ಉದ್ಯೋಗವೂ ಇಲ್ಲದೆ, ವೇತನವೂ ಇಲ್ಲದೆ ನಿಷ್ಪ್ರಯೋಜಕರೆನೆಸಿಕೊಂಡು ಇಸ್ರೇಲ್​ನಿಂದ ವಾಪಸಾಗುತ್ತಿರುವ ಕಾರ್ಮಿಕರು

|

Updated on: Sep 10, 2024 | 2:28 PM

ಸರಿಯಾದ ಉದ್ಯೋಗವೂ ಇಲ್ಲದೆ, ವೇತನವೂ ಇಲ್ಲದೆ ಭಾರತದ ಕಾರ್ಮಿಕರು ನಿಷ್ಪ್ರಯೋಜನಕರೆನಿಸಿಕೊಂಡು ಇಸ್ರೇಲ್​ನಿಂದ ವಾಪಸಾಗುತ್ತಿದ್ದಾರೆ. ಗಾಜಾ ಯುದ್ಧ ಆರಂಭವಾದ ಬಳಿಕ 1 ಲಕ್ಷಕ್ಕೂ ಅಧಿಕ ಪ್ಯಾಲೆಸ್ತೀನ್​ ಕಾರ್ಮಿಕರಿಗೆ ಅಲ್ಲಿ ಕೆಲಸ ಮಾಡದಂತೆ ಇಸ್ರೇಲ್ ನಿರ್ಬಂಧ ಹೇರಿತ್ತು.

ಉದ್ಯೋಗವೂ ಇಲ್ಲದೆ, ವೇತನವೂ ಇಲ್ಲದೆ ನಿಷ್ಪ್ರಯೋಜಕರೆನೆಸಿಕೊಂಡು ಇಸ್ರೇಲ್​ನಿಂದ ವಾಪಸಾಗುತ್ತಿರುವ ಕಾರ್ಮಿಕರು
ಕಾರ್ಮಿಕರು
Follow us on

ಸರಿಯಾದ ಉದ್ಯೋಗವೂ ಇಲ್ಲದೆ, ವೇತನವೂ ಇಲ್ಲದೆ ಭಾರತದ ಕಾರ್ಮಿಕರು ನಿಷ್ಪ್ರಯೋಜನಕರೆನಿಸಿಕೊಂಡು ಇಸ್ರೇಲ್​ನಿಂದ ವಾಪಸಾಗುತ್ತಿದ್ದಾರೆ. ಗಾಜಾ ಯುದ್ಧ ಆರಂಭವಾದ ಬಳಿಕ 1 ಲಕ್ಷಕ್ಕೂ ಅಧಿಕ ಪ್ಯಾಲೆಸ್ತೀನ್​ ಕಾರ್ಮಿಕರಿಗೆ ಅಲ್ಲಿ ಕೆಲಸ ಮಾಡದಂತೆ ಇಸ್ರೇಲ್ ನಿರ್ಬಂಧ ಹೇರಿತ್ತು.

ಆ ಸಮಯದಲ್ಲಿ ಇಸ್ರೇಲ್​ನಲ್ಲಿ ಮನೆಗಳ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿದ್ದವು, ಆ ಸಮಯದಲ್ಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸರ್ಕಾರವು ಭಾರತದಿಂದ ಕಾರ್ಮಿಕರನ್ನು ಕರೆಸುವ ಯೋಜನೆಗೆ ಅನುಮೋದನೆ ನೀಡಿತು.

ಉತ್ತರ ಪ್ರದೇಶ, ಹರ್ಯಾಣ, ಬಿಹಾರ ಹಾಗೂ ದಕ್ಷಿಣ ಭಾರತದಿಂದ ಸಾವಿರಾರು ಕಟ್ಟಡ ಕಾರ್ಮಿಕರನ್ನು ಅಲ್ಲಿಗೆ ಕಳುಹಿಸಲಾಯಿತು. ಹಮಾಸ್, ಹಿಜ್ಬುಲ್ಲಾ ಮತ್ತು ಇರಾನ್ ದಾಳಿಯ ನಡುವೆ ಭಾರತೀಯ ಕಾರ್ಮಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇಸ್ರೇಲ್​ಗೆ ಹೋಗಿದ್ದರು.

ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಉದ್ಯೋಗ ಯೋಜನೆಯು ಇಸ್ರೇಲ್‌ನ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆಯನ್ನು ಪೂರೈಸಲು ಭಾರತೀಯ ಕಾರ್ಮಿಕರನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಮತ್ತಷ್ಟು ಓದಿ: ಇಸ್ರೇಲ್ ಇರಾನ್ ಸಂಘರ್ಷ; ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರಿಕೆಯ ಹೆಜ್ಜೆಗಳಿಡುತ್ತಿರುವ ಎರಡು ದೇಶಗಳು

ಆದರೆ ಈಗ ಅಲ್ಲಿನ ಉದ್ಯಮಗಳು ಅನೇಕ ಭಾರತೀಯ ಕಾರ್ಮಿಕರ ಕಾರ್ಯಕ್ಷಮತೆಯಿಂದ ಸಂತೋಷವಾಗಿಲ್ಲ. ಇಸ್ರೇಲ್‌ನ ಕೈಗಾರಿಕೋದ್ಯಮಿಗಳು ಈಗ ಚೀನಾದಿಂದ ಕಾರ್ಮಿಕರನ್ನು ಕರೆಸಲು ಆಲೋಚಿಸಿದೆ.

ಕಳೆದ ಅಕ್ಟೋಬರ್‌ನಲ್ಲಿ ಹಮಾಸ್ ದಾಳಿಯ ನಂತರ ಪ್ಯಾಲೆಸ್ತೀನ್ ಕಾರ್ಮಿಕರನ್ನು ಇಸ್ರೇಲ್‌ನಲ್ಲಿ ಕೆಲಸ ಮಾಡುವುದನ್ನು ನಿರ್ಬಂಧಿಸಿದ ನಂತರ ದ್ವಿಪಕ್ಷೀಯ ಉದ್ಯೋಗ ಯೋಜನೆ ಎಂಬ ಉಪಕ್ರಮವನ್ನು ಪ್ರಾರಂಭಿಸಲಾಯಿತು. ಕಳೆದ ವರ್ಷ ಗಾಜಾ ಯುದ್ಧ ಪ್ರಾರಂಭವಾದ ನಂತರ, ಇಸ್ರೇಲ್‌ನಲ್ಲಿ ಕಾರ್ಮಿಕರ ದೊಡ್ಡ ಕೊರತೆ ಇತ್ತು, ಅದನ್ನು ಪೂರೈಸಲು ಒಂದು ಲಕ್ಷ ಭಾರತೀಯ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಲಾಯಿತು.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಭಾರತದೊಂದಿಗಿನ ತನ್ನ ಸ್ನೇಹವನ್ನು ಪರಿಗಣಿಸಿ, ಇಸ್ರೇಲ್ ಈ ಕೌಶಲ್ಯರಹಿತ ಭಾರತೀಯ ಕಾರ್ಮಿಕರನ್ನು ಕೌಶಲ್ಯರಹಿತ ಅಥವಾ ನಿರ್ಮಾಣ ಉದ್ಯಮವನ್ನು ಹೊರತುಪಡಿಸಿ ಇತರ ಕೈಗಾರಿಕೆಗಳಲ್ಲಿ ನಿಯೋಜಿಸಲು ಪ್ರಾರಂಭಿಸಿದೆ. ಇದು ವಿದೇಶದಲ್ಲಿರುವ ಭಾರತೀಯ ಕಾರ್ಮಿಕರ ಪ್ರತಿಷ್ಠೆಗೆ ದೊಡ್ಡ ಹೊಡೆತ ನೀಡಿದೆ.

ಇಸ್ರೇಲ್‌ನಲ್ಲಿ ಕೆಲಸ ಮಾಡಲಾಗದ ಸುಮಾರು 600 ಕಾರ್ಮಿಕರು ಭಾರತಕ್ಕೆ ಮರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಒಟ್ಟು 5 ಸಾವಿರ ಜನರನ್ನು ನೇಮಿಸಿಕೊಳ್ಳಲಾಗಿದೆ.

ಭಾರತೀಯ ಕಾರ್ಮಿಕರಿಗೆ 1.9 ಲಕ್ಷ ರೂ. ನೀಡಲಾಗುತ್ತಿದೆ. ಈಗ ಅವರಿಗೆ ಕೆಲಸ ಬರುವುದಿಲ್ಲ ಎಂದು ಹೇಳಿ ಕಡಿಮೆ ಹಣದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಕೆಲವರು ಭಾಷೆಯ ಸಮಸ್ಯೆ ಎದುರಿಸುತ್ತಿದ್ದಾರೆ.

ಭಾರತೀಯರಲ್ಲಿ ಅನುಭವದ ತೀವ್ರ ಕೊರತೆಯಿದೆ ಎಂದು ಇಸ್ರೇಲ್ ಹೇಳುತ್ತಿದೆ. ಒಪ್ಪಂದದ ಮೂಲಕ ಹೋದವರು 20 ವರ್ಷದ ಆಸುಪಾಸಿನವರಾಗಿದ್ದು ಇದುವರೆಗೂ ಯಾವುದೇ ಕೆಲಸ ಮಾಡಿದ ಅನುಭವ ಅವರಿಗಿಲ್ಲ.

ಕೆಲವರಿಗೆ ಸುತ್ತಿಗೆ ಹಿಡಿದುಕೊಳ್ಳಲೂ ಬರುವುದಿಲ್ಲ ಎಂದು ಇಸ್ರೇಲ್​ ಬಿಲ್ಡರ್​ಗಳು ಅಪಹಾಸ್ಯ ಮಾಡಿದ್ದಾರೆ. ಕಾರ್ಖಾನೆಗಳನ್ನು ಸ್ವಚ್ಛಗೊಳಿಸುವ ಹಾಗೂ ಸರಕುಗಳನ್ನು ಲೋಡ್ ಮಾಡುವ ಕೆಲಸಗಳನ್ನು ಮಾಡಿಸಲಾಗುತ್ತಿದೆ.

ಇಸ್ರೇಲಿ ಬಿಲ್ಡರ್‌ಗಳು ಈಗ ಚೀನಾ, ಮೊಲ್ಡೊವಾ ಮತ್ತು ಉಜ್ಬೇಕಿಸ್ತಾನ್‌ನಂತಹ ಇತರ ದೇಶಗಳಿಂದ ನುರಿತ ಕಾರ್ಮಿಕರನ್ನು ಕರೆಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಮತ್ತು ಈ ಪರಿಸ್ಥಿತಿ ಭಾರತಕ್ಕೆ ಮುಜುಗರ ತಂದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ