ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿ, ಅರಣ್ಯ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆಗಳು ಸೇರಿದಂತೆ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಹೆಗಲಿಗೆ ಹಾಕಿಕೊಂಡಿದ್ದಾರೆ. ಚುನಾವಣೆ ಪ್ರಾರಂಭವಾಗುವ ಕೆಲ ತಿಂಗಳ ಮೊದಲಿನಿಂದಲೂ ಪವನ್ ಕಲ್ಯಾಣ್ ಚಿತ್ರರಂಗದಿಂದ ದೂರಾಗಿದ್ದರು. ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಪವನ್ ಕಲ್ಯಾಣ್ ಸಿನಿಮಾ ಶೂಟಿಂಗ್ ಮಾಡಿಲ್ಲ. ಇದರ ನಡುವೆ ಪವನ್ ಕಲ್ಯಾಣ್ರ ಪುತ್ರ ಅಕಿರಾ ನಂದಾ ಸಹ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದೂ ತಂದೆಯ ಸಿನಿಮಾ ಮೂಲಕವೇ ಅಕಿರಾ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಒಂದು ವರ್ಷದಿಂದಲೂ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದ ಪವನ್ ಕಲ್ಯಾಣ್ ಈಗ ತಮ್ಮ ಅರ್ಧಕ್ಕೆ ನಿಂತಿರುವ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಳಿಸುತ್ತಿದ್ದು ಮೊದಲಿಗೆ ‘ಓಜಿ’ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಅಕಿರಾ ನಂದಾ ಸಹ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಪವನ್ ಕಲ್ಯಾಣ್ರ ಪಾತ್ರ ಬಾಲಕನಾಗಿದ್ದಾಗಿನ ದೃಶ್ಯಗಳು ‘ಓಜಿ’ ಸಿನಿಮಾದಲ್ಲಿದ್ದು ಆ ಪಾತ್ರವನ್ನು ಪವನ್ ಕಲ್ಯಾಣ್ ಪುತ್ರ ಅಕಿರಾ ಅವರೇ ನಿರ್ವಹಿಸಲಿದ್ದಾರೆ.
ಮಗ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿರುವ ಕಾರಣದಿಂದ ಅಕಿರಾ ತಾಯಿ ರೇಣು ದೇಸಾಯಿ ವಿಶೇಷ ಪೂಜೆಯನ್ನು ಮನೆಯಲ್ಲಿ ಮಾಡಿಸಿದ್ದರು. ಪೂಜೆಯಲ್ಲಿ ಅಕಿರಾ ನಂದಾ ಸಹ ಭಾಗಿಯಾಗಿದ್ದರು. ಅಕಿರಾ ಚಿತ್ರರಂಗಕ್ಕೆ ಬರಬೇಕು ಎಂಬುದು ಅವರ ಅಭಿಮಾನಿಗಳ ಆಸೆಯೂ ಆಗಿತ್ತು. ಈಗದು ಪವನ್ರ ಸಿನಿಮಾ ಮೂಲಕವೇ ಈಡೇರುತ್ತಿದೆ. ಈ ಹಿಂದೆ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಸಹ ಪವನ್ ಕಲ್ಯಾಣ್ ಮಗ ಸಿನಿಮಾ ನಟನಾಗಬೇಕು ಎಂದು ಹೇಳಿದ್ದರು.
ಇದನ್ನೂ ಓದಿ:ಅಲ್ಲು ಅರ್ಜುನ್ ಹೆಸರು ಹೇಳಿ, ಅಭಿಮಾನಿಗಳ ಆಕ್ರೋಶ ತಣ್ಣಗೆ ಮಾಡಿದ ಪವನ್ ಕಲ್ಯಾಣ್
ಪವನ್ ಕಲ್ಯಾಣ್ಗೆ ಒಟ್ಟು ನಾಲ್ಕು ಮಂದಿ ಮಕ್ಕಳು. ಮೊದಲ ಪತ್ನಿ ನಂದಿನಿ ಜೊತೆಗೆ ಯಾವುದೇ ಮಕ್ಕಳಾಗಿರಲಿಲ್ಲ. ರೇಣು ದೇಸಾಯಿ ಜೊತೆಗೆ ಇಬ್ಬರು ಮಕ್ಕಳಿದ್ದು ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಅವರಿಗೆ ಇದೆ. ಆ ನಂತರ ರಷ್ಯಾದ ಅನ್ನಾ ಅವರನ್ನು ವಿವಾಹವಾದ ಪವನ್ ಅವರೊಟ್ಟಿಗೆ ಇಬ್ಬರು ಮಕ್ಕಳು ಪಡೆದಿದ್ದಾರೆ.
ಪವನ್ ಕಲ್ಯಾಣ್ರ ಮೂರು ಸಿನಿಮಾಗಳು ಚಿತ್ರೀಕರಣ ಆಗಬೇಕಿವೆ. ಚುನಾವಣೆಗೆ ಹೋಗುವ ಮುಂಚೆ ಮೂರು ಸಿನಿಮಾಗಳನ್ನು ಪವನ್ ಕಲ್ಯಾಣ್ ಒಪ್ಪಿಕೊಂಡಿದ್ದರು. ‘ಓಜಿ’, ಹರಿ ಶಂಕರ್ ನಿರ್ದೇಶಣದ ‘ಉಸ್ತಾದ್ ಭಗತ್ ಸಿಂಗ್’ ಮತ್ತು ‘ಹರಿ ಹರ ವೀರ ಮಲ್ಲು’. ಪ್ರಸ್ತುತ ‘ಓಜಿ’ ಸಿನಿಮಾದ ಚಿತ್ರೀಕರಣವನ್ನು ಮುಗಿಸಿಕೊಡುತ್ತಿದ್ದಾರೆ ಪವನ್ ಕಲ್ಯಾಣ್. ಅದಾದ ಬಳಿಕ ‘ಉಸ್ತಾದ್ ಭಗತ್ ಸಿಂಗ್’ ಮತ್ತು ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣ ಮುಗಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ