ರ‍್ಯಾನ್ಸಮ್​ವೇರ್ ದಾಳಿ; ಭಾರತದ 300 ಬ್ಯಾಂಕುಗಳ ಪೇಮೆಂಟ್ ಸಿಸ್ಟಂ ಸ್ಥಗಿತ; ಯುಪಿಐ, ಎಟಿಎಂ ಸೇವೆಯಲ್ಲಿ ತಾತ್ಕಾಲಿಕ ಹಿನ್ನಡೆ

Ransomware attack halts 300 small banks payment system: ಸಿಸ್ಟಂ ಡಾಟಾವನ್ನು ಎನ್​ಕ್ರಿಪ್ಟ್ ಮಾಡಿ ಬಳಕೆದಾರರಿಗೆ ಸಿಗದಂತೆ ಮಾಡುವ ರ‍್ಯಾನ್ಸಮ್​ವೇರ್ ಎಂಬ ಮಾಲ್ವೇರ್ ದಾಳಿಯಿಂದ 300 ಸಣ್ಣ ಬ್ಯಾಂಕುಗಳು ಬಾಧಿತವಾಗಿವೆ. ಇ ಎಡ್ಜ್ ಟೆಕ್ನಾಲಜೀಸ್​ನ ಸಿಸ್ಟಂನಲ್ಲಿ ಈ ರ‍್ಯಾನ್ಸಮ್​ವೇರ್ ಪತ್ತೆಯಾಗಿದ್ದು, ಮೂರು ದಿನಗಳ ಹಿಂದೆ ದಾಳಿ ಆಗಿರಬಹುದು. ಸಿ ಎಡ್ಜ್​ನ ಸೇವೆ ಹೊಂದಿರುವ 300 ಬ್ಯಾಂಕುಗಳ ಆನ್ಲೈನ್ ಪಾವತಿ ವ್ಯವಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ರ‍್ಯಾನ್ಸಮ್​ವೇರ್ ದಾಳಿ; ಭಾರತದ 300 ಬ್ಯಾಂಕುಗಳ ಪೇಮೆಂಟ್ ಸಿಸ್ಟಂ ಸ್ಥಗಿತ; ಯುಪಿಐ, ಎಟಿಎಂ ಸೇವೆಯಲ್ಲಿ ತಾತ್ಕಾಲಿಕ ಹಿನ್ನಡೆ
ಹ್ಯಾಕರ್

Updated on: Aug 01, 2024 | 11:37 AM

ನವದೆಹಲಿ, ಆಗಸ್ಟ್ 1: ರ‍್ಯಾನ್ಸಮ್​ವೇರ್ ದಾಳಿಯಿಂದಾಗಿ ಸುಮಾರು 300 ಸಣ್ಣ ಪುಟ್ಟ ಬ್ಯಾಂಕುಗಳ ಪಾವತಿ ವ್ಯವಸ್ಥೆ ತಾತ್ಕಾಲಕವಾಗಿ ಸ್ಥಗಿತಗೊಂಡ ಘಟನೆ ನಡೆದಿದೆ. ಈ ಬ್ಯಾಂಕುಗಳ ಗ್ರಾಹಕರು ಯುಪಿಐ ಸರ್ವಿಸ್ ಬಳಸಲು ಆಗುತ್ತಿಲ್ಲ. ಎಟಿಎಂಗಳಲ್ಲಿ ಆ ಬ್ಯಾಂಕ್​ನ ಕಾರ್ಡ್ ಬಳಸಿ ಕ್ಯಾಷ್ ವಿತ್​ಡ್ರಾ ಮಾಡಲೂ ಆಗುತ್ತಿಲ್ಲ ಎನ್ನಲಾಗಿದೆ. ಅದೃಷ್ಟಕ್ಕೆ ಇತರ ಬ್ಯಾಂಕಿಂಗ್ ಸರ್ವಿಸ್​ನಲ್ಲಿ ವ್ಯತ್ಯಯವಾಗಿಲ್ಲ. ಈ ಸಣ್ಣ ಬ್ಯಾಂಕುಗಳಿಗೆ ಬ್ಯಾಂಕಿಂಗ್ ಟೆಕ್ನಾಲಜಿ ಸಿಸ್ಟಂ ಅನ್ನು ಒದಗಿಸಿರುವ ಸಿ-ಎಡ್ಜ್ ಟೆಕ್ಲಾಲಜೀಸ್ ಎಂಬ ಸಂಸ್ಥೆಯ ಸರ್ವರ್ ಮೇಲೆ ಈ ರ‍್ಯಾನ್ಸಮ್​ವೇರ್ ದಾಳಿ ನಡೆದಿರುವುದು ಗೊತ್ತಾಗಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಸಂಸ್ಥೆ ನಿನ್ನೆ ಬುಧವಾರ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ರ‍್ಯಾನ್ಸಮ್​ವೇರ್ ದಾಳಿಯಿಂದ ಸಿ ಎಡ್ಜ್ ಟೆಕ್ನಾಲಜಿಸ್​ನ ಕೆಲ ಸಿಸ್ಟಂಗಳ ಮೇಲೆ ಪರಿಣಾಮ ಆಗಿರಬಹುದು. ಎನ್​ಪಿಸಿಐ ನಿರ್ವಹಿಸುವ ರೀಟೇಲ್ ಪೇಮೆಂಟ್ ಸಿಸ್ಟಂ ಅನ್ನು ಬಳಸಲು ಸಿ ಎಡ್ಜ್​ಗೆ ಸದ್ಯಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ತಿಳಿಸಿದೆ.

ಏನಿದು ರ‍್ಯಾನ್ಸಮ್​ವೇರ್ ದಾಳಿ?

ರ‍್ಯಾನ್ಸಮ್​ವೇರ್ ಅಟ್ಯಾಕ್ ಎಂಬುದು ಒಂದು ವಿಧದ ಮಾಲ್ವೇರ್ ದಾಳಿ ರೀತಿಯದ್ದು. ಇಲ್ಲಿ ದಾಳಿಕೋರ ಅಥವಾ ದಾಳಿಕೋರರು ಯಾವುದೇ ಸಿಸ್ಟಂ ಅನ್ನು ಹ್ಯಾಕ್ ಮಾಡಿ ಅಲ್ಲಿನ ದತ್ತಾಂಶ, ಸಾಧನ, ಫೈಲ್​ಗಳು ಅಥವಾ ಸಿಸ್ಟಂಗಳನ್ನು ಲಾಕ್ ಮಾಡಿ ಎನ್​ಕ್ರಿಪ್ಟ್ ಮಾಡಬಹುದು. ಇದರಿಂದ ಬಳಕೆದಾರರಿಗೆ ಈ ಸಿಸ್ಟಂಗಳನ್ನು ಬಳಸಲು ಆಗುವುದಿಲ್ಲ. ಹಣ ಅಥವಾ ಯಾವುದಾದರೂ ಬೇಡಿಕೆ ಈಡೇರಿಕೆಗೆ ದಾಳಿಕೋರರು ಈ ಕೆಲಸ ಮಾಡಬಹುದು.

ಇದನ್ನೂ ಓದಿ: ಇನ್ಫೋಸಿಸ್​ನಿಂದ 32,403 ಕೋಟಿ ರೂ ಜಿಎಸ್​ಟಿ ಬಾಕಿ ಇದೆಯಾ? ಇಲ್ಲ ಎನ್ನುತ್ತಿದೆ ಐಟಿ ಸಂಸ್ಥೆ; ಯಾತಕ್ಕಾಗಿ ಈ ತೆರಿಗೆ?

ಆನ್ಲೈನ್ ಟ್ರಾನ್ಸಾಕ್ಷನ್ ಸ್ಥಗಿತ

ಸಿ ಎಡ್ಜ್ ಟೆಕ್ನಾಲಜೀಸ್ ಸಂಸ್ಥೆಯು ಎಸ್​ಬಿಐ ಮತ್ತು ಟಿಸಿಎಸ್ ಜಂಟಿಯಾಗಿ ಸ್ಥಾಪಿತವಾಗಿದೆ. ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಇದು ಡಿಜಿಟಲ್ ತಂತ್ರಜ್ಞಾನದ ನೆರವು ಒದಗಿಸುತ್ತದೆ. ಮೂರು ದಿನಗಳ ಹಿಂದೆಯೇ ಈ ರ‍್ಯಾನ್ಸಮ್​ವೇರ್ ದಾಳಿ ಆಗಿದೆ ಎನ್ನಲಾಗಿದೆ.

‘ಆರ್​ಟಿಜಿಎಸ್, ಯುಪಿಐ ಪೇಮೆಂಟ್ಸ್ ಸೇರಿದಂತೆ ಎಲ್ಲಾ ಆನ್ಲೈನ್ ಟ್ರಾನ್ಸಾಕ್ಷನ್​ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಆನ್ಲೈನ್ ಟ್ರಾನ್ಸಾಕ್ಷನ್​ನಲ್ಲಿ ಹಣ ಕಳುಹಿಸಿದವರ ಖಾತೆಯಿಂದ ಹಣ ಕಡಿತಗೊಂಡಿದೆ. ಆದರೆ, ಹಣ ಸ್ವೀಕರಿಸಬೇಕಾದರೆ ಖಾತೆಗೆ ಹಣ ಜಮೆ ಆಗಿಲ್ಲ,’ ಎಂದು ರಾಷ್ಟ್ರೀಯ ಸಹಕಾರಿ ಒಕ್ಕೂಟದ ಛೇರ್ಮನ್ ದಿಲೀಪ್ ಸಂಘಾನಿ ಹೇಳಿದ್ದಾರೆ.

ಇದನ್ನೂ ಓದಿ: ಮನಸ್ಸನ್ನು ನಿಯಂತ್ರಿಸುತ್ತೆ ಈ ರಿಮೋಟ್ ಮೈಂಡ್ ಕಂಟ್ರೋಲ್ ತಂತ್ರಜ್ಞಾನ

ಸಿ-ಎಡ್ಜ್ ಟೆಕ್ನಾಲಜೀಸ್​ನ ಸಿಸ್ಟಂನಲ್ಲಿ ರ‍್ಯಾನ್ಸಮ್​ವೇರ್ ಅನ್ನು ಪತ್ತೆ ಮಾಡಲಾಗಿದೆ. ಎನ್​ಪಿಸಿಐ ಸಹಾಯದಿಂದ ದುರಸ್ತಿ ಕೆಲಸ ಮಾಡಲಾಗುತ್ತಿದೆ. ಶೀಘ್ರದಲ್ಲೇ ಸಿಸ್ಟಂ ಅನ್ನು ಸಹಜ ಸ್ಥಿತಿಗೆ ತರುವ ವಿಶ್ವಾಸ ಇದೆ. ಥರ್ಡ್ ಪಾರ್ಟಿ ಆಡಿಟ್ ಮಾಡಿಸಲಾಗುತ್ತಿದೆ. ಪಿಟಿಐ ವರದಿ ಪ್ರಕಾರ, ಈ ಮಾಲ್ವೇರ್ ದಾಳಿಯಿಂದ ಯಾವುದೇ ಹಣಕಾಸು ನಷ್ಟವಾದ ಬಗ್ಗೆ ಮಾಹಿತಿ ಇಲ್ಲ. ದೇಶಾದ್ಯಂತ ಇರುವ ಒಟ್ಟಾರೆ ಪಾವತಿ ವ್ಯವಸ್ಥೆಯಲ್ಲಿ ಈಗ ಬಾಧಿತವಾಗಿರುವ ಪಾವತಿ ಸಿಸ್ಟಂ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us