UP Crime News: ಫ್ರೈಡ್‌ ಚಿಕನ್‌ ಖರೀದಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಂದ ಪತಿ

ಪತ್ನಿ ಚಿಕನ್​​ ಖರೀದಿಸಲು ಹಣ ನೀಡದಿದ್ದಾಗ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಜಗಳದ ವೇಳೆ ಹುಸೇನ್ ಪತ್ನಿಯ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ನೂರ್ ಬಾನೊಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

UP Crime News: ಫ್ರೈಡ್‌ ಚಿಕನ್‌ ಖರೀದಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಂದ ಪತಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 26, 2023 | 11:19 AM

ಉತ್ತರ ಪ್ರದೇಶ,ನವೆಂಬರ್ 25: ಗಾಜಿಯಾಬಾದ್‌ನ ಪ್ರೇಮ್ ನಗರ ಕಾಲೋನಿಯಲ್ಲಿ ನಡೆದ ಭೀಕರ ಘಟನೆಯೊಂದು ವರದಿಯಾಗಿದೆ. ಫ್ರೈಡ್ ಚಿಕನ್ ಖರೀದಿಸಲು ಹಣ ನೀಡಲು ನಿರಾಕರಿಸಿದ ಪತ್ನಿಯ ಕತ್ತನ್ನು ಕತ್ತರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪತಿ ಹುಸೇನ್​​ನನ್ನು ಈಗಾಗಲೇ ಬಂಧಿಸಿರುವುದಾಗಿ ಎಸಿಪಿ ಸಿದ್ಧಾರ್ಥ್ ಗೌತಮ್ ಖಚಿತಪಡಿಸಿದ್ದಾರೆ. ಎಸಿಪಿ ಪ್ರಕಾರ, ಶುಕ್ರವಾರ ರಾತ್ರಿ ಪತ್ನಿ ನೂರ್ ಬಾನೊ(46) ಮತ್ತು ಪತಿ ಶಾಹಿದ್ ಹುಸೇನ್‌ ಇಬ್ಬರು ಮನೆಗೆ ಬೇಕಾಗುವ ಸಾಮಾಗ್ರಿ ತರಲು ಹೊರಗಡೆ ಹೋಗಿದ್ದಾರೆ. ಈ ವೇಳೆ ಪತಿ ಹುಸೇನ್‌ ಫ್ರೈಡ್‌ ಚಿಕನ್‌ ಖರೀದಿಸಲು ಮುಂದಾಗಿದ್ದಾನೆ. ಆದರೆ ಪತ್ನಿ ಚಿಕನ್​​ ಖರೀದಿಸಲು ಹಣ ನೀಡದಿದ್ದಾಗ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಜಗಳದ ವೇಳೆ ಹುಸೇನ್ ಪತ್ನಿಯ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ನೂರ್ ಬಾನೊಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ಆರೋಪಿ ಶಾಹಿದ್ ಹುಸೇನ್‌ ಟೈಲರ್​​ ಆಗಿ ಕೆಲಸ ನಿರ್ವಹಿಸುತ್ತಿದ್ದು, ಜಗಳದ ವೇಳೆ ತನ್ನ ಟೈಲರಿಂಗ್​​ ಕೆಲಸಕ್ಕೆ ಬಳಸುತ್ತಿದ್ದ ಕತ್ತರಿಯಿಂದಲೇ ಪತ್ನಿಯ ಕತ್ತನ್ನು ಇರಿದ್ದಿದ್ದಾನೆ. ಮೊದಲಿಗೆ ಫ್ರೈಡ್‌ ಚಿಕನ್‌ ಖರೀದಿಸಲು ಹಣ ನೀಡದ ಪತ್ನಿ, ನಂತರ ಜಗಳ ಹೆಚ್ಚಾಗುತ್ತಿದ್ದಂತೆ ತಾನೇ ಹೋಗಿ ಅಂಗಡಿಯಿಂದ ಫ್ರೈಡ್ ಚಿಕನ್ ಖರೀದಿಸಿ ತಂದಿದ್ದಾಳೆ. ಆದರೂ ಕೂಡ ಆಕೆಯ ಗಂಡನ ಕೋಪ ತಣ್ಣಗಾಗಿಲ್ಲ. ಇಬ್ಬರ ನಡುವೆ ಮತ್ತೆ ಜೋರಾಗಿ ಜಗಳ ನಡೆದಿದ್ದು, ತನ್ನ ಇಬ್ಬರು ಪುಟ್ಟ ಮಕ್ಕಳ ಮುಂದೆಯೇ ಶಾಹಿದ್ ಪತ್ನಿಯ ಕುತ್ತಿಗೆಯನ್ನು ಕತ್ತರಿಯಿಂದ ಇರಿದಿದ್ದಾನೆ.

ಇದನ್ನೂ ಓದಿ: ಒಡಿಶಾ: ವಿವಾಹೇತರ ಸಂಬಂಧ, ಯುವತಿ ಮದುವೆಯಾಗು ಎಂದಿದ್ದಕ್ಕೆ ಆಕೆಯ ಕೊಂದು 31 ತುಂಡುಗಳಾಗಿ ಕತ್ತರಿಸಿದ 5 ಮಕ್ಕಳ ತಂದೆ

ಅಮ್ಮನ ಕತ್ತು ಇರಿದಿರುವುದನ್ನು ಕಂಡು ಮಕ್ಕಳಿಬ್ಬರು ಜೋರಾಗಿ ಅಳಲು ಪ್ರಾರಂಭಿಸಿದ್ದಾರೆ. ಮಕ್ಕಳ ಕಿರಿಚಾಟ ಕೇಳುತ್ತಿದ್ದಂತೆ ಅಕ್ಕ ಪಕ್ಕದ ಮನೆಯವರು ದದೌಡಾಯಿಸಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡ ಆದಾಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ನೂರ್ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:17 am, Sun, 26 November 23