ರಜನಿಕಾಂತ್ ಮೂಗು ತೂರಿಸಿದ್ದಕ್ಕೆ ‘ಲಿಂಗ’ ಸಿನಿಮಾಗೆ ಸೋಲು; ನಿರ್ದೇಶಕನ ಶಾಕಿಂಗ್ ಹೇಳಿಕೆ

|

Updated on: Oct 06, 2024 | 4:50 PM

ಭಾರಿ ನಿರೀಕ್ಷೆ ಮೂಡಿಸಿದ್ದ ‘ಲಿಂಗ’ ಸಿನಿಮಾ 2014ರಲ್ಲಿ ತೆರೆಕಂಡು ಸೋತಿತು. ಆ ಸೋಲಿಗೆ ರಜನಿಕಾಂತ್​ ಕಾರಣ ಎಂಬುದು ನಿರ್ದೇಶಕ ಕೆ.ಎಸ್​. ರವಿಕುಮಾರ್​ ವಾದ. ಹಾಗಾದರೆ ರಜನಿಕಾಂತ್ ಮಾಡಿದ ತಪ್ಪು ಏನು? ನಿರ್ದೇಶಕರ ಕೆಲಸದಲ್ಲಿ ತಲೆ ಹಾಕಿದ್ದು! ರಜನಿಕಾಂತ್ ಮೂಗು ತೂರಿಸಿದ್ದರಿಂದಲೇ ಸಿನಿಮಾ ಕೆಟ್ಟು ಹೋಯಿತು ಎಂದು ರವಿಕುಮಾರ್​ ಅವರು ಹೇಳಿದ್ದಾರೆ.

ರಜನಿಕಾಂತ್ ಮೂಗು ತೂರಿಸಿದ್ದಕ್ಕೆ ‘ಲಿಂಗ’ ಸಿನಿಮಾಗೆ ಸೋಲು; ನಿರ್ದೇಶಕನ ಶಾಕಿಂಗ್ ಹೇಳಿಕೆ
ಕೆ.ಎಸ್​. ರವಿಕುಮಾರ್, ರಜನಿಕಾಂತ್
Follow us on

ನಟ ರಜನಿಕಾಂತ್ ಅವರು ಚಿತ್ರರಂಗದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಹಲವು ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಆದರೆ ಒಂದಷ್ಟು ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿವೆ. ರಜನಿಕಾಂತ್​ ನಟನೆಯ ‘ಲಿಂಗ’ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಕರ್ನಾಟಕದಲ್ಲಿ ಈ ಚಿತ್ರದ ಶೂಟಿಂಗ್​ ನಡೆದಿತ್ತು. ದ್ವಿಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದರು. ‘ಲಿಂಗ’ ಚಿತ್ರದ ಸೋಲಿಗೆ ರಜನಿಕಾಂತ್ ಅವರೇ ಕಾರಣ ಎಂದು ನಿರ್ದೇಶಕ ಕೆ.ಎಸ್​. ರವಿಕುಮಾರ್ ಅವರು ಆರೋಪ ಮಾಡಿದ್ದಾರೆ.

2014ರಲ್ಲಿ ‘ಲಿಂಗ’ ಸಿನಿಮಾ ತೆರೆ ಕಂಡಿತ್ತು. ಆ ಕಾಲಕ್ಕೆ ವಿಶ್ವಾದ್ಯಂತ 158 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಇದು ದೊಡ್ಡ ನಂಬರ್​ ಆಗಿದ್ದರೂ ಕೂಡ ಸಿನಿಮಾದ ಬಜೆಟ್​ ಅದಕ್ಕೂ ಮೀರಿದ್ದರಿಂದ ಸಿನಿಮಾಗೆ ಸೋಲು ಉಂಟಾಯಿತು. ಹಾಗಾದರೆ ಸಿನಿಮಾ ಸೋಲಿಗೆ ಕಾರಣ ಏನು? ಈ ಬಗ್ಗೆ ನಿರ್ದೇಶಕ ಕೆ.ಎಸ್​. ರವಿಕುಮಾರ್​ ಅವರು ಮಾತನಾಡಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರವಿಕುಮಾರ್​ ಅವರು ಈ ವಿಚಾರ ತಿಳಿಸಿದ್ದಾರೆ. ‘ಸಿನಿಮಾ ಎಡಿಟಿಂಗ್​ ಆಗುವಾಗ ರಜನಿಕಾಂತ್ ಅವರು ಮೂಗು ತೂರಿಸಿದರು. ಗ್ರಾಫಿಕ್ಸ್​ ಕೆಲಸ ಮಾಡಿಸಲು ನನಗೆ ಹೆಚ್ಚು ಸಮಯ ನೀಡಲಿಲ್ಲ. ಸಿನಿಮಾದ ದ್ವಿತೀಯಾರ್ಧವನ್ನು ಸಂಪೂರ್ಣ ಬದಲಾಯಿಸಿದರು. ಅನುಷ್ಕಾ ಶೆಟ್ಟಿಯ ಹಾಡನ್ನು ತೆಗೆದು ಹಾಕಿದರು. ಕ್ಲೈಮ್ಯಾಕ್ಸ್​ನಲ್ಲಿ ಇದ್ದ ಸರ್ಪ್ರೈಸ್​ ಟ್ವಿಸ್ಟ್​ ಕೂಡ ತೆಗೆದರು. ಕೃತಕ ಬಲೂನ್​ ಜಂಪಿಂಗ್​ ದೃಶ್ಯವನ್ನು ಸೇರಿಸಿ ಇಡೀ ಸಿನಿಮಾವನ್ನು ಹಾಳು ಮಾಡಿದರು’ ಎಂದು ರವಿಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಿಂದ ಮನೆಗೆ ಮರಳಿದ ರಜನಿಕಾಂತ್​; ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಸೂಪರ್ ಸ್ಟಾರ್

‘ಲಿಂಗ’ ಸಿನಿಮಾ ಬಿಡುಗಡೆಯಾಗಿ 10 ವರ್ಷ ಕಳೆದಿದೆ. ಈಗಲೂ ರಜನಿಕಾಂತ್ ಅವರ ಬೇಡಿಕೆ ಕಡಿಮೆ ಆಗಿಲ್ಲ. ‘ಜೈಲರ್​’ ಸಿನಿಮಾದ ಯಶಸ್ಸಿನ ನಂತರವಂತೂ ಅವರ ಚಾರ್ಮ್​ ಇನ್ನಷ್ಟು ಹೆಚ್ಚಿತು. ಈಗ ರಜನಿಕಾಂತ್​ ಅವರು ‘ವೆಟ್ಟಯ್ಯನ್​’ ಮತ್ತು ‘ಕೂಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಟೋಬರ್​ 10ರಂದು ‘ವೆಟ್ಟಯ್ಯನ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಟಿ.ಜೆ. ಜ್ಞಾನವೇಲ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಅಮಿತಾಭ್​ ಬಚ್ಚನ್​, ಫಹಾದ್​ ಫಾಸಿಲ್​, ಮಂಜು ವಾರಿಯರ್​, ರಾಣಾ ದಗ್ಗುಬಾಟಿ ಮುಂತಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.