ಬೆಳಗಾವಿ: ಕರಾಳ ದಿನ ಆಚರಣೆಗೆ ಅನುಮತಿ ಇಲ್ಲ, ಎಂಇಎಸ್​ಗೆ ಡಿಸಿ ಖಡಕ್​ ಎಚ್ಚರಿಕೆ

| Updated By: ವಿವೇಕ ಬಿರಾದಾರ

Updated on: Oct 09, 2024 | 10:27 AM

ನವೆಂಬರ್​ 1 ಕರ್ನಾಟಕ ರಾಜ್ಯೋತ್ಸವ ದಿನ ಕರಾಳ ದಿನ ಆಚರಿಸಲು ಎಂಇಎಸ್​ಗೆ ಅನುಮತಿ ನೀಡುವುದಿಲ್ಲ. ಒಂದು ವೇಳೆ ಆಚರಿಸಲು ಮುಂದಾದರೆ ಎಂಇಎಸ್​ ಪುಂಡರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.

ಬೆಳಗಾವಿ, ಅಕ್ಟೋಬರ್​​ 09: ಕರ್ನಾಟಕ ರಾಜ್ಯೋತ್ಸವ ದಿನ (ನವೆಂಬರ್​ 1) ಕರಾಳ ದಿನ ಆಚರಿಸಲು ಅನುಮತಿ ಕೋರಿ ಮಹರಾಷ್ಟ್ರ ಏಕೀಕರಣ ಸಮಿತಿ (MES​) ಮುಖಂಡರಿಗೆ ಅನುಮತಿ ನೀಡುವುದಿಲ್ಲ ಎಂದು ಬೆಳಗಾವಿ (Belagavi) ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.

ರಾಜ್ಯೋತ್ಸವ ಹಿನ್ನೆಲೆ ಕನ್ನಡ ಪರ ಸಂಘಟನೆಗಳ ಜತೆ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಮಂಗಳವಾರ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಎಂಇಎಸ್​ ಪುಂಡರು ಕರಾಳ ದಿನ ಆಚರಿಸುವ ವಿಚಾರವೂ ಪ್ರಸ್ತಾಪವಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​, ಬೆಳಗಾವಿಯಲ್ಲಿ ಕರಾಳ‌ ದಿನ ಆಚರಣೆಗೆ ಅವಕಾಶ ಕೊಡುವುದಿಲ್ಲ. ಕರಾಳ‌ ದಿನ ಆಚರಣೆಗೆ ಮುಂದಾದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ “ಕೈ”ಗೆ ಎಂಇಎಸ್​ ಸಾಥ್​​; ಬಿಜೆಪಿ ಕಾರ್ಪೊರೇಟರ್​​​ಗೆ ಜೀವ ಬೆದರಿಕೆ

ಬೆಳಗಾವಿ ಜಿಲ್ಲಾಡಳಿತದ ದಿಟ್ಟತನಕ್ಕೆ ಕನ್ನಡ ಹೋರಾಟಗಾರರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಈ ಬಾರಿ ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಒಟ್ಟಿಗೆ ಬಂದಿದ್ದರಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

1956ರಲ್ಲಿ ರಾಜ್ಯಗಳ ಪುನರ್​ ವಿಂಗಡಣೆ ಆದ ಬಳಿಕ ರಾಜ್ಯದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸಲು ಎಂಇಎಸ್​ ಹುಟ್ಟಿಕೊಂಡಿತು. ಕರ್ನಾಟಕ ರಾಜ್ಯ ಉದಯವಾದ ದಿನದಂದೇ ಕರಾಳ ದಿನ ಆಚರಿಸುತ್ತ ಬರಲಾಗಿದೆ. ದಶಕಗಳ ಹಿಂದೆ ಬೃಹತ್​ ಪ್ರಮಾಣದ ರ್ಯಾಲಿ ನಡೆಯುತ್ತಿತ್ತು. ಆದರೆ, ಈಗ ಒಂದು ಜಾಗಕ್ಕೆ ಮಾತ್ರ ಸೀಮಿತಗೊಂಡು ಆಚರಿಸುತ್ತ ಬಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:18 am, Wed, 9 October 24