆ ಮಾಡಿಸಿಯಾದ ಮೇಲೆ ಸೇಫ್ಟಿಗೆ ಇರಲೀ ಅಂತಾ ಕಾಗದದ ಮೇಲೆ ಮದುವೆ ಆಗಿದ್ದರ ಬಗ್ಗೆ ಬರೆದು ಎರಡು ಕಡೆಹಯವರಿಂದ ಒಂದಷ್ಟು ಸಹಿಗಳನ್ನು ಮಾಡಿಸಿಕೊಂಡಿದ್ದಾರೆ.

ಮತ್ತೊಂದೆಡೆ ಇಂದು ಇಬ್ಬರಿಗೂ , ಚಿಕ್ಕಬಳ್ಳಾಪುರ ನೊಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೊಂದಣಿ ಮಾಡಿಸಬೇಕಿತ್ತು. ಅಷ್ಟರಲ್ಲಿ… ಚೇತನ್ ಗೆ ಈಗಾಗಲೇ ಬೇರೆ ಮಹಿಳೆಯ ಜೊತೆ ಮದುವೆ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆಯಂತೆ! ಇದ್ರಿಂದ ಮತ್ತೆ ಎರಡು ಕಡೆಯವರು ರಾಜಿ ಪಂಚಾಯತಿಯ ಮೊರೆ ಹೋಗಿದ್ದಾರೆ!

Published On - 2:44 pm, Fri, 21 July 23

Follow us on