ಡ್ರಗ್ ಮಾಫಿಯಾದಲ್ಲಿ ಮೆರೆದಾಡಲು ಬಯಸಿದ್ದ ಟ್ಯಾಟೂ ಆರ್ಟಿಸ್ಟ್​ಗಳು ಸಿಸಿಬಿ ಬಲೆಗೆ

ಪಾಬ್ಲೋ ಎಸ್ಕೋಬಾರ್ ನಂತೆ ಡ್ರಗ್ ಮಾಫಿಯಾದಲ್ಲಿ ಮೆರೆದಾಡಲು ಬಯಸಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿ 25 ಲಕ್ಷ ಮೌಲ್ಯದ ವಿವಿಧ ಮಾದಕಗಳನ್ನು ವಶಕ್ಕೆ ಪಡೆದಿದ್ದಾರೆ.

ಡ್ರಗ್ ಮಾಫಿಯಾದಲ್ಲಿ ಮೆರೆದಾಡಲು ಬಯಸಿದ್ದ ಟ್ಯಾಟೂ ಆರ್ಟಿಸ್ಟ್​ಗಳು ಸಿಸಿಬಿ ಬಲೆಗೆ
ಡ್ರಗ್ ಮಾಫಿಯಾದಲ್ಲಿ ಮೆರೆದಾಡಲು ಬಯಸಿದ್ದ ಟ್ಯಾಟೂ ಆರ್ಟಿಸ್ಟ್​ಗಳು ಸಿಸಿಬಿ ಬಲೆಗೆ
Updated By: Rakesh Nayak Manchi

Updated on: Dec 03, 2022 | 2:45 PM

ಬೆಂಗಳೂರು: ಡ್ರಗ್ ಮಾಫಿಯಾದಲ್ಲಿ (Drug Mafia) ಮೆರೆದಾಡಲು ಬಯಸಿದ್ದ ಇಬ್ಬರು ಟ್ಯಾಟೂ ಆರ್ಟಿಸ್ಟ್ (Tattoo Artists)​ಗಳನ್ನು ನಗರದ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಲಿವಿಂಗ್ ಟುಗೆದರ್ನಲ್ಲಿದ್ದ ವಿಷ್ಣುಪ್ರಿಯ ಹಾಗೂ ಸಿಗಿಲ್ ವರ್ಗೀಸ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಲಕ್ಷಾಂತರ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. ಉತ್ತಮ ಆದಾಯ ಗಳಿಸಬಹುದಾಗಿದ್ದ ಟ್ಯಾಟೂ ಉದ್ಯಮ ಕ್ಷೇತ್ರದಲ್ಲಿದ್ದ ವಿಷ್ಣುಪ್ರಿಯ ಹಾಗೂ ಸಿಗಿಲ್ ವರ್ಗೀಸ್​ ಮಾದಕ ಜಗತ್ತಿಗೆ ಕಾಲಿಡಲು ಜಗತ್ತು ಕಂಡ ಕುಖ್ಯಾತ ಮಾದಕ ದಂಧೆಕೋರನೇ ಸ್ಪೂರ್ತಿಯಾಗಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಜಗತ್ತು ಕಂಡ ಕುಖ್ಯಾತ ಮಾದಕ ದಂಧೆಕೋರ ಕೊಲಂಬಿಯಾದ ಪಾಬ್ಲೋ ಎಸ್ಕೋಬಾರ್ (Pablo Escobar)​ನಿಂದ ಸ್ಫೂರ್ತಿಗೊಂಡು, ಅವನಂತೆ ಡ್ರಗ್ ಮಾಫಿಯಾದಲ್ಲಿ ಮೆರೆದಾಡಲು ವಿಷ್ಣುಪ್ರಿಯ ಮತ್ತು ಸಿಗಿಲ್ ವರ್ಗೀಸ್ ಬಯಸಿದ್ದರು. ಅದರಂತೆ ಗಿರಾಕಿಗಳಿಂದ ಹಣ ಪಡೆದು ಮಾದಕ ವಸ್ತುಗಳನ್ನು ಒಂದೆಡೆ ಬಚ್ಚಿಟ್ಟು ಲೊಕೇಷನ್ ಶೇರ್ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಇಲ್ಲಿ ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆ ಕೈಗೊಂಡಾಗ ಆರೋಪಿಗಳ ಅಸಲಿಯತ್ತು ಬಯಲಿಗೆ ಬಂದಿದೆ. ಸದ್ಯ ಆರೋಪಿಗಳಿಂದ 25 ಲಕ್ಷ ಮೌಲ್ಯದ ವಿವಿಧ ಮಾದಕ, ಪಾಬ್ಲೋ ಎಸ್ಕೋಬಾರ್ ಫೋಟೋ ವಶಕ್ಕೆ ಪಡೆಯಲಾಗಿದೆ.

ವಿಷಸೇವಿಸಿದ್ದ ಆರೋಪಿ ಸುಹೇಲ್ ಕೊಬ್ರಾ ಆಸ್ಪತ್ರೆಯಲ್ಲಿ ಸಾವು

ಶಿವಮೊಗ್ಗ: ವಿಷಸೇವಿಸಿದ್ದ ಆರೋಪಿ ಸುಹೇಲ್ ಕೊಬ್ರಾ ಮಂಗಳೂರಿನ ಯೆನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಿವಾಸಿ ಸುಹೇಲ್ ವಿರುದ್ಧ ತೀರ್ಥಹಳ್ಳಿ, ಮಾಳೂರು ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿದ್ದವು. ಅದರಂತೆ ಪೊಲೀಸ್ ಇಲಾಖೆಯ ಆತನ ಗಡಿಪಾರಿಗೆ ಆದೇಶಿಸಿತ್ತು. ಪೊಲೀಸರ ನೋಟಿಸ್ ತಲುಪುತ್ತಿದ್ದಂತೆ ಹೆದರಿದ ಆರೋಪಿ ಸುಹೇಲ್, ನವೆಂಬರ್ 28ರಂದು ಮನೆಯಲ್ಲಿ ವಿಷ ಸೇವಿಸಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀರ್ಥಹಳ್ಳಿ ಸರಕಾರಿ ಆಸ್ಪತ್ರೆ ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಯೆನಪೋಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Sat, 3 December 22