ಪ್ರೀತಿ ಹೆಸರಲ್ಲಿ ಅತ್ಯಾಚಾರಕ್ಕೆ ಪ್ಲ್ಯಾನ್​: ಬಾಲಕಿ ಕರೆದೊಯ್ಯುತ್ತಿದ್ದ ವೇಳೆ ನಡೆದಿದ್ದು ದುರಂತ

ಬೈಕ್​ ಅಪಘಾತದಲ್ಲಿ ಬಾಲಕಿ ದುರ್ಮರಣ ಹೊಂದಿರುವ ಘಟನೆ ಹೊಸಕೋಟೆ ಪಟ್ಟಣ ಬಳಿ ನಡೆದಿದೆ. ಒಂದೇ ಬೈಕ್​ನಲ್ಲಿ ಮೂವರು ಪ್ರಯಾಣಿಸುವಾಗ ಅಪಘಾತ ನಡೆದಿದ್ದು, ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಬಲವಂತವಾಗಿ ಕರೆದೊಯ್ಯಲಾಗುತ್ತಿತ್ತು ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದೆ. ಘಟನೆ ಸಂಬಂಧ 4 ಜನ ಆರೋಪಿಗಳನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಪ್ರೀತಿ ಹೆಸರಲ್ಲಿ ಅತ್ಯಾಚಾರಕ್ಕೆ ಪ್ಲ್ಯಾನ್​: ಬಾಲಕಿ ಕರೆದೊಯ್ಯುತ್ತಿದ್ದ ವೇಳೆ ನಡೆದಿದ್ದು ದುರಂತ
ಸಾಂದರ್ಭಿಕ ಚಿತ್ರ
Updated By: ಪ್ರಸನ್ನ ಹೆಗಡೆ

Updated on: Oct 28, 2025 | 3:19 PM

ಬೆಂಗಳೂರು, ಅಕ್ಟೋಬರ್​ 28: ಅತ್ಯಾಚಾರ ಎಸಗುವ ಉದ್ದೇಶದಿಂದ ಅಪ್ರಾಪ್ತೆಯನ್ನು ಬಲವಂತವಾಗಿ ಕರೆದೊಯ್ಯುವ ವೇಳೆ ಡಿವೈಡರ್​ಗೆ ಬೈಕ್​ ಡಿಕ್ಕಿಯಾಗಿ  ಬಾಲಕಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪಟ್ಟಣ ಬಳಿ ನಡೆದಿದೆ. ಪ್ರೀತಿ ಹೆಸರಿನಲ್ಲಿ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿ ಹಿಂದೆ ಬಿದ್ದಿದ್ದ ಅಜಯ್​ ಎಂಬಾತ ತನ್ನ ಸಹಚರರ ಜೊತೆಗೂಡಿ ಬಾಲಕಿಯನ್ನ ಲೈಂಗಿಕವಾಗಿ ಬಳಸಿಕೊಳ್ಳಲು ಕರೆದೊಯ್ಯುತ್ತಿದ್ದ ಎನ್ನಲಾಗಿದೆ.

ಆರೋಪಿಗಳು ಒಟ್ಟು 2 ಬೈಕ್​ನಲ್ಲಿ ತೆರಳಿದ್ದು, ಆ ಪೈಕಿ ಒಂದು ಬೈಕ್​ನಲ್ಲಿ ಅಜಯ್​, ಬಾಲಕಿ ಮತ್ತು ಇನ್ನೊಬ್ಬ ಇದ್ದ ಎನ್ನಲಾಗಿದೆ. ಹೊಸಕೋಟೆ ಮಾರ್ಗವಾಗಿ ಬಾಲಕಿಯನ್ನು ಕರೆದೊಯ್ಯುತ್ತಿದ್ದ ವೇಳೆ ಅಪಘಾತ ನಡೆದಿದ್ದು, ಈ ವೇಳೆ ಬಾಲಕಿ ಸಾವನ್ನಪ್ಪಿದ್ದಾಳೆ. ಬೈಕ್​ನಲ್ಲಿದ್ದ ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಟೋಬರ್​​ 24ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಶಾಲೆಗೆ ಹೋದ ಬಾಲಕಿ ಮನೆಗೆ ವಾಪಾಸ್ ಬಾರದೆ ಇದ್ದಾಗ ಪೋಷಕರು ಕಂಗಾಲಾಗಿದ್ದು, ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಅದೇ ದಿನ ಸಂಜೆ ಹೊಸಕೋಟೆ ಪೊಲೀಸರಿಂದ ಬಾಲಕಿ ಪೋಷಕರಿಗೆ ಕರೆ ಬಂದಿದ್ದು, ನಿಮ್ಮ ಮಗಳು ಅಪಘಾತದಲ್ಲಿ ಮೃತಪಟ್ಟಿದ್ದಾಳೆಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ರೆಜಿಲ್ ಮಾಡೆಲ್​​​ಗೆ ಲೈಂಗಿಕ ಕಿರುಕುಳ: ಆಗಿದ್ದೇನು?

ಬಲವಂತವಾಗಿ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನ ಆರೋಪ ಹಿನ್ನಲೆ ಅಜಯ್ ಅಲಿಯಾಸ್ ಮನೋಜ್, ಇರ್ಫಾನ್, ಮುಬಾರಕ್ ಸೇರಿ ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಅಪಹರಣ ಹಾಗೂ ಪೋಕ್ಸೋ ಪ್ರಕರಣದಡಿ ಆರೋಪಿಗಳನ್ನ ಅರೆಸ್ಟ್​ ಮಾಡಲಾಗಿದ್ದು, ಬಂಧಿತರನ್ನ ಜೈಲಿಗೆ ಅಟ್ಟಲಾಗಿದೆ. ಬದುಕಿ ಬಾಳಬೇಕಿದ್ದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ತಾಯಿಗೆ ಬೈದಿದ್ದಕ್ಕೆ ಸಂಬಂಧಿ ಯುವಕನ ಹತ್ಯೆ

ತಾಯಿಗೆ ಬೈದಿದ್ದಾನೆ ಎಂಬ ಕಾರಣಕ್ಕೆ ಸಂಬಂಧಿ ಯುವಕನನ್ನ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದ ರಾಮಚಂದ್ರಪ್ಪ ಲೇಔಟ್​ನಲ್ಲಿ ನಡೆದಿದೆ. ಅವಿನಾಶ್​(36) ಮೃತ ಯುವಕನಾಗಿದ್ದು, ಕುಡಿದು ಬಂದು ಅವಾಚ್ಯ ಶಬ್ದದಿಂದ ಬೈದಿದ್ದಲ್ಲದೆ ಕಬ್ಬಿಣದ ರಾಡ್​ನಿಂದ ಹೊಡೆದು ಕಾರ್ತಿಕ್​ ಎಂಬಾತ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.