ಚಂದ್ರಯಾನ 3 ರ ಯಶಸ್ಸಿಗೆ ನಿಪ್ಪಾಣಿ ತಾಲೂಕಿನ ಇಬ್ಬರು ವಿಜ್ಞಾನಿಗಳ ಮಹತ್ತರ ಕೊಡುಗೆ

| Updated By: ಗಣಪತಿ ಶರ್ಮ

Updated on: Aug 24, 2023 | 5:20 PM

ಮೂನ್ ಮಿಷನ್​​ನಲ್ಲಿ ಒಂದೇ ಗ್ರಾಮದ ಇಬ್ಬರು ವಿಜ್ಞಾನಿಗಳು ಭಾಗಿಯಾಗಿರುವುದು ವಿರಳ ಹಾಗೂ ವಿಶೇಷವಾಗಿದೆ. ಗಡಿಜಿಲ್ಲೆ ಬೆಳಗಾವಿಯ (Belagavi) ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ ವಿಜ್ಞಾನಿಗಳಾದ (Scientists) ಕೇರಬಾ ಲೋಹರ್ ಮತ್ತು ಚಿದಾನಂದ ಮಗದುಮ್ ಮೂನ್ ಮಿಷನ್​ಗೆ ಕೊಡುಗೆ ನೀಡಿದ್ದಾರೆ.

ಚಂದ್ರಯಾನ 3 ರ ಯಶಸ್ಸಿಗೆ ನಿಪ್ಪಾಣಿ ತಾಲೂಕಿನ ಇಬ್ಬರು ವಿಜ್ಞಾನಿಗಳ ಮಹತ್ತರ ಕೊಡುಗೆ
ಕೇರಬಾ ಲೋಹರ್ & ಚಿದಾನಂದ ಮಗದುಮ್
Follow us on

ಚಿಕ್ಕೋಡಿ, ಆಗಸ್ಟ್ 24: ವಿಶ್ವವೇ ಚಂದ್ರಯಾನ-3 (Chandrayaan 3) ಯಶಸ್ಸನ್ನು ಕೊಂಡಾತ್ತಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಬಹುದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಸ್ಯಾಟಲೈಟ್ ಇಳಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಯಶಸ್ಸಿನ ಹಿಂದೆ ಇಸ್ರೋ ವಿಜ್ಞಾನಿಗಳ ಅವಿರತ ಶ್ರಮವಿದ್ದು, ಚಂದ್ರಯಾನದ ಗೆಲುವಿಗೆ ಕಾರಣರಾದ ಅನೇಕ ವಿಜ್ಞಾನಿಗಳಲ್ಲಿ ಕನ್ನಡಿಗರೂ ಇದ್ದಾರೆ. ಆದರೆ, ಮೂನ್ ಮಿಷನ್​​ನಲ್ಲಿ ಒಂದೇ ಗ್ರಾಮದ ಇಬ್ಬರು ವಿಜ್ಞಾನಿಗಳು ಭಾಗಿಯಾಗಿರುವುದು ವಿರಳ ಹಾಗೂ ವಿಶೇಷವಾಗಿದೆ. ಗಡಿಜಿಲ್ಲೆ ಬೆಳಗಾವಿಯ (Belagavi) ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ ವಿಜ್ಞಾನಿಗಳಾದ (Scientists) ಕೇರಬಾ ಲೋಹರ್ ಮತ್ತು ಚಿದಾನಂದ ಮಗದುಮ್ ಮೂನ್ ಮಿಷನ್​ಗೆ ಕೊಡುಗೆ ನೀಡಿದ್ದಾರೆ.

ಕೇರಬಾ ಲೋಹರ್ ರವರು ಇಸ್ರೋದ ಸ್ಯಾಟಲೈಟ್ ಸೆನ್ಸರ್ ವಿಭಾಗದಲ್ಲಿ ಹಿರಿಯ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಆಡಿ ಗ್ರಾಮದ ಆನಂದರಾವ್, ಶಾಂತಾಬಾಯಿರವರ ದ್ವಿತೀಯ ಪುತ್ರ. ಕೇರಬಾ ಹುಟ್ಟೂರಿನ ಸರ್ಕಾರಿ ಮರಾಠಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಬಳಿಕ ಸೌಂದಲಗಾ ಸರ್ಕಾರಿ ಮರಾಠಿ ಪ್ರೌಢ ಶಾಲೆಯಲ್ಲಿ ಓದಿದ ಇವರು, ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. 1994ರಲ್ಲಿ ಇಸ್ರೋದಲ್ಲಿ ತಾಂತ್ರಿಕ ಸಲಹೆಗಾರರಾಗಿ ಸೇರಿಕೊಳ್ಳುತ್ತಾರೆ. ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಲೇ ಬಿ.ಇ, ಎಂ.ಟೆಕ್ ಪದವಿಯನ್ನೂ ಪಡೆಯುತ್ತಾರೆ. ಪ್ರಸ್ತುತ ಇವರು ಇಸ್ರೋದ ಸ್ಯಾಟಲೈಟ್ ಸೆನ್ಸಾರ್ ತಯಾರಿಕಾ ಘಟಕದಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಚಂದ್ರಯಾನ – 2ರಲ್ಲಿಯೂ ಸೇವೆಸಲ್ಲಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಈ ಸಾಧನೆಗೆ ಕುಟುಂಬದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಕೇರಬಾರವರ ಅತ್ತಿಗೆ ಈ ಕುರಿತು ಪ್ರತಿಕ್ರಿಯಿಸಿ, ‘ನಿನ್ನೆ ನಾವು ಚಂದ್ರಯಾನ ಯಶಸ್ವಿಯಾಗಲೆಂದು ದೇವರಲ್ಲಿ ಪಾರ್ಥಿಸುತ್ತಿದ್ವಿ, ಚಂದ್ರಯಾನ -3 ಯಸ್ವಿಯಾಗಿದ್ದು ಭಾರತದ ಪಾಲಿಗೆ ಹೆಮ್ಮೆಯ ವಿಚಾರ, ಅದರಲ್ಲಿಯೂ ನನ್ನ ಮೈದುನ ಈ ಐತಿಹಾಸಿಕ ಯೋಜನೆಯಲ್ಲಿ ಪಾಲುದಾರನಾಗಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ.’ ಎಂದಿದ್ದಾರೆ.

ಗ್ರಾಮಸ್ಥರೆಲ್ಲರೂ ಚಂದ್ರಯಾನದ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗ್ರಾಮದ ಮಲ್ಲಿಕಾರ್ಜುನ ದೇವರ ಆರ್ಶಿವಾದಿಂದ ಪವಿತ್ರ ಶ್ರಾವಣ ಮಾಸದಲ್ಲಿ ಚಂದ್ರನಲ್ಲಿಗೆ ಪ್ರವೇಶವಾಗಿದೆ. ಇದರಲ್ಲಿ ಊರಿನ ಇಬ್ಬರು ವಿಜ್ಞಾನಿಗಳು ಭಾಗಿಯಾಗಿರುವುದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ. ಕೇರಬಾರವರು ಬಡ ಕುಟುಂಬದಲ್ಲಿ ಜನಿಸಿದರೂ, ಈಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದು, ಸಾಧಿಸುವ ಛಲವಿದ್ದರೆ ಎಲ್ಲವೂ ಸಾಧ್ಯ ಎಂದು ಸಾಬೀತುಪಡಿಸಿದ್ದಾರೆ.

ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ ಮತ್ತೋರ್ವ ವಿಜ್ಞಾನಿ ಚಿದಾನಂದ ಮಗದುಮ್ ಕೂಡ ಇಸ್ರೋದಲ್ಲಿ 2001ರಿಂದ ಸೇವೆ ಸಲ್ಲಿಸುತ್ತಿದ್ದು, ಚಂದ್ರಯಾನ-3 ರಲ್ಲಿಯೂ ಭಾಗಿಯಾಗಿಯಾಗಿದ್ದಾರೆ. ಪ್ರಸ್ತುತ ಇವರು ತಿರುವನಂತಪುರಂನ ವಿಕ್ರಮ್ ಸಾರಾಬಾಯಿ ಸ್ಪೇಸ್ ಸೆಂಟರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕೂಡ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರು. ನಿಪ್ಪಾಣಿಯ ಕೆಎಲ್ಇ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಮುಗಿಸಿ ದಾವಣಗೆರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ.

ಎಸ್-200 ಬೂಸ್ಟರ್ ತಯಾರಿಕಾ ವಿಭಾಗದಲ್ಲಿ ಮುಖ್ಯ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ಇವರು, ಚಂದ್ರಯಾನ-3 ಲಾಂಚ್ ವೆಹಿಕಲ್ ನ ಎಸ್-200 ಬೂಸ್ಟರ್ ತಯಾರಿಕೆಯಲ್ಲಿ ಮುಖ್ಯಪಾತ್ರವಹಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ 3 ಯಶಸ್ವಿಯಾದರೆ ನಮಗೂ ನಿಮಗೂ ಏನು ಲಾಭ, ಸರಳ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಿ

ಚಿದಾನಂದರವರ ಸಾಧನೆಗೆ ಸಹೋದರ ಚೇತನ್ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ. ಊರಿನ ಇಬ್ಬರು ವಿಜ್ಞಾನಿಗಳು ಮೂನ್ ಮಿಷನ್​ನಲ್ಲಿ ಭಾಗಿಯಾಗಿರುವುದು ಸಂತಸದ ವಿಚಾರ, ಈ ಕುರಿತು ಹಲವರು ಫೋನ್ ಮಾಡಿ ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂದು ಚೇತನ್ ಹೇಳಿದ್ದಾರೆ.

40 ದಿನಗಳ ಕಾಲ ಚಂದ್ರನೆಡೆಗೆ ಪ್ರಯಾಣಸುತ್ತಿದ್ದ ವಿಕ್ರಂ ಲ್ಯಾಂಡರ್ ನಿನ್ನೆ (ಆಗಸ್ಟ್ 23) ಸಂಜೆ 6.04ಕ್ಕೆ ಲ್ಯಾಂಡ್ ಆಗಿತ್ತು. ಈ ಮೂಲಕ ಚಂದ್ರನ ಮೇಲೆ ಲ್ಯಾಂಡ್ ಆಗಿರುವ ನಾಲ್ಕನೇ ದೇಶ ಭಾರತ ಹಾಗೂ ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಭಾರತ ಎನಿಸಿಕೊಂಡಿದೆ. ಚಂದ್ರನ ಮೂರು ಕಮಾಂಡ್ ಸೆಂಟರ್ ಗಳು ಮತ್ತು ವಿಕ್ರಮ್ ಲ್ಯಾಂಡರ್ ನ್ನು ಸಂಪೂರ್ಣವಾಗಿ ಬೆಂಗಳೂರಿನಿಂದಲೇ ನಿಯಂತ್ರಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Thu, 24 August 23