ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದವರಿಗೆ ಶಾಕ್: ಒಂದೇ ತಿಂಗಳಲ್ಲಿ 7 ಲಕ್ಷ ರೂ. ದಂಡ ಸಂಗ್ರಹಿಸಿದ BMTC

ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಂದ ದಂಡ ವಸೂಲಿ ಮಾಡುವ ಮೂಲಕ ಬಿಎಂಟಿಸಿ ಮತ್ತೆ ಶಾಕ್​ ನೀಡಿದ್ದು, ಜನವರಿ ತಿಂಗಳಲ್ಲಿ ಒಟ್ಟು 7,09,390 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದವರಿಗೆ ಶಾಕ್: ಒಂದೇ ತಿಂಗಳಲ್ಲಿ 7 ಲಕ್ಷ ರೂ. ದಂಡ ಸಂಗ್ರಹಿಸಿದ BMTC
ಪ್ರಾತಿನಿಧಿಕ ಚಿತ್ರ
Image Credit source: deccanherald.com

Updated on: Feb 22, 2023 | 4:57 PM

ಬೆಂಗಳೂರು: ಇತ್ತೀಚೆಗೆ ಹೆಚ್ಚುತ್ತಿರುವ ಇಂಧನ ಬೆಲೆಯ ಹಿನ್ನಲೆ, ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರವನ್ನ ಹೆಚ್ಚಿಸುವ ಮೂಲಕ ಬಿಎಂಟಿಸಿ (BMTC) ಪ್ರಯಾಣಿಕರಿಗೆ ಶಾಕ್​ ನೀಡಿತ್ತು. ಆದರೆ ಈಗ ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಂದ ದಂಡ ವಸೂಲಿ ಮಾಡುವ ಮೂಲಕ ಮತ್ತೆ ಶಾಕ್​ ನೀಡಿದೆ. ಬಿಎಂಟಿಸಿ ಬಸ್​ನಲ್ಲಿ ಟಿಕೆಟ್ ರಹಿತ 3,591 ಪ್ರಯಾಣಿಕರು ಪತ್ತೆಯಾಗಿದ್ದು, 16,226 ಟ್ರಿಪ್​ ತಪಾಸಣೆ ನಡೆಸಿ 6,77,190 ರೂ. ದಂಡ ವಸೂಲಿ ಮಾಡಲಾಗಿದೆ. ಜನವರಿ ತಿಂಗಳಲ್ಲಿ ಒಟ್ಟು 7,09,390 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ ದಂಡ ವಸೂಲಿ ಮಾಡಲಾಗಿದೆ. ಜೊತೆಗೆ BMTC ಬಸ್ ನಿರ್ವಾಹಕರ ವಿರುದ್ಧ 1521 ಕೇಸ್ ದಾಖಲು ಮಾಡಲಾಗಿದೆ. ಮಹಿಳೆಯರಿಗೆ ಮೀಸಲಿರುವ ಸೀಟ್​ನಲ್ಲಿ ಪುರುಷರ ಪ್ರಯಾಣ ಹಿನ್ನೆಲೆ 322 ಪುರುಷ ಪ್ರಯಾಣಿಕರಿಂದ 32,200 ರೂ. ದಂಡ ವಸೂಲಿ ಮಾಡುವ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಬಿಗ್​ ಶಾಕ್ ನೀಡಿದೆ.​ ಇನ್ಮುಂದೆ ಮಹಿಳಾ ಆಸನಗಳಲ್ಲಿ ಕುಳಿತು ಪ್ರಯಾಣಿಸದಿರಲು ಸೂಚನೆ ಕೂಡ ನೀಡಲಾಗಿದೆ.

ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್​, ದಿನದ ಪಾಸು, ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವುದು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: BMTC: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕೊಡುಗೆ, ವೋಲ್ವೊ ಸೇರಿ ಎಲ್ಲ ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣ ಉಚಿತ

ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿವೆ ಬಿಎಂಟಿಸಿ ಬಸ್​ಗಳು 

ಕೇವಲ ಬೆಂಗಳೂರು ನಗರ, ಬೆಂ.ಗ್ರಾಮಾಂತರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್​​ಗಳು ಇನ್ನು ಮುಂದೆ ಚಿಕ್ಕಬಳ್ಳಾಪುರಕ್ಕೂ ಸಂಚರಿಸುವ ಮೂಲಕ ಬಿಎಂಟಿಸಿ ವ್ಯಾಪ್ತಿಯನ್ನ ಸರ್ಕಾರ ವಿಸ್ತರಣೆ ಮಾಡಿದೆ. ಇತ್ತೀಚೆಗೆ ನಡೆದ ಬಿಎಂಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದ್ದು, ಚಿಕ್ಕಬಳ್ಳಾಪುರ ಜನರ ಬೇಡಿಕೆಗೆ ಸ್ಪಂದಿಸಿ, BMTC ಬೋರ್ಡ್ ಅನುಮತಿ ನೀಡುವ ಮೂಲಕ ಪ್ರಯಾಣಿಕರಿಗೆ ಗುಡ್​ನ್ಯೂಸ್​ ನೀಡಿದೆ.

ಇದನ್ನೂ ಓದಿ: BMTC Driver: ಬಿಎಂಟಿಸಿ ಎಂಡಿಯನ್ನು ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಪತ್ರ ಬರೆದ ಬಸ್ ಚಾಲಕ

ಹೊಸ ವರ್ಷದ ಮೊದಲ ವಾರದಿಂದಲೇ ಬಿಎಂಟಿಸಿ ಪ್ರಯಾಣಿಕರಿಗೆ ನಿರಾಸೆ ಮೂಡಿಸಿದ್ದು, ಬಿಎಂಟಿಸಿ ಸಂಸ್ಥೆಯ ಆರ್ಥಿಕ ನಷ್ಟ ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿತ್ತು, ಇದರ ಜೊತೆಗೆ ಮಾಸಿಕ ಪಾಸ್ ತೆಗೆದುಕೊಂಡವರಿಗೆ ಮತ್ತೊಂದು ಶಾಕ್ ನೀಡಿತ್ತು. ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ಪಾಸ್​ ಬಳಸಿ ಉಚಿತ ಪ್ರಯಾಣ ಮಾಡುವಂತಿಲ್ಲ ಎಂದು ಹೇಳಿದ್ದು, ಇದೀಗ ತನ್ನ ವ್ಯಾಪ್ತಿಯನ್ನ ವಿಸ್ತರಿಸುವ ಮೂಲಕ ಬಹುದಿನಗಳ ಚಿಕ್ಕಬಳ್ಳಾಪುರ ಜನರ ಬೇಡಿಕೆಗೆ ಸಮ್ಮತಿಸಿದೆ. ಇನ್ನು ಮುಂದೆ ಸಾಮಾನ್ಯ ಹಾಗೂ ಐಷಾರಾಮಿ ಬಸ್​ಗಳು ಬೆಂಗಳೂರು ಟು ಚಿಕ್ಕಬಳ್ಳಾಪುರಕ್ಕೆ ಸಂಚಾರ ಮಾಡಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:57 pm, Wed, 22 February 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us