ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ರಕ್ಷಿಸಲು ಎಐ, ಐ‌ಒಟಿ! ಜಲಮಂಡಳಿ ಹೊಸ ಯೋಜನೆ

| Updated By: ಗಣಪತಿ ಶರ್ಮ

Updated on: Mar 26, 2024 | 6:52 AM

ನಗರದಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಲ ಮಂಡಳಿ, ಇದೀಗ ಕೊಳವೆ ಬಾವಿಗಳ ನೀರಿನ ಮಟ್ಟ ರಕ್ಷಣೆಗೆ ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನದ ಮೊರೆ ಹೋಗಿದೆ. ಕಚೇರಿಯಲ್ಲಿ ಕುಳಿತುಕೊಂಡೇ ಬೋರ್​ವೆಲ್​​ಗಳ ನೀರಿನ ಮಟ್ಟದ ಮೇಲೆ ನಿಗಾ ಇಡಲು ಯೋಜನೆ ರೂಪಿಸಿದೆ. ಅದೇನೆಂಬ ಮಾಹಿತಿ ಇಲ್ಲಿದೆ.

ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ರಕ್ಷಿಸಲು ಎಐ, ಐ‌ಒಟಿ! ಜಲಮಂಡಳಿ ಹೊಸ ಯೋಜನೆ
ಜಲಮಂಡಳಿ
Follow us on

ಬೆಂಗಳೂರು, ಮಾರ್ಚ್​ 26: ಮಳೆ ಸಮರ್ಪಕವಾಗದ ಹಿನ್ನಲೆಯಲ್ಲಿ ಬೆಂಗಳೂರು (Bengaluru) ನಗರದಲ್ಲಿ ಅಂತರ್ಜಲಮಟ್ಟ (Ground Water) ಕುಸಿದಿದ್ದು ಬಾವಿ, ಬೋರ್‌ವೆಲ್, ಕೆರೆಗಳು ಬತ್ತುತ್ತಿವೆ. ಹೀಗಾಗಿ ಇರುವಂತಹ ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟವನ್ನು ಕಾಪಾಡಿಕೊಳ್ಳಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯೋಜನೆ ರೂಪಿಸಿದೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ನಡುವೆ ಬೇಸಿಗೆ ಆರಂಭದಲ್ಲೇ ರಾಜಧಾನಿಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ನಗರದಾದ್ಯಂತ ಒಟ್ಟು‌ 14 ಸಾವಿರಕ್ಕೂ ಅಧಿಕ ಸರ್ಕಾರಿ ಬೋರ್‌ವೆಲ್‌ಗಳಿವೆ. ಆ ಪೈಕಿ ಈಗಾಗಲೇ 6900 ಬೋರ್‌ವೆಲ್‌ಗಳ ಅಂತರ್ಜಲಮಟ್ಟ ಕುಸಿತ ಕಂಡಿದೆ. ಹೀಗಾಗಿ ಇರುವ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ರಕ್ಷಿಸಲು ಜಲಮಂಡಳಿ ಹೊಸ ಯೋಜನೆ ಹಾಕಿಕೊಂಡಿದೆ. ಕೃತಕ ಬುದ್ಧಿಮತ್ತೆ ಹಾಗೂ ಐ‌ಒಟಿ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಈ ಮೂಲಕ ಬೋರ್‌ವೆಲ್‌ಗಳ ಅಂತರ್ಜಲಮಟ್ಟ ಕಾಪಾಡಿಕೊಳ್ಳಲು ಕ್ರಮ ಕೈಗೊಂಡಿದೆ.

ಜಲಮಂಡಳಿಯ ಈ ಹೊಸ ತಂತ್ರಜ್ಞಾನ ಅಳವಡಿಕೆಯು ಅಂತರ್ಜಲಮಟ್ಟ ರಕ್ಷಣೆಗೆ ಎಷ್ಟು ನೀರು ಬಳಸಬೇಕು ಎಂಬುದನ್ನು ತಿಳಿಸುತ್ತದೆ. ಅಲ್ಲದೆ ಇದರಿಂದ ಪಂಪ್‌ಸೆಟ್‌ಗಳು ಕೂಡ ಹಾಳಾಗದಂತೆ ತಡೆಯಬಹುದು. ಈ ಕೆಲಸಗಳನ್ನು ಕಚೇರಿಯಲ್ಲಿಯೇ ಕುಳಿತು ಕಂಪ್ಯೂಟರ್ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ. ನಗರದ ಚಿನ್ನಪ್ಪ ಗಾರ್ಡನ್ ಬಳಿಯ ಗಂಗಾಭವಾನಿ ಬಡಾವಣೆಯಲ್ಲಿ ಪ್ರಾಯೋಗಿಕವಾಗಿ ಬೋರ್‌ವೆಲ್‌ಗೆ ಎಐ ಹಾಗೂ ಐ‌ಒಟಿ ಟೆಕ್ನಾಲಜಿ ಯಂತ್ರ ಅಳವಡಿಕೆ ಮಾಡಲಾಗಿದೆ.

ನೀರಿನ ಉಳಿತಾಯಕ್ಕೆ ಜಲ ಮಂಡಳಿ ಒಂದಾದ ಮೇಲೊಂದು ನಿಯಮಗಳನ್ನು ಜಾರಿಗೆ ತರುತ್ತಿದೆ. ಇದೀಗ ಬೋರ್‌ವೆಲ್‌ಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮೂಲಕ ಅಂತರ್ಜಲಮಟ್ಟ ರಕ್ಷಣೆಗೆ ಮುಂದಾಗಿದೆ. ಇದು ಎಷ್ಟರ ಮಟ್ಟಿಗೆ ಪ್ರಯೋಜನವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

ಇದನ್ನೂ ಓದಿ: ಬೆಂಗಳೂರು: ಸಾರ್ವಜನಿಕರಿಗೆ ಉಚಿತವಾಗಿ ಕೊಡಬೇಕಿದ್ದ ನೀರು ಹೋಟೆಲ್‌ಗಳಿಗೆ ಮಾರಾಟ; ಸಾರ್ವಜನಿಕರ ಆಕ್ರೋಶ

ಜಲ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿ ಕುಡಿಯಲು ಯೋಗ್ಯ ನೀರನ್ನು ಅನ್ಯ ಉದ್ದೇಶಗಳಿಗೆ ಒಳಸಿದ ಹಲವು ಮನೆಗಳಿಗೆ ಕಳೆದ ಕೆಲವು ದಿನಗಳಲ್ಲಿ ದಂಡ ವಿಧಿಸಲಾಗಿತ್ತು. ಸುಮಾರು 1.10 ಲಕ್ಷ ರೂಪಾಯಿ ದಂಡ ಈವರೆಗೆ ಸಂಗ್ರಹಿಸಲಾಗಿದೆ. ಕುಡಿಯಲು ಯೋಗ್ಯ ನೀರನ್ನು ಕಾರು ತೊಳೆಯುವುದು, ಉದ್ಯಾನಗಳಿಗೆ ಬಳಸುವುದು, ನಿರ್ಮಾಣ ಕಾಮಗಾರಿಗೆ ಬಳಸುವುದನ್ನು ಮಂಡಳಿ ನಿಷೇಧಿಸಿದೆ. ಈ ನಿಟ್ಟಿನಲ್ಲಿ ದೂರುಗಳನ್ನು ಸಲ್ಲಿಸಲು ಸಹಾಯವಾಣಿಯನ್ನೂ ತೆರೆಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ