ಚಿಲುಮೆ ಸಂಸ್ಥೆ ಜೊತೆ ಡಾ.ಅಶ್ವತ್ಥ್‌ನಾರಾಯಣ ಸಂಪರ್ಕ, ಟ್ವಿಟರ್‌ ಮೂಲಕ ಕಾಂಗ್ರೆಸ್ ಆರೋಪ

Voters Data Theft: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ಅಶ್ವಥ್ ನಾರಾಯಣ ವಿರುದ್ಧ ಕೆಪಿಸಿಸಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

ಚಿಲುಮೆ ಸಂಸ್ಥೆ ಜೊತೆ ಡಾ.ಅಶ್ವತ್ಥ್‌ನಾರಾಯಣ ಸಂಪರ್ಕ, ಟ್ವಿಟರ್‌ ಮೂಲಕ ಕಾಂಗ್ರೆಸ್ ಆರೋಪ
ಸಚಿವ ಸಿ.ಎನ್.ಅಶ್ವತ್ಥ ನಾರಾಯಣ
Updated By: ಆಯೇಷಾ ಬಾನು

Updated on: Nov 19, 2022 | 3:10 PM

ಬೆಂಗಳೂರು: ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬಹುದೊಡ್ಡ ಹಗರಣ ನಡೆದಿದೆ. ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ಅಶ್ವಥ್ ನಾರಾಯಣ(Ashwath Narayana) ವಿರುದ್ಧ ಕೆಪಿಸಿಸಿ(KPCC) ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಚಿಲುಮೆ ಸಂಸ್ಥೆಯ ಕೆಲಸಗಾರರನ್ನು ಬಂಧಿಸಿ ಕಣ್ಣೊರೆಸುವ ತಂತ್ರ ನಡೆಯುತ್ತಿದೆ. ಹಗರಣದ ಕಿಂಗ್​ಪಿನ್​ಗಳ ರಕ್ಷಣೆಗೆ ನಿಂತವರು ಯಾರು? ಚಿಲುಮೆಗೆ ಯಾರ ಒಲುಮೆ? ಎಂದು ಕೆಪಿಸಿಸಿ ಟ್ವೀಟ್ ಮಾಡಿ ಕಿಡಿಕಾರಿದೆ.

ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆಯ ಕೆಲಸಗಾರರನ್ನು ಬಂಧಿಸಿ ಕಣ್ಣೊರೆಸುತ್ತಾ ಕಿಂಗ್ ಪಿನ್‌ಗಳ ರಕ್ಷಣೆಗೆ ನೀತಿರುವವರು ಯಾರು? ಚಿಲುಮೆಗೆ ಯಾರ ಒಲುಮೆ? ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಕ್ಯಾಷ್‌ಲ್ಲೇ ಅಭಿವೃದ್ಧಿಯಾದ ಸಚಿವರೇ? ಜನಕ್ರೋಶದಿಂದ ಖಾಲಿ ಕುರ್ಚಿ ದರ್ಶನ ಪಡೆಯುತ್ತಿರುವ ಬಿಜೆಪಿ ಮತದಾರರನ್ನೇ ಖಾಲಿ ಮಾಡಿಸುವ ಹುನ್ನಾರ ನಡೆಸಿದೆ.

ಚಿಲುಮೆ ಸಂಸ್ಥೆಗೆ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯವಾಗಿದೆ. ಹಾಗೂ ಸಂಸ್ಥೆಯ ಮುಖ್ಯಸ್ಥನೊಂದಿಗೆ ಅಶ್ವಥ್ ನಾರಾಯಣ ಅವರ ಸಂಪರ್ಕವಿದೆ. ಬಿಜೆಪಿಯ ನಾಯಕರೊಂದಿಗೆ ಚಿಲುಮೆ ಸಂಸ್ಥೆಗೆ ನೇರ ಸಂಪರ್ಕವಿರುವುದು ಜಗಜ್ಜಾಹೀರು. ಹೀಗಿರುವಾಗ ಅದೇ ಸಂಸ್ಥೆಯ “ಉಚಿತ ಸೇವೆ”ಗೆ ಸರ್ಕಾರ ಒಪ್ಪಿಗೆ ಕೊಟ್ಟಿದ್ದೇಕೆ? ಎಂದು ಕೆಪಿಸಿಸಿ ಟ್ವೀಟ್ ಮೂಲಕ ಅಶ್ವಥ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಚಿಲುಮೆ ಪ್ರಕರಣ: ಲೋಕೇಶ್ ವಿರುದ್ಧ ದೂರು ದಾಖಲು, ಆರೋಪಿಯ ಬಂಧನಕ್ಕೆ ಶೋಧ ಕಾರ್ಯ

ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್ ನಾಯಕರು

ಇನ್ನು ಮತದಾರರ ಖಾಸಗಿ ಮಾಹಿತಿ ಕಳ್ಳತನ ಹಾಗೂ ದುರ್ಬಳಕೆ, ವೋಟರ್ ಐಡಿ ಪರಿಷ್ಕರಣೆ ಅಕ್ರಮ ಸಂಬಂಧ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​ ನೇತೃತ್ವದಲ್ಲಿ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಮನೋಜ್​ಕುಮಾರ್​ಗೆ ದೂರು ಸಲ್ಲಿಸಲಾಗಿದೆ. ಈ ವೇಳೆ ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್​, ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್​, ರಿಜ್ವಾನ್ ಅರ್ಷದ್, ಶಾಸಕಿ ಸೌಮ್ಯಾ ರೆಡ್ಡಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

Published On - 1:55 pm, Sat, 19 November 22