ಕೊನೆಗೂ ಲ್ಯಾಂಡ್ ಆದ ವಿಮಾನ: ಕಠ್ಮಂಡು ತಲುಪಿ ನಿಟ್ಟುಸಿರು ಬಿಟ್ಟ 180 ಪ್ರಯಾಣಿಕರು
ಮೂರು ದಿನಗಳ ಪರದಾಟದ ನಂತರ ಪ್ರಯಾಣಿಕರು ಇಂದು ಕಠ್ಮಂಡು ತಲುಪಿದ್ದಾರೆ. ಆ ಮೂಲಕ ಕೊನೆಗೂ ಯಶಸ್ವಿಯಾಗಿ ನೇಪಾಳ ಸೇರಿದ 180 ಜನರು ನಿಟ್ಟುಸಿರುಬಿಟ್ಟಿದ್ದಾರೆ. ಟಿವಿ9 ವರದಿ ಬಳಿಕ ಎಚ್ಚೆತ್ತ ಏರ್ ಇಂಡಿಯಾ, ಅಂತಿಮವಾಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಠ್ಮಂಡು ತಲುಪಿಸಿದೆ. ಅಷ್ಟಕ್ಕೂ ನಡೆದದ್ದೇನು?

ದೇವನಹಳ್ಳಿ, ಫೆಬ್ರವರಿ 28: ಮೂರು ಗಂಟೆಗಳಲ್ಲಿ ಮುಗಿಯುವ ಪ್ರವಾಸಕ್ಕೆ ಮೂರು ರಾಜ್ಯಗಳನ್ನು ಸುತ್ತಾಡಿಸಿದ್ದರು. ಮೂರು ನಿಮಿಷದ ಲ್ಯಾಂಡಿಂಗ್ಗೆ ಮೂರು ದಿನಗಳ ಕಾಲ ವಿಮಾನದಲ್ಲೇ ಕೂರಿಸಿ ಸಿಬ್ಬಂದಿ ಸೂಕ್ತ ಮಾಹಿತಿ ನೀಡದೆ ಪರದಾಡಿಸಿದರು. ಆದರೆ ಇದೀಗ ಎಲ್ಲದಕ್ಕೂ ಬ್ರೇಕ್ ಬಿದ್ದಿದ್ದು, ಮೂರು ದಿನಗಳ ಬಳಿಕ ನೂರಾರಕ್ಕೂ ಹೆಚ್ಚು ಪ್ರಯಾಣಿಕರು (passenger) ಸುರಕ್ಷಿತವಾಗಿ ಕಠ್ಮಂಡು ತಲುಪಿ ನಿಟ್ಟುಸಿರು ಬಿಟ್ಟಿದ್ದಾರೆ.
ಸುರಕ್ಷಿತವಾಗಿ ಗುರಿ ತಲುಪಿದ ಪ್ರಯಾಣಿಕರು
ಇತ್ತೀಚೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ ಭುಗಿಲೆದ್ದಿತ್ತು. ಒಂದಲ್ಲ, ಎರಡಲ್ಲ ಮೂರು ದಿನ ಏರ್ಪೋರ್ಟ್ಗಳಲ್ಲೆ ಸುತ್ತಾಡಿಸುತ್ತಿದ್ದಾರೆ ಅಂತ ಟರ್ಮಿನಲ್ ಒಳಗಡೆ ಪ್ರತಿಭಟನೆ ನಡೆಸಿ ಅಸಮಾಧಾನ ಹೊರಹಾಕಿದ್ದರು. ಜೊತೆಗೆ ಈ ಬಗ್ಗೆ ಟಿವಿ9ಗೆ ಪ್ರವಾಸಿಗರ ಪರದಾಟದ ಬಗ್ಗೆ ವಿಸ್ಕ್ರತ ವರದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಗುರಿ ತಲುಪಿಸಿದೆ.
ಇದನ್ನೂ ಓದಿ: ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು
ಅಂದಹಾಗೆ ಗುರುವಾರ ಬೆಳಗ್ಗೆಯಿಂದ ಇಂದು ಮುಂಜಾನೆವರೆಗೂ ಕೆಂಪೇಗೌಡ ಏರ್ಪೋರ್ಟ್ನಿಂದ ನೇಪಾಳಕ್ಕೆ ಅಂತ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಹೊರಟಿದ್ದ ಪ್ರಯಾಣಿಕರು ಕಠ್ಮಂಡು ತಲುಪಿದ್ದರು. ಆದರೆ ವಿಮಾನ ಲ್ಯಾಂಡ್ ಆಗದ ಕಾರಣ ವಾಪಸ್ ಬಂದಿದ್ದರು. ಎರೆಡೆರಡು ದಿನ ಬೆಂಗಳೂರು ಟು ಕಠ್ಮಂಡು ಅಂತ ಮೂರು-ನಾಲ್ಕು ಗಂಟೆ ಪ್ರವಾಸ ಮಾಡಿದರು ನಿಗದಿತ ಸ್ಥಳದಲ್ಲಿ ಇಳಿಯದೆ ವಾರಣಾಸಿ, ಲಕ್ನೋ ಏರ್ಪೋರ್ಟ್ಗಳಲ್ಲಿ ಕಾಲಹರಣ ಮಾಡಿ ಬಂದಿದ್ದರು. ಹೀಗಾಗಿ ಕಳೆದ ಎರಡು ದಿನಗಳಿಂದ ಊಟ, ನೀರು ಇಲ್ಲದೆ ಪ್ರಯಾಣಿಕರು ನರಕಯಾತನೆ ಅನುಭವಿಸಿದ್ದಾರೆ.
ಟಿವಿ9 ವರದಿ ಪ್ರಸಾರ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆ ಎಚ್ಚೆತ್ತುಕೊಂಡಿದೆ. ಇಂದು ಬೆಳಗ್ಗೆ 10:30ಕ್ಕೆ 180 ಜನ ಪ್ರಯಾಣಿಕರನ್ನ ಹೊತ್ತು ಕೆಂಪೇಗೌಡ ಏರ್ಪೋರ್ಟ್ನಿಂದ ತೆರಳಿದ ವಿಮಾನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊನೆಗೂ ಕಠ್ಮಂಡುನಲ್ಲಿ ಲ್ಯಾಂಡ್ ಆಗಿದೆ.
ಕಳೆದ ಎರಡು ದಿನಗಳಿಂದ ಕಠ್ಮಂಡುದಲ್ಲಿ ಲ್ಯಾಂಡ್ ಆಗದೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯ 2 ವಿಮಾನಗಳು ಸುತ್ತಾಡಿ ಸುತ್ತಾಡಿ ವಾಪಸ್ ಬಂದಿದ್ದ ಕಾರಣ ಕೆಲವರು ಪ್ರವಾಸ ರದ್ದು ಮಾಡಿಕೊಂಡು ವಾಪಸ್ ಹೋಗಿದ್ದರು. ಹೀಗಾಗಿ ನೇಪಾಳಕ್ಕೆ ಹೋಗಲೆಬೇಕು ಅಂತ ಕಾದುಕುಳಿತಿದ್ದ 180 ಜನರನ್ನ ಒಂದೇ ವಿಮಾನದಲ್ಲಿ ಇಂದು ಬೆಳಗ್ಗೆ ಕೆಐಎಬಿಯಿಂದ ಕಠ್ಮಂಡುಗೆ ರವಾನಿಸಲಾಗಿದೆ. ಇಂದು ತೆರಳಿದ ವಿಮಾನ ಕೂಡ ಕೂಡಲೇ ಲ್ಯಾಂಡ್ ಆಗದೆ ಕೆಲಕಾಲ ಕಠ್ಮಂಡುನಲ್ಲಿ ಆಗಸದಲ್ಲೇ 2 ರೌಂಡ್ ಹಾಕಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿ ಬಂತು ಬೃಹದಾಕಾರದ ಬಲೂನ್!
ಇನ್ನು ವಿಮಾನ ರೌಂಡ್ ಹಾಕ್ತಿದ್ದಂತೆ ಇಂದು ಸಹ ಲ್ಯಾಂಡ್ ಆಗುತ್ತೋ, ಇಲ್ವೋ ಅಂತ ಪ್ರಯಾಣಿಕರು ಆತಂಕಗೊಂಡಿದ್ದರು. ಅಷ್ಟರಲ್ಲೇ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಮೂರು ದಿನಗಳಿಂದ ಫ್ಲೈಟ್ ಜರ್ನಿ ಮಾಡಿ ಮಾಡಿ ಸುಸ್ತಾಗಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ಟಾರೆ ಹಣ ಖರ್ಚಾದರೂ ಪರವಾಗಿಲ್ಲ ಸಮಯಕ್ಕೆ ಸರಿಯಾಗಿ ಹೋಗುತ್ತೇವೆ ಅಂತ ಬಂದಿದ್ದ 180 ಜನ ಪ್ರಯಾಣಿಕರು ಕೊನೆಗೂ ಕಠ್ಮಂಡುವನ್ನ ಯಶಸ್ವಿಯಾಗಿ ತಲುಪಿದ್ದಾರೆ. ಮೂರು ಗಂಟೆಯ ಅವಧಿಯ ಪ್ರಯಾಣವನ್ನ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯ ವಿಮಾನ ಲ್ಯಾಂಡ್ ಆಗಲು ಮೂರು ದಿನಗಳವರೆಗೂ ತೆಗೆದುಕೊಂಡು ಬಂದಿದ್ದು ಏಕೆ ಅನ್ನೋ ಪ್ರಶ್ನೆ ಪ್ರಶ್ನೆಯಾಗೆ ಉಳಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.