Devara: ‘ದೇವರ’ ಸಿನಿಮಾಕ್ಕೆ ಶಾಕ್ ಕೊಟ್ಟ ಆಂಧ್ರ ಹೈಕೋರ್ಟ್

|

Updated on: Sep 25, 2024 | 3:54 PM

Devara Movie: ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದ ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಆಂಧ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ, ಈಗ ಹೈಕೋರ್ಟ್, ‘ದೇವರ’ ಚಿತ್ರತಂಡಕ್ಕೆ ಶಾಕ್ ನೀಡಿದೆ.

Devara: ‘ದೇವರ’ ಸಿನಿಮಾಕ್ಕೆ ಶಾಕ್ ಕೊಟ್ಟ ಆಂಧ್ರ ಹೈಕೋರ್ಟ್
Follow us on

ಜೂ ಎನ್​ಟಿಆರ್ ನಟನೆಯ ‘ದೇವರ’ಸಿನಿಮಾ ಇನ್ನೆರಡು ದಿನಗಳಲ್ಲಿ (ಸೆಪ್ಟೆಂಬರ್ 27) ಬಿಡುಗಡೆ ಆಗಲಿದೆ. ಭಾರಿ ಬಜೆಟ್​ನ ಈ ಸಿನಿಮಾ ಆಂಧ್ರ, ತೆಲಂಗಾಣ ಮಾತ್ರವೇ ಅಲ್ಲದೆ ಕರ್ನಾಟಕ, ಕೇರಳ, ಉತ್ತರ ಭಾರತದ ರಾಜ್ಯಗಳು, ವಿದೇಶಗಳಲ್ಲಿಯೂ ಒಂದೇ ಬಾರಿಗೆ ತೆರೆಗೆ ಬರುತ್ತಿದೆ. ಆದರೆ ತೆಲಂಗಾಣ ಹಾಗೂ ಆಂಧ್ರದಿಂದ ಬರುವ ಕಲೆಕ್ಷನ್ ಮೇಲೆ ಸಿನಿಮಾ ತಂಡ ಹೆಚ್ಚು ಆಧಾರವಾಗಿದೆ. ಇದೇ ಕಾರಣಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ‘ದೇವರ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಹಾಗೂ ಹೆಚ್ಚುವರಿ ಶೋ ಹಾಕಲು ಚಿತ್ರತಂಡ ಅನುಮತಿ ಪಡೆದುಕೊಂಡಿತ್ತು.

ಆಂಧ್ರ ಸರ್ಕಾರ, ಹೆಚ್ಚುವರಿ ಶೋಗೆ ಅನುಮತಿ ನೀಡುವ ಜೊತೆಗೆ 14 ದಿನಗಳ ಕಾಲ ಟಿಕೆಟ್ ದರ ಹೆಚ್ಚಿಸಿಕೊಳ್ಳುವಂತೆ ಅನುಮತಿ ನೀಡಿತ್ತು. ಅದರ ಜೊತೆಗೆ ಸಿನಿಮಾ ಬಿಡುಗಡೆ ಆದ ದಿನ ಆರು ಶೋ ಮುಂದಿನ ಒಂಬತ್ತು ದಿನಗಳ ಕಾಲ ಐದು ಶೋಗೆ ಅನುಮತಿ ನೀಡಿತ್ತು. ಅದಾದ ಬಳಿಕ ಈ ಹಿಂದಿನ ದರಗಳಿಗೆ ಸಿನಿಮಾ ಟಿಕೆಟ್ ದರವನ್ನು ತಗ್ಗಿಸುವಂತೆ ಸೂಚಿಸಿತ್ತು. ಆದರೆ ಆಂಧ್ರ ಸರ್ಕಾರ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಆಂಧ್ರ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿತ್ತು. ಯಾವ ಆಧಾರದಲ್ಲಿ ಟಿಕೆಟ್ ದರ ಹೆಚ್ಚಿಸಲು ಅನುಮತಿ ನೀಡಲಾಗಿದೆಯಂತೆ ಪ್ರಶ್ನಿಸುವ ಜೊತೆಗೆ, ಟಿಕೆಟ್ ದರ ಹೆಚ್ಚಳವು ಸಾಮಾನ್ಯ ವ್ಯಕ್ತಿಗೆ ಮಾಡಲಾಗುತ್ತಿರುವ ಅನ್ಯಾಯ ಎಂದು ಸಹ ಅರ್ಜಿಯಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ:‘ದೇವರ’ ಹಾಡನ್ನು ತೆಲುಗಲ್ಲೇ ಹಾಡಿದ ಆಲಿಯಾ 

ಅರ್ಜಿಯ ತ್ವರಿತ ವಿಚಾರಣೆ ನಡೆಸಿರುವ ಆಂಧ್ರ ಹೈಕೋರ್ಟ್​, 14 ದಿನಗಳ ಬದಲಿಗೆ ಕೇವಲ 10 ದಿನಗಳ ವರೆಗೆ ಮಾತ್ರವೇ ಟಿಕೆಟ್ ದರ ಹೆಚ್ಚಿಸಿಕೊಳ್ಳುವಂತೆ ‘ದೇವರ’ ಚಿತ್ರತಂಡಕ್ಕೆ ಸೂಚಿಸಿದೆ. ಆಂಧ್ರದ ಸಿನಿಮಾಟೊಗ್ರಫಿ ಕಾಯ್ದೆಯ ಅನುಸಾರ 100 ಕೋಟಿಗೂ ಹೆಚ್ಚು ಬಜೆಟ್ ಇರುವ ಸಿನಿಮಾಗಳಿಗೆ ಮೊದಲ 10 ದಿನ ಟಿಕೆಟ್ ಹೆಚ್ಚಿಸಿಕೊಳ್ಳಲು ಅನುಮತಿ ಇದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ 14 ದಿನಗಳ ಕಾಲ ಅನುಮತಿ ನೀಡಲಾಗಿತ್ತು. ಸರ್ಕಾರ ನೀಡಿದ್ದ 14 ದಿನಗಳ ಆದೇಶವನ್ನು ರದ್ದು ಪಡಿಸಿರುವ ಹೈಕೋರ್ಟ್, 10 ದಿನಗಳ ಕಾಲ ಮಾತ್ರವೇ ಅವಕಾಶ ನೀಡಿದೆ.

ಜಗನ್ ಆಡಳಿತ ಅವಧಿಯಲ್ಲಿ ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ತಗ್ಗಿಸಲಾಗಿತ್ತು. ಇದಕ್ಕೆ ಚಿತ್ರೋದ್ಯಮ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆ ಬಳಿಕ ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿಯನ್ನು ಸಹ ತರಲಾಯ್ತು. ಆ ಸಮಯದಲ್ಲಿ ಚಿತ್ರಮಂದಿರಗಳ ಮಾಲೀಕರು, ನಿರ್ಮಾಪಕರು ಇನ್ನೂ ಕೆಲವರು ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಚಂದ್ರಬಾಬು ನಾಯ್ಡು ಸರ್ಕಾರ ಬಂದು ನಟ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಆದ ಬಳಿಕ ಚಿತ್ರೋದ್ಯಮದ ಗಣ್ಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಟಿಕೆಟ್ ದರ ಹೆಚ್ಚಳ, ಹೆಚ್ಚುವರಿ ಶೋ ಇನ್ನಿತರೆಗಳಿಗೆ ಸುಲಭವಾಗಿ ಅನುಮತಿಗಳು ಸಿಗುತ್ತಿವೆ. ಚಂದ್ರಬಾಬು ನಾಯ್ಡು ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಜಗನ್ ಅವಧಿಯಲ್ಲಿ ಮುಚ್ಚಿದ್ದ ಕೆಲವು ಚಿತ್ರಮಂದಿರಗಳು ಸಹ ಬಾಗಿಲು ತೆರೆದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ